#Exclusive NewsTop News

ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಕೇಸ್​: 48 ಆರೋಪಿಗಳಿಗೆ ಜಾಮೀನು

ದಾವಣಗೆರೆ ನಗರದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಸೆ.19ರಂದು ದಾವಣಗೆರೆಯ ಅರಳಿಮರ ಸರ್ಕಲ್​ ಬಳಿ ನಡೆದಿದ್ದ ಕಲ್ಲು ತೂರಾಟ ಸಂಬಂಧ ಹಿಂದೂ-ಮುಸ್ಲಿಂ ಸೇರಿ ಪಟ್ಟು 48 ಆರೋಪಿಗಳಿಗೆ ಕೋರ್ಟ್​ ಜಾಮೀನು ನೀಡಿದೆ.


ದಾವಣಗೆರೆ, (ಅಕ್ಟೋಬರ್ 16): ದಾವಣಗೆರೆಯಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಸೆ.19ರಂದು ದಾವಣಗೆರೆಯ ಅರಳಿಮರ ಸರ್ಕಲ್​ ಬಳಿ ಗಣೇಶ ಮೂರ್ತಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿತ್ತು. ಈ ಪ್ರಕರಣ ಸಂಬಂಧ ಇದೀಗ ಹಿಂದೂ-ಮುಸ್ಲಿಂ ಸೇರಿ 48 ಆರೋಪಿಗಳಿಗೆ ಕೋರ್ಟ್​ ಇಂದು (ಅಕ್ಟೋಬರ್ 16) ಜಾಮೀನು ನೀಡಿದೆ. ಇನ್ನು ಗಲಭೆಗೆ ಸಂಬಂಧ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಹಿಂದೂ ಜಾಗರಣಾ ವೇದಿಕೆಯ ಸಂಚಾಲಕ ಸತೀಶ್ ಪೂಜಾರಿಗೆ ಜಾಮೀನು ಸಿಕ್ಕಿದ್ದು, ಅವರನ್ನು ಅದ್ಧೂರಿ ಸ್ವಾಗತ ಮಾಡಿಕೊಳ್ಳಲಾಗಿದೆ.

ಜಾಮೀನು ಮಂಜೂರು ಆಗುತಿದ್ದಂತೆ ಸತೀಶ್ ಪೂಜಾರಿಗೆ ಅದ್ಧೂರಿ ಸ್ವಾಗತ ದೊರೆತಿದೆ. ಸತೀಶ್ ಪೂಜಾರಿ ಮನೆಯ ಏರಿಯಾದಲ್ಲಿ ಹಿಂದೂ ಯುವಕರು ಜೈಕಾರ ಹಾಕಿ ಬರ ಮಾಡಿಕೊಂಡರು. ಇನ್ನು ಕುಟುಂಬಸ್ಥರು ಸತೀಶ್ ಪೂಜಾರಿಗೆ ಆರತಿ ಎತ್ತಿ ತಿಲಕವಿಟ್ಟು ಮನೆಗೆ ಬರ ಮಾಡಿಕೊಂಡರು.

ಸೆ.19ರಂದು ನಗರದ ಅರಳಿ ಮರ ಸರ್ಕಲ್ ನಲ್ಲಿ ಮೆರವಣಿಗೆ ಸಾಗಿದ ನಂತರ ಅಜಾದ್ ನಗರ ಮುಖ್ಯ ರಸ್ತೆಯಿಂದ ಮೊದಲು ಕಲ್ಲು ತೂರಿದ್ದು ಇಬ್ಬರು ಪೊಲೀಸರು (Police) ಗಾಯಗೊಂಡಿದ್ದರು. ಕೂಡಲೇ ಮುಸ್ಲಿಂ ಮುಖಂಡರು ಪರಿಸ್ಥಿತಿಯನ್ನು ನಿಯಂತ್ರಣ ಮಾಡಿದ್ದಾರೆ. ಗಣೇಶ ಮೆರವಣಿಗೆ ಸಾಗಿದ ಮೂರು ಕಡೆಗಳಲ್ಲಿ ಕಲ್ಲು ತೂರಾಟ ನಡೆಸಲಾಗಿತ್ತು. ಕೂಡಲೇ ಪೊಲೀಸರು ಇಡೀ ನಗರದಲ್ಲಿ ಸಂಚಾರ ನಡೆಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 6 ಪ್ರಕರಣ ದಾಖಲಾಗಿದ್ದು, ಹಿಂದೂ -ಮುಸ್ಲಿಂ ಸೇರಿದಂತೆ ಒಟ್ಟು 48 ಮಂದಿಯನ್ನು ಬಂಧನ ಮಾಡಲಾಗಿತ್ತು.

ಕಲ್ಲು ತೂರಾಟಕ್ಕೆ ಕಾರಣ ಏನು?
ಕಳೆದ ಎರಡು ದಿನಗಳ ಹಿಂದೆ ಹಿಂದೂ ಮುಖಂಡರು ನಾಗಮಂಗಲ ಕಲ್ಲುತೂರಾಟ ಪ್ರಕರಣ ಹಾಗೂ ಈದ್ ಮಿಲಾದ್ ಮೆರವಣಿಗೆಯಲ್ಲಿ ಪ್ಯಾಲೆಸ್ತೀನ್‌ ಧ್ವಜ ಪ್ರದರ್ಶನ ಮಾಡಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ ಪ್ರಾಂತ್ಯ ಸಂಚಾಲಕ ಸತೀಶ್ ಪೂಜಾರ್ ವಿವಾದಾತ್ಮಕ ಹೇಳಿಕೆ‌ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಮುಸ್ಲಿಂ ಮುಖಂಡನೊಬ್ಬ ತಾಕತ್ ಇದ್ದರೆ ಬೇತೂರು ರಸ್ತೆಗೆ ಬಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಅದರಂತೆ ಗಣೇಶ ಮೆರವಣಿಗೆಯಲ್ಲಿ ಸತೀಶ್ ಪೂಜಾರಿ ಭಾಗವಹಿಸಿದ್ದರು. ಮೆರವಣಿಗೆ ಸಾಗುವ ಅರಳಿಮರ ಸರ್ಕಲ್ ಬಳಿ ಭಾರೀ ಸಂಖ್ಯೆಯಲ್ಲಿ ಮುಸ್ಲಿಮರು ಸೇರಿದ್ದರು. ಗಣೇಶನ ಮೆರವಣಿಗೆ ಹೋಗುತ್ತಿದ್ದಾಗ ಇಸ್ಲಾಂ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದರು. ಈ ವೇಳೆ ಕಲ್ಲು ತೂರಾಟ ನಡೆದಿತ್ತು. ನಂತರ ಕೆ ಅರ್ ರಸ್ತೆ ಹಂಸಭಾವಿ ಸರ್ಕಲ್ ನಲ್ಲೂ ಸಹ ಕಲ್ಲು ತೂರಾಟ ನಡೆದಿತ್ತು.

Comments (0)

Your email address will not be published. Required fields are marked *

Back to top button