ಉಡುಪಿ: ಕುಂಜಿಬೆಟ್ಟುವಿನಲ್ಲಿರುವ ಶಾರದಾ ರೆಸಿಡೆನ್ಸಿ ಶಾಲೆಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು ಪೊಲೀಸರು ತೀವ್ರ ತಪಾಸಣೆ ನಡೆಸುತ್ತಿದ್ದಾರೆ.
ಶ್ವಾನದಳದೊಂದಿಗೆ ಆಗಮಿಸಿದ ಪೊಲೀಸರು ಮಕ್ಕಳನ್ನು ಮೈದಾನಕ್ಕೆ ಕಳುಹಿಸಿ, ಶಾಲಾ ಆವರಣದಲ್ಲಿ ತೀವ್ರ ತಪಾಸಣೆ ನಡೆಸಿದ್ದಾರೆ. ಸದ್ಯ ಯಾವುದೇ ಬಾಂಬ್ ಅಥವಾ ಅಪಾಯಕಾರಿ ಅಂಶ ಪತ್ತೆಯಾಗಿಲ್ಲ.
ಶಾಲೆಯಲ್ಲಿ 15 ರಾಜ್ಯಗಳ ಮಕ್ಕಳು ಇದ್ದಾರೆ. ಇದುವರೆಗೆ ಯಾವುದೇ ಬೆದರಿಕೆ ಕರೆ ಬಂದಿಲ್ಲ. ನಮ್ಮ ಸಿಬ್ಬಂದಿ ಕುಟುಂಬದಂತೆ ಮಕ್ಕಳನ್ನು ನೋಡಿಕೊಂಡಿದ್ದಾರೆ. ನಮ್ಮ ಸಂಸ್ಥೆ ಒಳ್ಳೆ ರೀತಿ ನಡೆಯುತ್ತಿದೆ. ಇದುವರೆಗೆ ನಮಗೆ ಯಾವುದೇ ಸಮಸ್ಯೆ ಆಗಿಲ್ಲ. ಯಾವುದೇ ಭಯ ಪಡಬೇಕಿಲ್ಲ. ಮಣಿಪಾಲ, ಬ್ರಹ್ಮಾವರ ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳ ಮಕ್ಕಳು ಇಲ್ಲಿ ಓದುತ್ತಿದ್ದಾರೆ. ಪೊಲೀಸರು ಒಳ್ಳೆಯ ಸಹಕಾರ ನೀಡುತ್ತಿದ್ದಾರೆ’ ಎಂದು ಶಾಲೆಯ ಪ್ರಾಂಶುಪಾಲೆ ವಿನ್ಸೆಂಟ್ ಡಿಕೋಸ್ಟಾ ತಿಳಿಸಿದ್ದಾರೆ.
ಮುಂಜಾನೆ 4.43ಕ್ಕೆ ಬೆದರಿಕೆ ಇ-ಮೇಲ್ ಬಂದಿದೆ. 8 ಗಂಟೆಗೆ ನೋಡಿದ್ದೇವೆ. ಇಲ್ಲಿ 816 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. 15 ದೇಶಗಳ, 20 ರಾಜ್ಯಗಳ ಮಕ್ಕಳು ವ್ಯಾಸಾಂಗ ಮಾಡುತ್ತಿದ್ದಾರೆ. ಇ-ಮೇಲ್ ಬಂದಿರುವ ಬಗ್ಗೆ ಕ್ರೈಂ ಬ್ರ್ಯಾಂಚ್, ನಗರ ಠಾಣೆಗೆ ಮಾಹಿತಿ ನೀಡಿದ್ದೇವೆ. ಮಕ್ಕಳನ್ನು ಕಟ್ಟಡದಿಂದ ಹೊರಗೆ ತಂದಿದ್ದೇವೆ. ಇದು ಹುಸಿ ಕರೆ ಆಗಿರುವ ಸಾಧ್ಯತೆ ಇದೆ. ಇ-ಮೇಲ್ನಲ್ಲಿ ತಮಿಳುನಾಡು, ನಕ್ಸಲ್ ಚಟುವಟಿಕೆಯ ಹೆಸರು ಉಲ್ಲೇಖ ಮಾಡಿದ್ದಾರೆ. ಮಕ್ಕಳ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಂಡಿದ್ದೇವೆ. ಪೋಷಕರು ಯಾರೂ ಭಯ ಪಡಬೇಕಿಲ್ಲ’ ಎಂದರು.
ಇನ್ನು, ಬಾಂಬ್ ಬೆದರಿಕೆ ಸಂದೇಶ ವಿಚಾರ ತಿಳಿದ ವಿದ್ಯಾರ್ಥಿಗಳ ಪೋಷಕರು ಶಾಲೆಯ ಮುಂಭಾಗ ಜಮಾಯಿಸಿದ್ದಾರೆ. ಇನ್ನು, ಶಾರದಾ ