ಮೈಸೂರು: ಮೈಸೂರಿನ ರಸ್ತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರಿಡುವ ವಿಚಾರವಾಗಿ ನಗರಪಾಲಿಕೆ ಆಯುಕ್ತರಿಗೆ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಪತ್ರ ಬರೆದಿದ್ದು, ಕೂಡಲೇ ರಾಜಕುಮಾರಿ ರಸ್ತೆ ನಾಮಫಲಕ ಅಳವಡಿಸುವಂತೆ ಆಗ್ರಹಿಸಿದ್ದಾರೆ. ಮೈಸೂರು ನಗರ ಪಾಲಿಕೆ ವತಿಯಿಂದ ಪ್ರಿನ್ಸೆಸ್ ರೋಡ್ ನಾಮಫಲಕ ಅಳವಡಿಸಿ ಗೊಂದಲವನ್ನು ನಿವಾರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಮಾಜಿ ಸಂಸದ ಪ್ರತಾಪಸಿಂಹ ಸಭೆ ನಡಾವಳಿಯಲ್ಲೂ ‘ಪ್ರಿನ್ಸೆಸ್ ರಸ್ತೆ’ ಎಂದು ನಮೂದಾಗಿರುವ ದಾಖಲೆ ನೀಡಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಹೆಸರು ರಸ್ತೆಗೆ ಇರುವ ಪ್ರಸ್ತಾವಕ್ಕೆ ಬೆಂಬಲ ನೀಡದಂತೆ ಪ್ರತಾಪಸಿಂಹ ಅವರಿಗೂ ಮನವಿ ಮಾಡಿದ್ದಾರೆ.
ಅಂತರ್ಜಾಲದಿಂದ ಪಡೆದುಕೊಂಡಿರುವ ದಿನಾಂಕ-02.04.2011 ರಂದು ಪತ್ರಿಕೆಯಲ್ಲಿ ಸುದ್ದಿಯ ಐದು ಪುಟಗಳ ದಾಖಲಾತಿಯ ಪ್ರತಿಯಲ್ಲಿ “Princess road to be reopened soon” ಎಂಬ ಶೀರ್ಷಿಕೆ ಅಡಿಯಲ್ಲಿ ಸುದ್ದಿ ಪ್ರಕಟವಾಗಿರುವುದು ತಿಳಿದು ಬರುತ್ತದೆ. ಅಂದಿನ ಜಿಲ್ಲಾಧಿಕಾರಿಯಾಗಿದ್ದ ಶ್ರೀ ಹರ್ಷ ಗುಪ್ತಾರವರು ಸ್ಥಳ ಪರಿಶೀಲನೆ ನಡೆಸಿ, ರಾಜಕುಮಾರಿ ರಸ್ತೆಯಲ್ಲಿ ನಡೆಸುತ್ತಿರುವ ಕಾಮಗಾರಿಯು ಸದ್ಯದಲ್ಲಿಯೇ ಮುಕ್ತಾಯಗೊಳಿಸಿ, ಸಂಚಾರಕ್ಕೆ ಅನುಕೂಲವಾಗುವಂತೆ ಪುನಃ ಆರಂಭ ಮಾಡುವುದಾಗಿ ತಿಳಿಸಿರುವಂತಹ ಸದರಿ ವಿಚಾರವನ್ನು ಪ್ರಕಟಿಸಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ. ಲಕ್ಷ್ಮೀಸರ್ವಿಸ್ ಸ್ಟೇಷನ್ ಎಂಬ ಪೆಟ್ರೋಲ್ ಬಂಕ್ಗೆ ಸಂಬಂಧಿಸಿದ ಮಾಹಿತಿಯನ್ನು “ಜಸ್ಟ್ ಡಯಲ್” ನಿಂದ ಅಂತರ್ಜಾಲದ ಮೂಲಕ ಪಡೆದುಕೊಂಡಿರುವ ಒಂದು ಪುಟದ ದಾಖಲೆಯ ನಕಲು ಪ್ರತಿಯನ್ನು ಲಗತ್ತಿಸಿದ್ದು, ಅದನ್ನು ಗಮನಿಸಿದಾಗ ರಾಜಕುಮಾರಿ ರಸ್ತೆಯಲ್ಲಿ ಆಕಾಶವಾಣಿ ಬಳಿ ಸದರಿ ಪೆಟ್ರೋಲ್ ಬಂಕ್ ಇರುವುದಾಗಿ ನಮೂದಿಸಿರುವುದು ತಿಳಿದು ಬರುತ್ತದೆ ಎಂದು ಸ್ನೇಹಮಯಿ ಕೃಷ್ಣ ಉಲ್ಲೇಖಿಸಿದ್ದಾರೆ.
