ಮಂಗಳೂರು: ಬಿಜೆಪಿಯ 18 ಜನ ಶಾಸಕರನ್ನು ಆರು ತಿಂಗಳುಗಳ ಕಾಲ ಅಮಾನತು ಮಾಡುವ ಮೂಲಕ ಸ್ಪೀಕರ್ ಯು.ಟಿ.ಖಾದರ್ ಅವರು ಸರಕಾರದ ಏಜೆಂಟ್ ರೀತಿಯಲ್ಲಿ ಕೆಲಸ ಮಾಡಿದ್ದಾರೆ ಎಂದು ಸಂಸದ ಕ್ಯಾಪ್ಟನ್. ಬ್ರಿಜೇಶ್ ಚೌಟ ಟೀಕೆ ಮಾಡಿದ್ದಾರೆ.
ಪಕ್ಷದ ಜಿಲ್ಲಾ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರಿಂದ ಆಯ್ಕೆಯಾದ ಶಾಸಕರನ್ನು ಆರು ತಿಂಗಳು ಅಮಾನತು ಮಾಡುವುದು ಸರ್ವಾಧಿಕಾರಿ ನಿರ್ಧಾರವಾಗಿದೆ. ಶಾಸಕರ ಹಾಗೂ ಆಯಾ ಕ್ಷೇತ್ರದ ಜನತೆಯ ಧ್ವನಿಯನ್ನು ದಮನಿಸುವ ಪ್ರಯತ್ನ. ಸುಸಂಸ್ಕೃತ ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ ಸ್ಪೀಕರ್ ಅವರು ಈ ರೀತಿಯ ಕೆಟ್ಟ ಸಂಪ್ರದಾಯ ಆರಂಭಿಸಿರುವುದು ನಾಚಿಕೆಗೇಡು ಎಂದು ಹೇಳಿದರು.
ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಎಲ್ಲ ರೀತಿಯಲ್ಲೂ ಸಂವಿಧಾನ ವಿರೋಧಿಯಾಗಿ ವರ್ತಿಸುತ್ತಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಂವಿಧಾನ ಬದಲು ಹೇಳಿಕೆಯ ಮೂಲಕ ಅವರು ಮನಸ್ಸಿನಲ್ಲಿ ಇರುವುದನ್ನು ಬಾಯಿಯಲ್ಲಿ ಹೇಳಿದ್ದಾರೆ. ಅಂಬೇಡ್ಕರ್ ಅವರ ಆಶಯಗಳಿಗೆ ವಿರುದ್ಧವಾಗಿ ಮಾತನಾಡಿದ್ದಾರೆ. ಸರಕಾರಿ ಕಾಮಗಾರಿಯಲ್ಲಿ ಮುಸ್ಲಿಂ ಗುತ್ತಿಗೆದಾರರಿಗೆ ಶೇ. 4ರಷ್ಟು ಮೀಸಲಾತಿ ನೀಡಲು ಉದ್ದೇಶಿಸಿರುವುದು ಸಂವಿಧಾನ ವಿರೋಧಿ ನಡೆಯಾಗಿದೆ ಎಂದು ಹೇಳಿದರು.