ಚಿತ್ರದುರ್ಗ : ಜ್ಯಾತ್ಯಾತೀತ ಭಾರತ ರಾಷ್ಟ್ರದಲ್ಲಿ ಬೆರಳಿಣಿಕೆಯ ಧರ್ಮಗಳಲ್ಲಿ 3,000 ಜಾತಿಗಳು ಮತ್ತು 25,000 ಉಪ-ಜಾತಿಗಳಿವೆ. ಭಾರತದ ಪ್ರಸ್ತುತ ಜನಂಖ್ಯೆ ಸರಿಸುಮಾರು 144 ಕೋಟಿ ಜನಸಂಖ್ಯೆಯಲ್ಲಿ ಪ್ರಜಾಸತ್ತಾತ್ಮಕ ಮತ ಹಾಕುವ ಅರ್ಹರು ಸರಿಸುಮಾರು 96.8 ಕೋಟಿ ಮತದಾರರು ಇದ್ದರೇ ಎಂದು ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಗುರುವಾರ ಹೇಳಿದರು.
ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ, ಭೋವಿ ಗುರುಪೀಠದಲ್ಲಿ ಮಾತನಾಡಿದ ಅವರು, ಡಾ. ಬಿ.ಆರ್.ಅಂಬೇಡ್ಕರ್ ಅವರು ಚುನಾವಣೆ ಮೂಲಕ ದೇಶದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ನೆಲೆಗೊಳ್ಳಬೇಕು ಎಂದು ಕನಸು ಕಂಡಿದ್ದರು. ಬೃಹತ್ತಾದ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ನಮ್ಮನ್ನಾಳಲು 543 ಲೋಕಾಸಭಾ ಸದಸ್ಯರನ್ನು ಆಯ್ಕೆ ಮಾಡುವ ಜವಾಬ್ದಾರಿ ಪ್ರಜಾಸತ್ತಾತ್ಮಕ ರಾಷ್ಟ್ರದ ಪ್ರಭುಗಳಾದ ಪ್ರಜೆಗಳ ಮೇಲಿದೆ ಎಂದರು.
ಲೋಕಸಭಾ ಹೇಗಿರಬೇಕೆಂದರೆ ಬಸವಣ್ಣನವರ ಅನುಭವ ಮಂಟಪದಂತೆ ಇರಬೇಕು. ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಸಂವಿಂಧಾನದ ಮೂಲ ಆಶಯ. ಈ ಆಶಯ ಈಡೇರಲು ಒಂದೊಂದು ಜನಾಂಗದ/ ಸಮುದಾಯದ ಪ್ರತಿನಿಧಿ ಸಂಸತ್ ಭವನದಲ್ಲಿದ್ದರೆ ಮಾತ್ರ ಹಿಂದುಳಿದ ಅತಿಹಿಂದುಳಿದ ಸಮೂದಾಯಗಳಿಗೆ ಧ್ವನಿ ಬರಲು ಸಾಧ್ಯ. ಕೇವಲ ಬಂಡವಾಳ ಶಾಹಿಗಳು ಸಂಸತ್ ಪ್ರವೇಶ ಮಾಡುವಂತಾದರೆ ಭವಿಷ್ಯದಲ್ಲಿ ಪ್ರಜಾಪ್ರಭುತ್ವ ತೆರೆಮರೆಗೆ ಸರೆದು ನಮ್ಮ ಹಕ್ಕುಗಳು ಕಳೆದುಕೊಳ್ಳುತ್ತಾ ಗುಲಾಮಗಿರಿ ವ್ಯವಸ್ಥೆಗೆ ಜಾರುತ್ತೇವೆ. ಜಾಣರಾಗಿ ಜಾಗೃತರಾಗಿ ಎಂದು ಕರೆ ನೀಡಿದರು.
