ನವದೆಹಲಿ : ಬಾರ್ಡರ್ – ಗವಾಸ್ಕರ್ ಸರಣಿಯಲ್ಲಿ 1 -3 ಅಂತರದಿಂದ ಟೀಮ್ ಇಂಡಿಯಾ ಸೋತ ನಂತರ, ಆಟಗಾರರ ಮೇಲೆ ಬಿಸಿಸಿಐ ಕುಣಿಕೆ ಬಿಗಿಗೊಳ್ಳುತ್ತಿದೆ. ಹತ್ತು ಹೊಸ ಷರತ್ತನ್ನು ಹಾಕಿರುವ ಬಿಸಿಸಿಐ, ಅಂತರಾಷ್ಟ್ರೀಯ ಪಂದ್ಯ ಇಲ್ಲದ ವೇಳೆ, ದೇಶೀಯ ಕ್ರಿಕೆಟ್ ಆಡಬೇಕೆಂದು ಸೂಚನೆಯನ್ನು ನೀಡಿತ್ತು.
ನಾಯಕ ರೋಹಿತ್ ಶರ್ಮಾ ಮುಂಬೈ ತಂಡದ ಪರವಾಗಿ ವಾಂಖೇಡೆಯಲ್ಲಿ ಪ್ರಾಕ್ಟೀಸ್ ಆರಂಭಿಸಿದ್ದರು. ಇನ್ನು, ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ರಿಷಭ್ ಪಂತ್, ತಮ್ಮತಮ್ಮ ತಂಡದ ಪರವಾಗಿ ಆಡುವುದನ್ನು ಖಚಿತ ಪಡಿಸಿದ್ದರು. ಆದರೆ, ಇಬ್ಬರು ಸ್ಟಾರ್ ಬ್ಯಾಟ್ಸಮ್ಯಾನ್ ತಮ್ಮ ನಿರ್ಧಾರವನ್ನು ಪ್ರಕಟಿಸಿರಲಿಲ್ಲ.
ಅದು ಒಂದು ವಿರಾಟ್ ಕೊಹ್ಲಿ, ಇನ್ನೊಂದು ಕೆ.ಎಲ್.ರಾಹುಲ್. ಕೊಹ್ಲಿಯು ದೆಹಲಿ ತಂಡದ ಪರವಾಗಿ ಮತ್ತು ರಾಹುಲ್, ಕರ್ನಾಟಕ ತಂಡದ ಪರವಾಗಿ ಆಡಬೇಕಿತ್ತು. ಕೊಹ್ಲಿ ಹೆಸರು, ದೆಹಲಿ ಸಂಭಾವ್ಯ ರಣಜಿ ತಂಡದಲ್ಲಿ ಇತ್ತು. ಆದರೆ, ಇಬ್ಬರು ಆಟಗಾರರು ರಣಜಿ ಪಂದ್ಯವನ್ನು ಆಡುವ ಸಾಧ್ಯತೆ ಕಮ್ಮಿ ಎಂದು ಹೇಳಲಾಗುತ್ತಿದೆ.
ಮುಂದಿನ ಸರಣಿಯ ರಣಜಿ ಪಂದ್ಯದಲ್ಲಿ ಕೊಹ್ಲಿ ಮತ್ತು ರಾಹುಲ್ ಆಡುವುದು ಡೌಟ್ ಎಂದು ಹೇಳಲಾಗುತ್ತಿದೆ, ಕಾರಣ ಅವರಿಬ್ಬರೂ ಗಾಯಗೊಂಡಿದ್ದಾರೆ ಮತ್ತು ಪಂದ್ಯ ಆಡುವುದಕ್ಕೆ ಫಿಸಿಕಲ್ ಫಿಟ್ ಆಗಿಲ್ಲ ಎನ್ನುವ ಮಾಹಿತಿಯನ್ನು ಬಿಸಿಸಿಐಗೆ ನೀಡಿದ್ದಾರೆ.
ಇಬ್ಬರೂ ಆಟಗಾರರು ತಮ್ಮ ಫಿಟ್ನೆಸ್ ಬಗ್ಗೆ ಬಿಸಿಸಿಐನ ವೈದ್ಯಕೀಯ ವಿಭಾಗಕ್ಕೆ ಮಾಹಿತಿಯನ್ನು ನೀಡಿದ್ದಾರೆ. ಇದೇ ಬರುವ ಜನವರಿ 23ರಿಂದ ಆರಂಭವಾಗಲಿರುವ ಮುಂದಿನ ಸರಣಿಯ ರಣಜಿ ಪಂದ್ಯದಲ್ಲಿ ತಮ್ಮ ಅಲಭ್ಯತೆಯ ಬಗ್ಗೆ ವಿವರಣೆಯನ್ನು ನೀಡಿದ್ದಾರೆ.
ಆದರೆ, ವಿರಾಟ್ ಕೊಹ್ಲಿ ಮತ್ತು ರಾಹುಲ್ ಅವರ ಮನವಿಯ ಬಗ್ಗೆ, ಬಿಸಿಸಿಐ ಇನ್ನೂ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಹೇಳಲಾಗುತ್ತಿದೆ. ಮುಂದಿನ ಒಂದು ಪಂದ್ಯಕ್ಕೆ ಇಬ್ಬರು ಆಟಗಾರರಿಗೆ ಅನುಮತಿ ಸಿಕ್ಕರೂ, ಸೀಸನಿನ ಮುಂದಿನ ಪಂದ್ಯವನ್ನು ಆಡಲು ಬಿಸಿಸಿಐ ಸೂಚಿಸಬಹುದು.
ಈ ನಡುವೆ, ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡದ ಆಯ್ಕೆ ಇಂದು (ಜ.18) ಆಗುವ ಸಾಧ್ಯತೆಯಿದೆ. ಜನವರಿ 23ರಿಂದ ಎರಡನೇ ಹಂತದ ದೇಶೀಯ ಕ್ರಿಕೆಟಿನ ಪ್ರಮುಖ ಟೂರ್ನಮೆಂಟ್ ರಣಜಿ ಪಂದ್ಯಾವಳಿ ಆರಂಭವಾಗಿದೆ. ದೆಹಲಿ ಮತ್ತು ಸೌರಾಷ್ಟ್ರ ಪಂದ್ಯಕ್ಕೆ ಸಂಭಾವ್ಯರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಹೆಸರು ಕೂಡಾ ಇದೆ.