ರಾಜಕೀಯರಾಜ್ಯ

‘ಅಸತ್ಯದ ಎದುರು ಸತ್ಯ ಅಸಹಾಯಕ’: ವಿಪಕ್ಷಗಳ ಟೀಕೆಗೆ ಸದನದಲ್ಲಿ ಸಿಎಂ ತಿರುಗೇಟು

ಬೆಂಗಳೂರು: “ಒಮ್ಮೊಮ್ಮೆ ಅಸಹಾಯಕತೆ ವ್ಯಕ್ತಪಡಿಸುವ ಸ್ಥಿತಿ ನಿರ್ಮಾಣವಾಗುವುದು ನಿಜ. ಆದರೆ ಅದು ಅಸತ್ಯದ ಎದುರು ಸತ್ಯ ಅಸಹಾಯಕವಾದಾಗ ಮಾತ್ರ ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ವಿರೋಧ ಪಕ್ಷಗಳ ‘ಅಸಹಾಯಕ ಸಿಎಂ’ ಎಂಬ ಆರೋಪಕ್ಕೆ ಮಾರ್ಮಿಕವಾಗಿ ಉತ್ತರಿಸಿದ್ದಾರೆ.

ಸೋಮವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಸಲ್ಲಿಸುವ ಚರ್ಚೆಗೆ ಮರು ಉತ್ತರ ನೀಡಿದ ಸಿಎಂ, ವಿಪಕ್ಷ ನಾಯಕ ಸುನೀಲ್ ಕುಮಾರ್ ಅವರ ಟೀಕೆಗಳಿಗೆ ಅಂಕಿ-ಅಂಶ ಹಾಗೂ ತರ್ಕಬದ್ಧವಾಗಿ ಪ್ರತ್ಯುತ್ತರ ನೀಡಿದರು.

ರಾಜ್ಯಪಾಲರ ಭಾಷಣದ ಕುರಿತು ಮಾತನಾಡಿದ ಸಿಎಂ, “ನಾವು ಭಾಷಣದ ಪ್ರತಿಯಲ್ಲಿ ‘ಜೈ ಸಂವಿಧಾನ’ ಎಂದು ಬರೆದಿದ್ದೆವು. ಆದರೆ ರಾಜ್ಯಪಾಲರು ಅದನ್ನು ಓದದೆ ಕೇವಲ ಜೈ ಹಿಂದ್, ಜೈ ಕರ್ನಾಟಕ ಎಂದು ಮುಗಿಸಿದರು. ಸಂವಿಧಾನವನ್ನು ಯಾರೂ ವಿರೋಧಿಸಲು ಸಾಧ್ಯವಿಲ್ಲ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇನ್ನು ರಾಜ್ಯಪಾಲರು ರಾಷ್ಟ್ರಗೀತೆ ಮುಗಿಯುವ ಮೊದಲೇ ಸದನದಿಂದ ನಿರ್ಗಮಿಸಿದ್ದು ಸರಿಯಲ್ಲ. “ರಾಜ್ಯಪಾಲರು ಮೂಲತಃ ಒಳ್ಳೆಯವರು, ನಮ್ಮ ಹೋರಾಟ ಅವರ ವಿರುದ್ಧವಲ್ಲ, ಬದಲಿಗೆ ಕೇಂದ್ರ ಸರ್ಕಾರದ ಧೋರಣೆಗಳ ವಿರುದ್ಧ,” ಎಂದು ಸ್ಪಷ್ಟಪಡಿಸಿದರು.

ಎಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ನಿಲುವುಗಳ ಬದಲಾವಣೆಯನ್ನು ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ ಅವರು, “ಹಿಂದೆ ಸಿಎಂ ಆಗಿದ್ದಾಗ ಮನರೇಗಾ ಯೋಜನೆ ಗ್ರಾಮೀಣ ಭಾಗದ ಸಂಜೀವಿನಿ ಎಂದು ಹೊಗಳಿದ್ದ ಕುಮಾರಸ್ವಾಮಿ ಅವರು, ಈಗ ಬಿಜೆಪಿ ಜೊತೆ ಕೈಜೋಡಿಸಿದ ಮೇಲೆ ಅದೇ ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಇದು ರಾಜಕೀಯ ಅವಕಾಶವಾದವಲ್ಲವೇ?” ಎಂದು ವ್ಯಂಗ್ಯವಾಡಿದರು.

Comments (0)

Your email address will not be published. Required fields are marked *

Back to top button