
ಬೆಂಗಳೂರು: ಬೆಂಗಳೂರಿನಲ್ಲಿ ಏಪ್ರಿಲ್ 26 ರಂದು ನಡೆಯಲಿರುವ ಪ್ರತಿಷ್ಠಿತ ‘ಟಿಸಿಎಸ್ ವಿಶ್ವ 10’ (TCS World 10K) ಓಟದ ಹಿನ್ನೆಲೆಯಲ್ಲಿ, ನಗರದ ರಸ್ತೆಗಳ ದುರಸ್ತಿಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಈ ಓಟವು ನಡೆಯುವ ಸುಮಾರು 10 ಕಿಲೋಮೀಟರ್ ವ್ಯಾಪ್ತಿಯ ರಸ್ತೆಯನ್ನು ಕೂಡಲೇ ರಿಪೇರಿ ಮಾಡುವಂತೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ವಿಡಿಯೋ ಸಂದೇಶದ ಮೂಲಕ ಮನವಿ ಮಾಡಿದ್ದಾರೆ.
ಕಳೆದ ವರ್ಷದ ಅನುಭವವನ್ನು ನೆನಪಿಸಿದ ಅವರು, ರಸ್ತೆಗಳಲ್ಲಿನ ಗುಂಡಿಗಳಿಂದಾಗಿ ಓಟಗಾರರು ಸಾಕಷ್ಟು ತೊಂದರೆ ಅನುಭವಿಸಿದ್ದರು ಎಂದು ಬೆಟ್ಟು ಮಾಡಿದ್ದಾರೆ. ಈ ಬಾರಿ ಅಂತಹ ಅವಘಡಗಳು ಅಥವಾ ಅಡಚಣೆಗಳು ಉಂಟಾಗಬಾರದು ಎಂಬ ದೃಷ್ಟಿಯಿಂದ, ರೇಸ್ ನಡೆಯುವ ಮಾರ್ಗದಲ್ಲಿನ ಗುಂಡಿಗಳನ್ನು ಮುಚ್ಚಿ ರಸ್ತೆಯನ್ನು ಸುಗಮಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ವಿಶ್ವದ ಗಮನ ಸೆಳೆಯುವ ಇಂತಹ ಕ್ರೀಡಾಕೂಟಗಳ ಸಂದರ್ಭದಲ್ಲಿ ನಗರದ ಮೂಲಸೌಕರ್ಯವು ಉತ್ತಮವಾಗಿರಬೇಕು ಎಂಬುದು ಅವರ ಕಳಕಳಿಯಾಗಿದೆ.




