ಲಕ್ನೋ: ಮನ್ವೇಂದ್ರ ಸಿಂಗ್ ಅವರ ಕೊಲೆ ಪ್ರಕರಣವು ದಿನಕ್ಕೊಂದು ಆಘಾತಕಾರಿ ತಿರುವು ಪಡೆಯುತ್ತಿದೆ. 21 ವರ್ಷದ ಅಕ್ಷತ್ ಪ್ರತಾಪ್ ಸಿಂಗ್, ತನ್ನ ತಂದೆ ಮನ್ವೇಂದ್ರ ಅವರನ್ನು ಪರವಾನಗಿ ಪಡೆದ ರೈಫಲ್ನಿಂದ ತಲೆಗೆ ಗುಂಡು ಹಾರಿಸಿ ಕೊಂದಿದ್ದಾನೆ. ಮನ್ವೇಂದ್ರ ಅವರು ಮಗ ವೈದ್ಯನಾಗಬೇಕೆಂದು ‘ನೀಟ್’ ಪರೀಕ್ಷೆಗೆ ಒತ್ತಡ ಹೇರುತ್ತಿದ್ದರು. ಆದರೆ, ಸುಸ್ಥಿತಿಯಲ್ಲಿರುವ ಕುಟುಂಬದ ಉದ್ಯಮವನ್ನು ವಹಿಸಿಕೊಳ್ಳಲು ಬಯಸಿದ್ದ ಅಕ್ಷತ್ಗೆ ಇದು ಇಷ್ಟವಿರಲಿಲ್ಲ. ಫೆಬ್ರವರಿ 20ರಂದು ನಡೆದ ಈ ಜಗಳ ಅಂತಿಮವಾಗಿ ಹತ್ಯೆಯಲ್ಲಿ ಅಂತ್ಯವಾಯಿತು.
ಕೊಲೆಯ ನಂತರ ಸಾಕ್ಷ್ಯ ನಾಶಪಡಿಸಲು ಅಕ್ಷತ್ ಕ್ರೂರ ಹಾದಿ ಹಿಡಿದಿದ್ದ. ಮೃತದೇಹವನ್ನು ಡ್ರಮ್ನಲ್ಲಿ ಹಾಕಲು ಸಾಧ್ಯವಾಗದಿದ್ದಾಗ ಗರಗಸದಿಂದ ದೇಹವನ್ನು ಕತ್ತರಿಸಿದ್ದ. ತಲೆಯನ್ನು ಮನೆಯಿಂದ 21 ಕಿಲೋಮೀಟರ್ ದೂರದಲ್ಲಿ ವಿಲೇವಾರಿ ಮಾಡಿದ್ದಲ್ಲದೆ, ಕೈಕಾಲುಗಳನ್ನು ಬೇರೆ ಬೇರೆ ಕಡೆ ಎಸೆದಿದ್ದ. ಈ ಎಲ್ಲಾ ಘಟನೆಗೆ ಸಾಕ್ಷಿಯಾಗಿದ್ದ ತಂಗಿಗೆ ಪ್ರಾಣ ಬೆದರಿಕೆ ಹಾಕಿ ಬಾಯಿ ಮುಚ್ಚಿಸಿದ್ದ. ತಂದೆ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿ ನಾಟಕವಾಡಿದ್ದ ಅಕ್ಷತ್, ಕಾರಿನ ಬೂಟ್ನಲ್ಲಿ ಸಿಕ್ಕ ರಕ್ತದ ಕಲೆಗಳು ಮತ್ತು ವಿಧಿವಿಜ್ಞಾನ ತಂಡದ ತನಿಖೆಯಿಂದಾಗಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ.


