ಬೆಂಗಳೂರು: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮಾಡಲು ಸರಿಯಾಗಿ ತರಬೇತಿ ಕೊಡದೇ ಸರ್ಕಾರ ಸಮೀಕ್ಷೆಯನ್ನ ಗೊಂದಲ ಮಾಡಿದೆ ಎಂದು ಸರ್ಕಾರದ ವಿರುದ್ಧ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ದೊಡ್ಡ ಗೊಂದಲ ಆಗಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.. ಜೆಪಿ ಭವನದಲ್ಲಿ ಮಾತನಾಡಿದ ಅವರು, ಸಮೀಕ್ಷೆಯ ಆಪ್ ಸರಿಯಾಗಿ ವರ್ಕ್ ಆಗುತ್ತಿಲ್ಲ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮಾಡಲು ಸರಿಯಾಗಿ ತರಬೇತಿ ಕೊಡದೇ ಸರ್ಕಾರ ಸಮೀಕ್ಷೆಯನ್ನ ಗೊಂದಲ ಮಾಡಿದೆ. ಬೆಂಗಳೂರಿನಲ್ಲಿ ದೊಡ್ಡ ದೊಡ್ಡ ಟ್ಯಾಲೆಂಟ್ ಇರೋ ಪ್ರತಿಭಾವಂತರು ಇದ್ದಾರೆ. ಆದರೂ ಸರ್ಕಾರ ಸರಿಯಾಗಿ ಆಪ್ ಮಾಡಿಲ್ಲ. ಸರ್ಕಾರದವರು 1.43 ಕೋಟಿ ಮನೆ ಸರ್ವೆ ಅಂತಿದ್ದಾರೆ. ಈವರೆಗೂ ಸಮೀಕ್ಷೆಯವರು ಎಷ್ಟು ಮನೆಗೆ ತಲುಪಿದ್ದಾರೆ? ಈವರೆಗೂ 4 ಲಕ್ಷ ಮನೆ ಮಾತ್ರ ತಲುಪಿದ್ದಾರೆ. 15 ದಿನಗಳಲ್ಲಿ ಸಮೀಕ್ಷೆ ಮಾಡಿ ವರದಿ ಕೊಡೋಕೆ ಆಗುತ್ತಾ ಎಂದು ಪ್ರಶ್ನಿಸಿದರು.
ಶಿಕ್ಷಕರ ರಜೆಯಲ್ಲಿ ಸಮೀಕ್ಷೆ ಮಾಡುತ್ತೇವೆ ಎಂದರು. ಸಮಯ ಮುಗಿದರೂ ಸಮೀಕ್ಷೆ ಮುಗಿದಿಲ್ಲ. ಮತ್ತೆ ಶಿಕ್ಷಕರು ಸಿಗ್ತಾರಾ? 60 ಪ್ರಶ್ನೆ ಮಾಡಿದ್ದೀರಾ. ಅಷ್ಟು ಪ್ರಶ್ನೆ ಕೇಳುವುದರಲ್ಲಿ ಆಪ್ ಹ್ಯಾಂಗ್ ಆಗುತ್ತಿದೆ. ನಿಮ್ಮ ಸಮೀಕ್ಷೆ 15 ದಿನ ಗಡುವು ಮುಗಿಯುತ್ತಿದೆ. ಈಗ 450 ಕೋಟಿ ಅಂತಿದ್ದೀರಾ. ಆಮೇಲೆ 650 ಕೋಟಿ ಮಾಡುತ್ತೀರಿ. ಸರ್ಕಾರ ಶಿಕ್ಷಕರಿಗೆ ಸರಿಯಾಗಿ ಟ್ರೈನಿಂಗ್ ಕೊಟ್ಟಿಲ್ಲ. ಸರ್ಕಾರದವರು ಸರಿಯಾಗಿ ಸಿದ್ಧತೆ ಮಾಡದೇ ಸರ್ವೆ ಮಾಡುತಿದ್ದಾರೆ ಎಂದು ಹರಿಹಾಯ್ದರು.