ಚಾಮರಾಜ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಮತಗಟ್ಟೆ ವಿವರಗಳ ಮಾಹಿತಿಯನ್ನು ಅಂತರ್ಜಾಲದ ಮೂಲಕ ಪಡೆದು ಎರಡು ಪುಟಗಳ ಪ್ರತಿಯನ್ನು ಲಗತ್ತಿಸಿದ್ದು ಅದರಲ್ಲಿನ ಅಂಶವನ್ನು ಗಮನಿಸಿದಾಗ, ಕ್ರಮ ಸಂಖ್ಯೆ 166 ರಲ್ಲಿ ರೈಲ್ವೆ ಕಾಲೋನಿಯ ರಾಜಕುಮಾರಿ ರಸ್ತೆ ಯಲ್ಲಿರುವ ಭಾರತಿ ಸ್ತ್ರೀ ಸಮಾಜ ಶಾಲೆಯಲ್ಲಿ ಮತಗಟ್ಟೆ ಇರುವುದನ್ನು ಉಲ್ಲೇಖಿಸಿರುವುದು ತಿಳಿದು ಬರುತ್ತದೆ. ಕರ್ನಾಟಕ ಗ್ರಾಹಕ ವೇದಿಕೆಯ ಅಧ್ಯಕ್ಷರಾಗಿದ್ದ ಡಾ.ಎಸ್.ಪಿ.ತಿರುಮಲ ರಾವ್ರವರ ದಿನಾಂಕ:- 12.07.2014 ರಂದು ಮಾನ್ಯ ಜಿಲ್ಲಾಧಿಕಾರಿಗಳಿಗೆ ಹಾಗೂ ಪ್ರಾಚ್ಯ ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಆಯುಕ್ತರಿಗೆ ಬರೆದಿರುವ ಪತ್ರ, ದಿನಾಂಕ:- 16.11.2015 ರಂದು ಅವರ ವಕೀಲರಾದ ಶ್ರೀ ವಿ.ರವಿಕುಮಾರ್ರವರಿಂದ ನಿಮಗೆ ನೀಡಿರುವ ಕಾನೂನುಬದ್ಧ ತಿಳಿವಳಿಕೆ ಪತ್ರದ ನಕಲು ಪ್ರತಿಯನ್ನು ಈ ಮನವಿಪತ್ರದೊಂದಿಗೆ ಲಗತ್ತಿಸಿದ್ದು, ಮೇಲ್ಕಂಡಂತೆ ರಾಜಕುಮಾರಿ ರಸ್ತೆ ಎಂಬ ಹೆಸರನ್ನು ಉಳಿಸಿಕೊಳ್ಳಬೇಕೆಂದು ವಿನಂತಿಸಿಕೊಂಡಿರುವುದು ತಿಳಿದು ಬರುತ್ತದೆ ಎಂದು ಸ್ನೇಹಮಯಿ ಕೃಷ್ಣ ಉಲ್ಲೇಖಿಸಿದ್ದಾರೆ.
ತಯಾರಿಸಿರುವ ಮೈಸೂರು ನಗರಕ್ಕೆ ಸಂಬಂಧಿಸಿದಂತೆ 2012 ರಲ್ಲಿ ಮೈಸೂರಿನ ಸಮಗ್ರ ಸಂಚಾರ ಮತ್ತು ಸಾರಿಗೆ ಯೋಜನೆಗೆ ಸಂಬಂಧಿಸಿದ ಮೂರು ಪುಟಗಳ ದಾಖಲೆಯನ್ನು (ಒಟ್ಟು 85 ಪುಟಗಳಿದ್ದು ಮೂರು ಪುಟಗಳನ್ನು ಮಾತ್ರ ಲಗತ್ತಿಸಲಾಗಿದೆ)ಅಂತರ್ಜಾಲದ ಮುಖಾಂತರ ಪಡೆದುಕೊಂಡು ಈ ಮನವಿಪತ್ರದೊಂದಿಗೆ ಲಗತ್ತಿಸಿದ್ದು, ಕೆ.ಆರ್.ಎಸ್ ರಸ್ತೆಯಿಂದ ಗುಂಡೂರಾವ್ನಗರ ರಸ್ತೆಯವರೆಗಿನ ಕಾರಿಡಾರ್-2 ಯೋಜನೆಯಲ್ಲಿನ 5ನೇ ಕಂಡಿಕೆಯನ್ನು ಗಮನಿಸಿದಾಗ, ದಾಸಪ್ಪ ರಸ್ತೆಯ ಬಳಿಯಿರುವ ರಾಜಕುಮಾರಿ ರಸ್ತೆಯ ಉಲ್ಲೇಖ ಇರುವುದು ತಿಳಿದು ಬರುತ್ತದೆ. ರೈಲ್ವೆ ಯೋಜನೆಗೆ ಸಂಬಂಧಿಸಿದಂತೆ ಹಿಂದಿನ ಮೈಸೂರು ಸಂಸದರಾದ ಶ್ರೀ ಪ್ರತಾಪ್ ಸಿಂಹರವರು ರೈಲ್ವೆ ಅಧಿಕಾರಿಗಳೊಂದಿಗೆ ದಿನಾಂಕ:- 28.06.2023 ರಂದು ನಡೆಸಿರುವ ಸಭೆಯ ಐದು ಪುಟದ ಮಾಹಿತಿ ಯನ್ನು ಅಂತರ್ಜಾಲ ಮೂಲಕ ಪಡೆದುಕೊಂಡಿದ್ದು ಅದನ್ನು ಈ ಮನವಿಪತ್ರದೊಂದಿಗೆ ಲಗತ್ತಿಸಿದ್ದು ಮೂರನೇ ಪುಟದಲ್ಲಿನ ವಿವರವನ್ನು ಗಮನಿಸಿದಾಗ, ಮೂರನೇ ಪ್ರವೇಶ ದ್ವಾರವನ್ನು ರಾಜಕುಮಾರಿ ರಸ್ತೆಯಲ್ಲಿ ತೆರೆಯುವ ಬಗ್ಗೆ ಮಾತನಾಡಿರುವುದು ತಿಳಿದು ಬರುತ್ತದೆ ಎಂದು ಅವರು ತಿಳಿಸಿದ್ದಾರೆ.


