ಬೆಂಗಳೂರು: ಗಂಡ-ಹೆಂಡತಿಯ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತಿದೆ. ಆದರೆ ಇಲ್ಲೊಂದು ದಂಪತಿಗಳ ಜಗಳ ಕೊಲೆಯಲ್ಲಿ ಮುಕ್ತಾಯವಾಗಿದೆ. ಪತ್ನಿ ಶಾಪಿಂಗ್ಗೆ ಹೋಗಿದ್ದಕ್ಕೆ ಸಿಟ್ಟಿಗೆದ್ದ ಪತಿ ಕಾಲಿನಿಂದ ಕುತ್ತಿಗೆ ಹಿಸುಕಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ನಡೆದಿದೆ.
ಶ್ರೀನಿವಾಸಪುರ ಮೂಲದ ಪದ್ಮಜಾ (29) ಕೊಲೆಯಾದ ಮಹಿಳೆ. ಪತಿ ಹರೀಶ್ ಕೊಲೆ ಆರೋಪಿಯಾಗಿದ್ದಾನೆ. ಬಿಇ ವ್ಯಾಸಂಗ ಮುಗಿಸಿದ್ದ ದಂಪತಿ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ರು.
ಕೆಲ ತಿಂಗಳ ಹಿಂದೆ ಆರೋಪಿ ಹರೀಶ್ ಕೆಲಸ ಬಿಟ್ಟಿದ್ದಾನೆ. ಪತ್ನಿಯ ಜೊತೆ ಸಂಸಾರಿಕ ಜೀವನ ನಡೆಸದೆ ಪ್ರತಿ ದಿನ ಗಲಾಟೆ ಮಾಡಿದ್ದಾನೆ. ಜೂನ್ 7 ರಂದು ಪತ್ನಿ ಶಾಪಿಂಗ್ ಹೋಗಿದ್ದಕ್ಕೆ ಗಲಾಟೆ ಮಾಡಿದ್ದಾನೆ. ಈ ವಿಚಾರಕ್ಕೆ ಸಿಟ್ಟಿಗೆದ್ದ ಹರೀಶ್ ಪತ್ನಿಯ ಕುತ್ತಿಗೆ ಹಿಸುಕಿ ಹಲ್ಲೆ ಮಾಡಿ ಬಳಿಕ ನೆಲಕ್ಕೆ ಬೀಳಿಸಿ ಪದ್ಮಜಾ ಕುತ್ತಿಗೆ ಮೇಲೆ ಕಾಲಿಟ್ಟು ತುಳಿದು ಕೊಲೆ ಮಾಡಿದ್ದಾನೆ.
ಆದರೆ ತನ್ನ ಪತ್ನಿ ಪ್ರಜ್ಞೆ ತಪ್ಪಿ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರ ಬಳಿ ಹರೀಶ್ ಹೇಳಿದ್ದ. ಪೊಲೀಸರಿಗೆ ಹರೀಶ್ ಮಾತಿನ ಮೇಲೆ ಅನುಮಾನ ಮೂಡಿದ್ದು ವಿಚಾರಣೆ ನಡೆಸಿದಾಗ ನಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಘಟನೆ ಸಂಬಂಧ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಹರೀಶ್ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.


