ಬೆಂಗಳೂರು: ಇತ್ತೀಚೆಗಷ್ಟೇ ರಾಜಧಾನಿಯ ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದಿರುವ ಪ್ರಕರಣ ನಡೆದಿತ್ತು. ಇದನ್ನು ಮರೆಯುವ ಬೆನ್ನಲ್ಲೇ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಸುಗಳು ಕಳ್ಳತನವಾಗಿರುವ ಘಟನೆ ನಡೆದಿದೆ.
ಹೆಲ್ಮೆಟ್ ಧರಸಿ ಬಂದ ವ್ಯಕ್ತಿಯೊಬ್ಬ 2 ಲಕ್ಷ ರೂ. ಮೌಲ್ಯದ ಮೂರು ಹಸುಗಳನ್ನು ಕಳ್ಳತನ ಮಾಡಿ ಮಾರಿದ್ದಾನೆ. ಕಳ್ಳನ ಕೈಚಳಕದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜಕ್ಕೂರಿನ ಸರ್ಕಾರಿ ಶಾಲೆಯ ಸಮೀಪ ಖಾಲಿ ಜಾಗದಲ್ಲಿ ಹಸುಗಳನ್ನು ಕಟ್ಟಿಹಾಕಲಾಗಿತ್ತು. ಆದ್ರೆ ಜ.15ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಕಾಣೆಯಾಗಿವೆ. ಮೂರು ದಿನಗಳು ಹುಡುಕಾಟ ನಡೆಸಿದ ಮಾಲೀಕರು ಬಳಿಕ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಜ.19ರಂದು ಎಫ್ಐಆರ್ ದಾಖಲಾಗಿದೆ.
ದೂರು ದಾಖಲಾಗ್ತಿದ್ದಂತೆ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು, ಓರ್ವ ಆರೋಪಿಯನ್ನ ಬಂಧಿಸಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ವಿಚಾರಣೆ ವೇಳೆ ಆರೋಪಿ ನೀಡಿದ ಮಾಹಿತಿ ಮೇರೆಗೆ ಒಂದು ಹಸುವನ್ನು ಪೊಲೀಸರು ಪತ್ತೆ ಮಾಡಿದ್ದು, ಠಾಣೆಗೆ ತಂದು ಕಟ್ಟಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.