ಬೆಂಗಳೂರು: ನಟ ಶಿವರಾಜ್ಕುಮಾರ್ ಅವರಿಗೆ 6 ಆಪರೇಷನ್ ಮಾಡಲಾಗಿದ್ದು 190 ಹೊಲಿಗೆ ಹಾಕಲಾಗಿದೆ. ಶಿವಣ್ಣಗೆ ತಲೆಯಲ್ಲಿ ಒಂದು ಸ್ಟಂಟ್ ಇದೆ, ಹೃದಯದಲ್ಲಿ ಒಂದು ಸ್ಟಂಟ್ ಇದ್ದು ಜ.25 ರಂದು ಬೆಂಗಳೂರಿಗೆ ಬರುತ್ತಾರೆ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.
ಶಿವಣ್ಣನಿಗೆ ನಡೆದ ಗಂಭೀರ ಶಸ್ತ್ರಚಿಕಿತ್ಸೆ ಬಗ್ಗೆ ಭಾವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ನಿಮ್ಮ ಶಿವಣ್ಣ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಮೊದಲಿಗಿಂತ ಹೆಚ್ಚು ಫಿಟ್ ಅಂಡ್ ಫೈನ್ ಆಗಿದ್ದಾರೆ. ಆದಷ್ಟು ಬೇಗ ನೀವು ಅವರನ್ನು ನೋಡಬಹುದು. ಮೊದಲಿಗಿಂತಲೂ ಚೆನ್ನಾಗಿ ಸಿನಿಮಾಗಳಲ್ಲಿ ನಟಿಸುತ್ತಾರೆ ಎಂದು ಮಧು ಬಂಗಾರಪ್ಪ ತಿಳಿಸಿದ್ದಾರೆ.
ತಮ್ಮ ತಂದೆ ತಾಯಿ ಆಶೀರ್ವಾದ, ಅಭಿಮಾನಿಗಳ ಹಾರೈಕೆ ಹಾಗೂ ವೈದ್ಯರ ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದಾರೆ. ಡಾ.ಮುರುಗೇಶ್ ಮನೋಹರ್ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಶಿವಣ್ಣ ಕ್ಯಾನ್ಸರ್ ಮುಕ್ತ ಎಂದು ಖುದ್ದು ಅವರೇ ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಮಾಹಿತಿಗಳು ಹರಿದಾಡಿತ್ತು. ತಪ್ಪು ಮಾಹಿತಿ ಹರಡುವುದು ಸರಿಯಲ್ಲ ಎಂದಿದ್ದಾರೆ.
ಕ್ಯಾನ್ಸರ್ ತಗುಲಿದ್ದ ಮೂತ್ರಕೋಶ ತೆಗೆದು, ಸರ್ಜರಿ ಬಳಿಕ ಅವರದ್ದೇ ಕರಳು ಬಳಸಿ ಕೃತಕ ಮೂತ್ರಕೋಶ ಮತ್ತೆ ಅಳವಡಿಸಲಾಗಿದೆ. ಶಿವಣ್ಣಾವರ ಮೆದುಳಿನಲ್ಲಿ ಒಂದು ಸ್ಟೆಂಟ್ ಇದೆ, ಹೃದಯದಲ್ಲಿ ಒಂದು ಸ್ಟೆಂಟ್ ಇದೆ. ಅವರಿಗೆ ಯಾಕೆ ಹಿಂಗೆ ಎನಿಸುತ್ತಿತ್ತು. ಆದರೆ ಎಲ್ಲವನ್ನು ಮೆಟ್ಟಿ ನಿಂತಿದ್ದಾರೆ. ಈಗ ಚೆನ್ನಾಗಿ ವಾಕ್ ಮಾಡುತ್ತಾರೆ. ಶಿವಣ್ಣ ಬಹಳ ಫಿಟ್ ಎಂದು ವೈದ್ಯರು ಹೇಳಿದ್ದಾರೆ ಎಂದು ಮಧು ಬಂಗಾರಪ್ಪ ತಿಳಿಸಿದ್ದಾರೆ.
ಈ ಶಸ್ತ್ರ ಚಿಕಿತ್ಸೆ ವೇಳೆ ಒಟ್ಟು 6 ಸಣ್ಣ ಸಣ್ಣ ಚಿಕಿತ್ಸೆ ನಡೆಯುತ್ತದೆ. ಒಳಗೆ ಸುಮಾರು 190 ಹೊಲಿಗೆ ಹಾಕಲಾಗುತ್ತದೆ. ನಿಜಕ್ಕೂ ಬಹಳ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಇದು. 5 ಗಂಟೆಗಳ ಕಾಲ ನಡೆಯಿತು. ಯಾವುದೇ ಸಮಸ್ಯೆ ಆಗಲಿಲ್ಲ. ಸರ್ಜರಿ ನಡೆದ 4 ಗಂಟೆಗಳ ಬಳಿಕ ನಾವು ಹೋಗಿ ಶಿವಣ್ಣ ಅವರನ್ನು ಮಾತನಾಡಿಸಿದ್ದೆವು.
ಶಿವಣ್ಣ ಕ್ಯಾನ್ಸರ್ ಮುಕ್ತ ಅಂತ ವೈದ್ಯರು ಹೇಳಿದ್ದಾರೆ. ನಾವು ನಾಲ್ಕೈದು ಕಿಮೀ ನಡೆದುಕೊಂಡು ವಾಕಿಂಗ್ ಮಾಡುತ್ತಿದ್ದೆವು. ಮುರುಗೇಶ್ ಮನೋಹರ್ ಸರ್ಜರಿ ಮಾಡಿದ್ದ ಅವರು ಮೂಲತಃ ಬೇಲೂರಿನವರು. ಮದ್ರಾಸ್ನಲ್ಲಿ ಹುಟ್ಟಿ ಬೆಳೆದರೂ ಆಗಾಗ ಭಾರತಕ್ಕೆ ಬಂದರು ಸೇವೆ ಸಲ್ಲಿಸುತ್ತಿದ್ದಾರೆ. ಮುಂದಿನ ಸಲ ಬಂದಾಗ ಭೇಟಿ ಆಗುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.