ರಾಮನಗರ: ರಾಜ್ಯದಲ್ಲಿ ಎಂಇಎಸ್ ಪುಂಡಾಟ ಮುಂದುವರಿದ ಹಿನ್ನೆಲೆ ಎಂಇಎಸ್ ವಿರುದ್ಧ ರಾಮನಗರದಲ್ಲಿ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದ್ದಾರೆ.
ರಾಮನಗರದ ಐಜೂರು ಸರ್ಕಲ್ನಲ್ಲಿ ಪ್ರತಿಭಟನೆ ನಡೆಸಿ ಎಂಇಎಸ್ ನಿಷೇಧ ಮಾಡುವಂತೆ ಪೊರಕೆ ಹಿಡಿದು ವಿನೂತನ ಪ್ರತಿಭಟನೆ ನಡೆಸಿದ್ದಾರೆ. ರಾಜ್ಯದಲ್ಲಿ ದಿನೇದಿನೇ ಎಂಇಎಸ್ ಪುಂಡಾಟ ಹೆಚ್ಚಾಗಿದೆ. ಬೆಳಗಾವಿಯಲ್ಲಿ ಗ್ರಾ.ಪಂ ಅಧಿಕಾರಿ ಮೇಲೆ ಹಲ್ಲೆ ನಡೆಸಲಾಗಿದೆ. ಕನ್ನಡದಲ್ಲಿ ಪಹಣಿ ಕೊಡಲಿಲ್ಲ ಎಂಬ ಕಾರಣಕ್ಕೆ ಹಲ್ಲೆ ಮಾಡಿದ್ದಾರೆ ಎಂದರೆ ಅವರ ಪುಂಡಾಟಕ್ಕೆ ಮಿತಿ ಇಲ್ಲದಂತಾಗಿದೆ. ಪದೇಪದೇ ಕನ್ನಡಿಗರ ಮೇಲೆ ಹಲ್ಲೆ ನಡೆಸುವ ಕೆಲಸವನ್ನು ಎಂಇಎಸ್ ಪುಂಡರು ಮಾಡುತ್ತಿದ್ದಾರೆ. ಅದಕ್ಕಾಗಿ ಮಾ.22ರಂದು ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ. ಈಗಾಗಲೇ ಎರಡು ಸಾವಿರ ಸಂಘಟನೆಗಳು ಬಂದ್ಗೆ ಬೆಂಬಲ ನೀಡಿವೆ. ಅಖಂಡ ಕರ್ನಾಟಕ ಬಂದ್ ಸಂಪೂರ್ಣ ಯಶಸ್ವಿಯಾಗಲಿದೆ. ಎಂಇಎಸ್ ಸಂಪೂರ್ಣ ನಿಷೇಧ ಮಾಡುವಂತೆ ವಾಟಾಳ್ ನಾಗರಾಜ್ ಒತ್ತಾಯ ಮಾಡಿದ್ದಾರೆ.


