ರಾಜ್ಯಸುದ್ದಿ

ಸಿದ್ದಗಂಗಾ ಮಠಕ್ಕೆ ‘ಜಲ’ ಗಂಡಾಂತರ: KIADB ನಿರ್ಲಕ್ಷ್ಯಕ್ಕೆ 10 ಸಾವಿರ ಮಕ್ಕಳ ದಾಸೋಹಕ್ಕೆ ಸಂಚಕಾರ!

ತುಮಕೂರು: ತುಮಕೂರು ಜಿಲ್ಲೆಯ ಪವಿತ್ರ ಕ್ಷೇತ್ರ ಶ್ರೀ ಸಿದ್ದಗಂಗಾ ಮಠಕ್ಕೆ ಈಗ ನೀರಿನ ಭೀತಿ ಎದುರಾಗಿದೆ. ಕೈಗಾರಿಕಾ ಸಚಿವರ ಭರವಸೆ ಕೇವಲ ಕಾಗದಕ್ಕಷ್ಟೇ ಸೀಮಿತವಾಗಿದ್ದು, ಕೆಐಎಡಿಬಿ (KIADB) ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಮಠದ ಹತ್ತು ಸಾವಿರ ವಿದ್ಯಾರ್ಥಿಗಳು ಹಾಗೂ ಲಕ್ಷಾಂತರ ಭಕ್ತಾದಿಗಳು ನೀರಿಲ್ಲದೆ ತೊಂದರೆ ಅನುಭವಿಸುವ ಆತಂಕ ಮೂಡಿದೆ.

ಹೊನ್ನೆನಹಳ್ಳಿ ಕೆರೆಯಿಂದ ದೇವರಾಯಪಟ್ಟಣ ಕೆರೆಗೆ ನೀರು ಹರಿಸಿ, ಅಲ್ಲಿಂದ ಮಠಕ್ಕೆ ಸರಬರಾಜು ಮಾಡುವ ಯೋಜನೆಯ ವಿದ್ಯುತ್ ಬಿಲ್ ಮೊತ್ತ ಸುಮಾರು 70 ಲಕ್ಷ ರೂಪಾಯಿ ತಲುಪಿದೆ. ಕಳೆದ ವರ್ಷ ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಮಧ್ಯಪ್ರವೇಶಿಸಿ, ಮಠವು ಬಿಲ್ ಪಾವತಿಸುವ ಅಗತ್ಯವಿಲ್ಲ, ಸಂಪೂರ್ಣ ಹಣವನ್ನು ಸರ್ಕಾರವೇ ಭರಿಸಲಿದೆ ಎಂದು ಆಶ್ವಾಸನೆ ನೀಡಿದ್ದರು. ಆದರೆ ಸಚಿವರ ಈ ಮಾತು ಒಂದು ವರ್ಷ ಕಳೆದರೂ ಈಡೇರಿಲ್ಲ.

ವಿದ್ಯುತ್ ಬಿಲ್ ಪಾವತಿಯಾಗದ ಹಿನ್ನೆಲೆಯಲ್ಲಿ ಬೆಸ್ಕಾಂ (BESCOM) ಅಧಿಕಾರಿಗಳು ಹೊನ್ನೆನಹಳ್ಳಿ ಪಂಪ್‌ಹೌಸ್‌ನ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ಪರಿಣಾಮವಾಗಿ ಕಳೆದ ಎಂಟು ತಿಂಗಳಿಂದ ದೇವರಾಯಪಟ್ಟಣ ಕೆರೆಗೆ ನೀರಿನ ಪೂರೈಕೆ ನಿಂತುಹೋಗಿದೆ. ಪ್ರಸ್ತುತ ಕೆರೆಯಲ್ಲಿ ನೀರು ಬರಿದಾಗುತ್ತಿದ್ದು, ಮಠದ ದೈನಂದಿನ ಚಟುವಟಿಕೆಗಳಿಗೆ ದೊಡ್ಡ ಹೊಡೆತ ಬೀಳುವ ಮುನ್ಸೂಚನೆ ಸಿಕ್ಕಿದೆ.

ಮುಂಬರುವ ಜಾತ್ರೆಗೆ ಎದುರಾದ ಭೀತಿ:
ಫೆಬ್ರವರಿ 6ರಿಂದ 20ರವರೆಗೆ ಮಠದಲ್ಲಿ ಐತಿಹಾಸಿಕ ಜಾತ್ರಾ ಮಹೋತ್ಸವ ನಡೆಯಲಿದ್ದು, ಪ್ರತಿದಿನ ಲಕ್ಷಾಂತರ ಭಕ್ತರು ಆಗಮಿಸಲಿದ್ದಾರೆ. ಜಾತ್ರೆಯ ವೇಳೆ ಅಡುಗೆ, ಸ್ನಾನ ಹಾಗೂ ಇತರ ದಾಸೋಹ ಕಾರ್ಯಗಳಿಗೆ ಅಪಾರ ಪ್ರಮಾಣದ ನೀರು ಅಗತ್ಯವಿದ್ದು, ಈಗಿರುವ ಕೆರೆಯ ನೀರು ಜಾತ್ರೆಯ ಹೊತ್ತಿಗೆ ಸಂಪೂರ್ಣ ಖಾಲಿಯಾಗುವ ಸಾಧ್ಯತೆಯಿದೆ.

ಮಠದ ಆವರಣದಲ್ಲಿಯೇ ವಾಸಿಸುತ್ತಿರುವ ಸಾವಿರಾರು ಮಕ್ಕಳ ನಿತ್ಯಕರ್ಮಗಳಿಗೆ ನೀರಿನ ಕೊರತೆ ಉಂಟಾಗುವುದು ಬಹುತೇಕ ನಿಶ್ಚಿತವಾಗಿದೆ. ಈ ಗಂಭೀರ ಸಮಸ್ಯೆಯ ಕುರಿತು ಕೆಐಎಡಿಬಿ ಅಧಿಕಾರಿಗಳನ್ನು ಪ್ರಶ್ನಿಸಿದರೆ ಅಸಡ್ಡೆಯ ಉತ್ತರಗಳು ಕೇಳಿಬರುತ್ತಿವೆ. ಕೆಐಎಡಿಬಿ ಮುಖ್ಯ ಇಂಜಿನಿಯರ್ ಅನಿಲಕುಮಾರ್ ರಾಥೋಡ್ ಅವರು ಮಾಹಿತಿಗಾಗಿ ಮೂರ್ನಾಲ್ಕು ದಿನ ಬಿಟ್ಟು ಬನ್ನಿ ಎಂದು ಹೇಳುವ ಮೂಲಕ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಸರ್ಕಾರವು ಕೂಡಲೇ ಮಧ್ಯಪ್ರವೇಶಿಸಿ ಬಾಕಿ ಬಿಲ್ ಪಾವತಿಸಿ ವಿದ್ಯುತ್ ಸಂಪರ್ಕ ಕಲ್ಪಿಸದಿದ್ದರೆ, ಬರುವ ದಿನಗಳಲ್ಲಿ ಸಿದ್ದಗಂಗಾ ಮಠವು ತೀವ್ರ ಜಲಸಂಕಷ್ಟ ಎದುರಿಸಬೇಕಾಗುತ್ತದೆ ಎಂಬುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

Comments (0)

Your email address will not be published. Required fields are marked *

Back to top button