ಕಡಗಂಚಿ ಗ್ರಾಮದಲ್ಲಿ ಯುವಕನ ಮೇಲೆ ಗುಂಡಿನ ದಾಳಿ

ಕಲಬುರಗಿ: ಕಡಗಂಚಿ ಗ್ರಾಮದಲ್ಲಿ ಯುವಕನೊಬ್ಬನ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಕಡಗಂಚಿ ಗ್ರಾಮದಲ್ಲಿ ನಡೆದ ಘಟನೆ. ಶ್ರೀಕಾಂತ ಪೂಜಾರಿ (28) ಎಂಬಾತನ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು, ಎಡಗೈಗೆ ಗುಂಡೇಟು ತಗುಲಿ ಗಾಯಗೊಂಡಿದ್ದಾನೆ.
ಕಳೆದ ರಾತ್ರಿ ಕಡಗಂಚಿ ಗ್ರಾಮದ ಮನೆಯೊಂದರಲ್ಲಿ ಶ್ರೀಕಾಂತ, ಮಾಳಪ್ಪ, ಕಾಂತಪ್ಪ ಸೇರಿದಂತೆ ಆರೇಳು ಜನರು ಸೇರಿಕೊಂಡು ಪಾರ್ಟಿ ಮಾಡುತ್ತಲಿದ್ದರು. ಪಾರ್ಟಿ ವೇಳೆ ಜಗಳ ಉಂಟಾಗಿ ಶ್ರೀಕಾಂತ ಮೇಲೆ ಗುಂಡು ಹಾರಿಸಲಾಗಿದೆ ಎಂದು ತಿಳಿದುಬಂದಿದೆ.
ಶ್ರೀಕಾಂತ ಪೂಜಾರಿ ಮೇಲೆ ಗುಂಡಿನ ದಾಳಿ ನಡೆಸಿದ ಕಾಂತಪ್ಪ ಮತ್ತು ಮಾಳಪ್ಪ ಎಂಬುವವರನ್ನು ಪೊಲೀಸರು ಗನ್ ಸಹಿತ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದೇ ವೇಳೆ ಎಸ್ಪಿ ಅಡ್ಡೂರು ಶ್ರೀನಿವಾಸಲು, ಹೆಚ್ಚುವರಿ ಎಸ್ಪಿ ಶ್ರೀನಿಧಿ, ಆಳಂದ ಡಿಎಸ್ಪಿ ಮತ್ತು ಸಿಪಿಐ ಸೇರಿದಂತೆ ಇತರ ಪೊಲೀಸ್ ಅಧಿಕಾರಿಗಳು ಕಡಗಂಚಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




