ಮೈಸೂರು: ರಾಜ್ಯ ರಾಜಕಾರಣದಲ್ಲಿ ಯಾವುದೂ ನಿಂತ ನೀರಲ್ಲ. ಕರ್ನಾಟಕದ ಆಡಳಿತ ಪಕ್ಷದಲ್ಲಿ ಏಕನಾಥ ಶಿಂಧೆ ಯಾರೆಂಬುದು ಸದ್ಯದಲ್ಲೇ ತಿಳಿಯಲಿದೆ. ರಾಜ್ಯದಲ್ಲಿ ಏಕನಾಥ್ ಶಿಂಧೆ ತರ ಪ್ರಕ್ರೀಯೆಗಳು ಮುಂದುವರೆದರೆ ಆಶ್ವರ್ಯ ಪಡಬೇಕಿಲ್ಲ ಎಂದು ಬಿಜೆಪಿ ನಾಯಕ ಶ್ರೀರಾಮುಲು ಹೇಳಿದರು.
ಈ ಕುರಿತು ಮಾತನಾಡಿದ ಅವರು, ವೀರೇಂದ್ರ ಪಾಟೀಲ, ಡಿ.ದೇವರಾಜ ಅರಸು ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದನ್ನು ನೋಡಿದ್ದೇವೆ. ಮಹಾರಾಷ್ಟ್ರದಲ್ಲಿ ಕಂಡ ರಾಜಕೀಯ ಬೆಳವಣಿಗೆಗಳನ್ನು ರಾಜ್ಯ ರಾಜಕಾರಣದಲ್ಲಿಯೂ ಮುಂದಿನ ದಿನಗಳಲ್ಲಿ ಕಂಡರೇ ಆಶ್ಚರ್ಯ ಪಡಬೇಕಿಲ್ಲ ಎಂದು ಹೇಳಿದರು.
ಒಂದು ವೇಳೆ ಅಂತಹ ಬೆಳವಣಿಗೆಗಳು ನಡೆದ್ರೆ, ಅಂತಹ ನಾಯಕನನ್ನು ಬೆಂಬಲಿಸಬೇಕೆ ಅಥವಾ ಬೇಡವಾ ಅನ್ನುವುದನ್ನು ಬಿಜೆಪಿ ಹೈಕಮಾಂಡ್ ನಿರ್ಧರಿಸುತ್ತೆ ಎಂದರು.
ರಾಜ್ಯ ಬಿಜೆಪಿಯ್ಲಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯ ಅಥವಾ ಬಣಗಳು ಇಲ್ಲ. ಬೆಂಗಳೂರಿನಲ್ಲಿ ಸಭೆ ನಡೆಸುವ ಬಂಡಾಯ ನಾಯಕರ ಯೋಜನೆ ಬಗ್ಗೆ ಪ್ರತಿಕ್ರಿಯಿಸಿದ ಅವರು ಹೈಕಮಾಂಡ್ ಎಲ್ಲಾ ಭಿನ್ನಾಭಿಪ್ರಾಯಗಳನ್ನು ನಿವಾರಿಸುತ್ತದೆ ಮತ್ತು ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಒಗ್ಗಟ್ಟಿನ ಹೋರಾಟವನ್ನು ನಡೆಸುತ್ತದೆ ಎಂದು ಅವರು ಹೇಳಿದರು.