ಮಂಡ್ಯ: ಶ್ರೀರಂಗಪಟ್ಟಣದ 415ನೇ ದಸರಾ ಮಹೋತ್ಸವವು ಮಧ್ಯಾಹ್ನ 3 ರಿಂದ 4 ಗಂಟೆಯ ಶುಭ ಮಕರ ಲಗ್ನದಲ್ಲಿ ಆರಂಭವಾಗಿದೆ.. ಈ ಬಾರಿಯ ಉತ್ಸವಕ್ಕೆ ಚಾಲನೆ ನೀಡಿದವರು ಖ್ಯಾತ ನಟ ಮತ್ತು ನಿರ್ದೇಶಕ ಟಿ.ಎಸ್.ನಾಗಾಭರಣ. ಅವರ ಜೊತೆಗೆ ಸಚಿವ ಚಲುವರಾಯಸ್ವಾಮಿ, ಅವರ ಪತ್ನಿ ಧನಲಕ್ಷ್ಮಿ, ಮತ್ತು ಶಾಸಕ ಗಣಿಗ ಪಿ.ರವಿಕುಮಾರ್ ಕಿರಂಗೂರು , ಬನ್ನಿಮಂಟಪಕ್ಕೆ ಆಗಮಿಸಿದರು. ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆಯ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಲಾಯಿತು.
ದಸರಾ ಆನೆ ಮಹೇಂದ್ರನ ಮೇಲೆ ಮರದ ಅಂಬಾರಿಯಲ್ಲಿ ವಿರಾಜಮಾನಳಾದ ನಾಡದೇವಿಗೆ ಪುಷ್ಪಾರ್ಚನೆ ಮಾಡಲಾಯಿತು. ಮರದ ಅಂಬಾರಿ ಹೊತ್ತ ಮಹೇಂದ್ರ ಆನೆ ಜೊತೆಗೆ ಕುಮ್ಕಿ ಆನೆಗಳಾದ ಕಾವೇರಿ, ಲಕ್ಷ್ಮೀ ಹೆಜ್ಜೆ ಹಾಕಿದವು.
ವಿವಿಧ ಕಲಾತಂಡಗಳಾದ ಬ್ಯಾಂಡ್, ಪೂಜಾ ಕುಣಿತ, ವೀರಗಾಸೆ, ನಗಾರಿ, ಜಡೆ ಕೋಲಾಟ, ಗಾರುಡಿ ಗೊಂಬೆ, ತಮಟೆ, ದೊಣ್ಣೆವರಸೆ, ಡೊಳ್ಳು ಕುಣಿತ, ಕಂಸಾಳೆ, ಕೊಂಬು-ಕಹಳೆ ಹಾಗೂ ಸ್ತಬ್ದ ಚಿತ್ರಗಳ ಮೆರವಣಿಗೆ ಗಮನ ಸೆಳೆಯಿತು.
ಜಂಬೂ ಸವಾರಿಯ ಮೆರವಣಿಗೆಯು ಶ್ರೀರಂಗಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಲಿದೆ. ಕಿರಂಗೂರು ಬನ್ನಿಮಂಟಪದಿಂದ ರಂಗನಾಥ ದೇಗುಲದವರೆಗೆ ಈ ಭವ್ಯ ಮೆರವಣಿಗೆಯು ಜನರ ಗಮನ ಸೆಳೆಯಲಿದೆ.


