ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಲಿಂಗಾಯತ ಪ್ರಾಬಲ್ಯ ಸಾಧಿಸಲು ಎರಡು ಬಣಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಈ ಸಂಬಂಧ ಬಿಜೆಪಿ ಹೈಕಮಾಂಡ್ ಯತ್ನಾಳ್ ಮತ್ತು ವಿಜಯೇಂದ್ರ ಬಣಗಳಿಗೆ ಖಡಕ್ ಸಂದೇಶ ರವಾನಿಸಿತ್ತು. ಹೈಕಮಾಂಡ್ ಸಂದೇಶದ ಬೆನ್ನಲ್ಲೇ ಯತ್ನಾಳ್ ಟೀಂ ಸಮಾವೇಶದಿಂದ ಹಿಂದೆ ಸರಿದಿದೆ. ಆದ್ರೀಗ ಬಿ.ಎಸ್.ಯಡಿಯೂರಪ್ಪ ಆಪ್ತನೆಂದೇ ಗುರುತಿಸಿಕೊಂಡಿರುವ ಎಂ.ಪಿ.ರೇಣುಕಾಚಾರ್ಯ ವೀರಶೈವ ಲಿಂಗಾಯತ ಸಮಾವೇಶ ಮಾಡೇ ಮಾಡ್ತೇವೆ ಎಂದಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನಮ್ಮ ಸಮಾವೇಶ ನಡೆದೆ ನಡೆಯುತ್ತೆ. ಬಿಜೆಪಿಗೂ ಸಮಾವೇಶಕ್ಕೂ ಯಾವುದೇ ಸಂಬಂಧವಿಲ್ಲ. ನಮ್ಮ ಸಮಾಜವನ್ನು ಒಡೆಯುವ ಕೆಲಸವನ್ನು ದುಷ್ಟ ಶಕ್ತಿಗಳು ಮಾಡಿವೆ. ಅದನ್ನು ಒಗ್ಗೂಡಿಸುವ ಕೆಲಸ ಮಾಡಬೇಕಿದೆ ಅಂತ ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಎಂ.ಪಿ.ರೇಣುಕಾಚಾರ್ಯ, ಲಿಂಗಾಯತ ನಾಯಕರನ್ನು ರಾಜಕೀಯವಾಗಿ ಬಳಸಿಕೊಂಡಿದ್ದಾರೆ. ನನ್ನನ್ನೂ ಈ ಹಿಂದೆ ಬಳಸಿಕೊಳ್ಳಲಾಗಿದೆ. ಯತ್ನಾಳ್ ಅವರನ್ನು ಬಳಸಿಕೊಳ್ತಿದ್ದಾರೆ. ಅದೀಗ ಅವರಿಗೆ ಅರ್ಥವಾಗಿದೆ. ಈ ಸಮಾವೇಶಕ್ಕೆ ಯತ್ನಾಳ್ ಅವರಿಗೂ ಆಹ್ವಾನವಿದೆ. ಸಮಾಜದ ನಾಯಕರಾಗಿ ಅವರು ಬರಬಹುದು ಎಂದು ತಿಳಿಸಿದ್ದಾರೆ.