ನ್ಯೂಜಿಲೆಂಡ್ ಸಂಸತ್ತಿನಲ್ಲಿ ಅತ್ಯಂತ ಕಿರಿಯ ಸಂಸದೆಯಾದ ಆ ಭಾಗದ ಬುಡಕಟ್ಟು ಸಮುದಾಯಾದ ಹನಾ ರಾವಿತಿ ಅವರು ತಮ್ಮ ಸಾಂಸ್ಕೃತಿಕ ಭಾಷೆ ಹಾಗೂ ಹಾಡುಗಾರಿಕೆ ಮೂಲಕ ಈಡಿ ಜಗತ್ತನ್ನೆ ತನ್ನ ಸಮುದಾಯದ ಬಗ್ಗೆ ಚರ್ಚಿಸುವಂತೆ ಹಾಗೂ ವಿಮರ್ಶೆಗೆ ಒಳಪಡಿಸುವಂತೆ ತನಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡರು. ಈ ರೀತಿಯಾಗಿ ಭಾರತದ ದೇಶದಲ್ಲಿ ಧ್ವನಿ ಮಾಡುವ ತನ್ನ ಸಮುದಾಯವನ್ನು ಜಗತ್ತಿಗೆ ಪರಿಚಯಿಸುವ ಹಾಗೂ ನೈಜ ಜ್ಯಾತ್ಯತೀತ ರಾಷ್ಟ್ರ ನಿರ್ಮಾಣಕ್ಕೆ ಯೊಗ್ಯ ಅರ್ಹತೆಯುಳ್ಳ ಸರ್ವಸಮೂದಾಯದ ವ್ಯಕ್ತಿಗಳಿಗೆ ಅವಕಾಶ ನೀಡಬೇಕಿದೆ ಎಂದು ತಿಳಿಸಿದರು.
ದೇಶದ ಅಭಿವೃದ್ಧಿಗಾಗಿ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಜವಾಬ್ದಾರಿ ದೇಶದ ಪ್ರತಿಯೊಬ್ಬ ವ್ಯಕ್ತಿ ಮೇಲಿದೆ. ಇದಕ್ಕಾಗಿ ಮತದಾನ ಮಾಡುವುದು ಅತ್ಯಗತ್ಯವಾಗಿದೆ. ಯಾವುದೇ ಮತದಾರ ಮತದಾನದಿಂದ ಹೊರಗುಳಿಯಬಾರದು. ಒಳ್ಳೆಯ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು. ನಾವು ಯೋಚಿಸಿ ನಮ್ಮ ಅಮೂಲ್ಯ ಮತ ಚಲಾಯಿಸುವುದು ಅತೀ ಆವಶ್ಯಕ. ಯೋಗ್ಯ, ಸಮರ್ಥ ಜನನಾಯಕನ ಆಯ್ಕೆ ನಮ್ಮ ಕರ್ತವ್ಯವಾಗಿದೆ ಎಂದು ತಿಳಿ ಹೇಳಿದರು.
ಮತದಾನದ ಹಕ್ಕನ್ನು ಕೇವಲ ತೆರಿಗೆದಾರರಿಗೆ, ಭೂ ಒಡೆಯರಿಗೆ, ಕೆಲ ವರ್ಗದವರಿಗೆ ಸೀಮಿತಗೊಳಿಸಲು ಹೊರಟವರ ವಿರುದ್ಧವಾಗಿ ಭಾರತ ದೇಶದಲ್ಲಿರುವ ಭಿನ್ನ ಧರ್ಮ, ಜಾತಿ, ಲಿಂಗ, ಭಾಷೆ, ಸಂಸ್ಕೃತಿಗಳನ್ನು ಪ್ರತಿನಿಧಿಸುವ 18 ವರ್ಷ ತುಂಬಿದ ಪ್ರತಿಯೊಬ್ಬ ವ್ಯಕ್ತಿಗಳಿಗೆ ಮತದಾನದ ಹಕ್ಕನ್ನು ನೀಡಿದವರು ಡಾ.ಅಂಬೇಡ್ಕರ್. ಅವರು ನೀಡಿದ ಈ ಮಹತ್ವವನ್ನು ಅರ್ಥೈಸಿಕೊಂಡು ಪ್ರಜಾಪ್ರಭುತ್ವದ ಹಬ್ಬದಲ್ಲಿ ಸಹಭಾಗಿಯಾಗಿ ಸಂಭ್ರಮಿಸೋಣ ಎಂದು ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿದರು.