ತುಮಕೂರು ಲೋಕಸಭೆ ಚುನಾವಣೆ ರಾಜಕೀಯಕ್ಕೆ ಟ್ವಿಸ್ಟ್ ಸಿಕ್ಕಿದೆ. ಟಿಕೆಟ್ ಸಿಗದೇ ಮುನಿಸಿಕೊಂಡಿರುವ ಬಿಜೆಪಿಯ ಮಾಜಿ ಮಂತ್ರಿ ಮಾಧುಸ್ವಾಮಿ ಅವರನ್ನು ತುಮಕೂರು ಕಾಂಗ್ರೆಸ್ ಅಭ್ಯರ್ಥಿ ಎಸ್ಪಿ ಮುದ್ದಹನುಮೇಗೌಡ ಭೇಟಿ ಮಾಡಿ ಬೆಂಬಲ ಕೊರಿದ್ದಾರೆ.
ವಿ.ಸೋಮಣ್ಣಗೆ ಬಿಜೆಪಿ ಟಿಕೆಟ್ ನೀಡಿರುವ ಕಾರಣ ಅಸಮಾಧಾನಗೊಂಡಿರುವ ಮಾಧುಸ್ವಾಮಿ, ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದರು. ನಾಲ್ಕು ದಿನದ ಹಿಂದೆ ಅಮಿತ್ ಶಾ ಕರೆದಿದ್ದ ಅತೃಪ್ತರ ಸಭೆಗೂ ಮಾಧುಸ್ವಾಮಿ ಗೈರಾಗುವ ಮುನ್ನ ಸೆಡ್ಡು ಹೊಡೆದಿದ್ದರು.
ಈ ಬೆಳವಣಿಗೆ ನಡುವೆ ಇಂದು ಚಿಕ್ಕನಾಯಕನಹಳ್ಳಿ ಜೆಸಿಪುರದಲ್ಲಿರುವ ಮಾಧುಸ್ವಾಮಿ ಅವರ ಮನೆಗೆ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ ಭೇಟಿ ನೀಡಿ ಮಹತ್ವದ ಮಾತುಕತೆ ನಡೆಸಿದರು. ಚುನಾವಣೆಯಲ್ಲಿ ತಮ್ಮ ಗೆಲುವಿಗೆ ಸಹಕರಿಸುವಂತೆ ಮುದ್ದಹನುಮೇಗೌಡ ಮನವಿ ಮಾಡಿದರು.
ಮುದ್ದಹನುಮೇಗೌಡ ನಿರ್ಗಮನದ ಬಳಿಕ ಪ್ರತಿಕ್ರಿಯೆ ನೀಡಿದ ಮಾಜಿ ಮಂತ್ರಿ ಮಾಧುಸ್ವಾಮಿ,
ಒಬ್ಬ ಅಭ್ಯರ್ಥಿಯಾಗಿ ಮುದ್ದಹನುಮೇಗೌಡ ನಮ್ಮ ಮನೆಗೆ ಬಂದಿದ್ದಾರೆ. ನಾವು ತುಂಬಾ ಹಳೆಯ ಸ್ನೇಹಿತರು. ಇಬ್ಬರು ಒಟ್ಟಿಗೆ ಶಾಸಕರಾಗಿದ್ದವರು. ಸ್ನೇಹಿತರು ಅಂತಾ ಒಬ್ಬ ಅಭ್ಯರ್ಥಿ ಮನೆಗೆ ಬಂದಾಗ ವಿಶೇಷ ಅರ್ಥ ಕಲ್ಪಿಸುವುದು ಬೇಡ.. ಇದು ಸೌಜನ್ಯದ ಭೇಟಿ. ಅಭ್ಯರ್ಥಿಯಾದವರು ಬೆಂಬಲ ಕೇಳೋದು ಸಹಜ ಪ್ರಕ್ರಿಯೆ. ಆದರೆ, ನಾವು ಬೇರೆ ಪಕ್ಷದಲ್ಲಿದ್ದುಕೊಂಡು ಅವರಿಗೆ ಸಪೋರ್ಟ್ ಮಾಡುವುದಕ್ಕೆ ಆಗುತ್ತಾ? ನಾವು ಅದೆಲ್ಲಾ ಚರ್ಚೆ ಮಾಡಿಲ್ಲ
ಎಂದು ಸ್ಪಷ್ಟಪಡಿಸಿದರು.
ರಾಜಕೀಯದಲ್ಲಿ ಹೊರಗಿನ ಮಾತೆ ಬೇರೆ.. ಒಳಗಿನ ಮಾತೆ ಬೇರೆ… ಹೀಗಾಗಿ ಈ ಬೆಳವಣಿಗೆ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಅವರಿಗೆ ಶಾಕ್ ತಂದಿದೆ.
ಇದನ್ನು ಓದಿ