ರಾಜಕೀಯದಲ್ಲಿ ಗಾರುಡಿಗ ಕನ್ನಡ ನಾಡು ಕಂಡ ಧೀಮಂತ ನಾಯಕ ಎಸ್.ಎಂ ಕೃಷ್ಣ ಅವರು ಬೆಳಗಿನ ಜಾವ ವಿಧಿವಶರಾಗಿದ್ದಾರೆ. ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಕೃಷ್ಣ ಅವರು ಬೆಂಗಳೂರಿನ ಸದಾಶಿವ ನಗರ ನಿವಾಸದಲ್ಲಿ ಅಗಲಿದ್ದಾರೆ.
1932 ರಲ್ಲಿ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ಜನಿಸಿದ್ದ ಎಸ್ಎಂ ಕೃಷ್ಣ 1962ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಮಾಡಿದರು. ನಂತರದ ದಿನಗಳಲ್ಲಿ ವಿಧಾನ ಪರಿಷತ್, ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರಾಗಿ ಸುಮಾರು 60ಕ್ಕೂ ಹೆಚ್ಚು ವರ್ಷಗಳ ಸುದೀರ್ಘ ರಾಜಕೀಯ ಸೇವೆ ಸಲ್ಲಿಸಿ ದೊಡ್ಡ ಹೆಜ್ಜೆ ಗುರುತನ್ನು ಬಿಟ್ಟು ಹೋಗಿದ್ದಾರೆ.
ರಾಜಕೀಯ ಜೀವನದಲ್ಲಿ ಅವರು ಒಟ್ಟು 10 ಚುನಾವಣೆಗಳನ್ನು ಎದುರಿಸಿದ್ದರು. 6 ವಿಧಾನಸಭಾ ಚುನಾವಣೆಗಳನ್ನು ಎದುರಿಸಿದ್ದು ಇವುಗಳಲ್ಲಿ 4 ರಲ್ಲಿ ಗೆಲುವು, 2 ಚುನಾವಣೆಯಲ್ಲಿ ಸೋಲನ್ನು ಕಂಡಿದ್ದರು. 4 ಲೋಕಸಭಾ ಚುನಾವಣೆಗಳನ್ನು ಎದುರಿಸಿದ್ದು ಈ ಪೈಕಿ 3 ಚುನಾವಣೆಯಲ್ಲಿ ಗೆಲುವು ಪಡೆದು, 1 ಚುನಾವಣೆಯಲ್ಲಿ ಸೋಲು ಕಂಡಿದ್ದರು. ಮದ್ದೂರು ಕ್ಷೇತ್ರದಿಂದ 3 ಬಾರಿ ಹಾಗೂ ಚಾಮರಾಜಪೇಟೆಯಿಂದ 1 ಬಾರಿ ಶಾಸಕರಾಗಿದ್ದರು. ಮೂರು ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿದ್ದರು. 1 ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರು. 2 ಬಾರಿ ರಾಜ್ಯಸಭಾ ಸದಸ್ಯರಾಗಿದ್ದರು.
ಮುಖ್ಯಮಂತ್ರಿಯಾಗಿ SM ಕೃಷ್ಣ ಕೊಡುಗೆ
- ಕೃಷ್ಣ ಅವರು ಮುಖ್ಯಮಂತ್ರಿ ಆಗಿ ನೀಡಿದ ಕೊಡುಗೆ ಅಪಾರ
- ಮೊಟ್ಟ ಮೊದಲ ಬಾರಿಗೆ ಬ್ರಾಂಡ್ ಬೆಂಗಳೂರಿನ ಕನಸು ಕಂಡು ಅದರ ಸಾಕಾರಕ್ಕೆ ಹೆಜ್ಜೆ
- ಭಷ್ಟ್ರ ಅಧಿಕಾರಿಗಳ ದುಸ್ವಪ್ನವಾಗಿದ್ದ ಎನ್.ವೆಂಕಟಾಚಲರನ್ನು ಲೋಕಾಯುಕ್ತಕ್ಕೆ ನೇಮಕ
- ಲೋಕಾಯುಕ್ತ ಸಂಸ್ಥೆಯನ್ನ ಬೆಳಕಿಗೆ ತಂದ ಸಾಧನೆ
- ಭೂ ದಾಖಲೆಗಳನ್ನ ಮೊದಲ ಬಾರಿಗೆ ಡಿಜಿಟಲಿಕರಣ ಮಾಡಿದ್ದೇ ಕೃಷ್ಣ
- ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಬಿಸಿ ಊಟದ ಯೋಜನೆ ಜಾರಿ
- ಸಹಕಾರ ಸಂಸ್ಥೆಗಳ ಸದಸ್ಯರಿಗೆ ಯಶಸ್ವಿನಿ ಯೋಜನೆ ಮೂಲಕ ಆರೋಗ್ಯ ವಿಮೆ
- ಅಂತರ್ಜನ ಹೆಚ್ಚಿಸಲು ಜಲಸಂವರ್ಧನೆ ಯೋಜನೆ ಮೂಲಕ ಕೆರೆ ತುಂಬಿಸೋ ಕೆಲಸ
- ಬ್ರಾಂಡ್ ಬೆಂಗಳೂರಿನ ಮೂಲಕ ಬೆಂಗಳೂರನ್ನು ಸಿಂಗಾಪುರ ಮಾಡಲು ಹೊರಟಿದ್ದರು
- ಕೊನೆಗೆ ಕೇವಲ ನಗರಗಳ ಸಿಎಂ ಎಂಬ ವಿಪಕ್ಷಗಳ ಟೀಕೆ ಗುರಿಯಾಗಿದ್ದ ಎಸ್.ಎಂ.ಕೃಷ್ಣ
1999ರಿಂದ 2004 ಕೃಷ್ಣ ರವರು ಮುಖ್ಯಮಂತ್ರಿಯಾಗಿ ನಾಡಿಗೆ ಸಲ್ಲಿಸಿದ ಸೇವೆ ಅವಿಸ್ಮರಣೀಯ. ಸ್ತ್ರೀ ಶಕ್ತಿ, ಅಕ್ಷರ ದಾಸೋಹ, ರೈತರಿಗೆ ಪಹಣಿ ನೀಡುವ ಭೂಮಿ ಯೋಜನೆ, ಯಶಸ್ವಿನಿ ಯೋಜನೆ ಸಮಾಜದ ಸರ್ವ ಜನರನ್ನು ಸ್ಪರ್ಶಿಸಿ ಜನಮನ ಗೆದ್ದ ಯೋಜನೆಗಳಾಗಿವೆ.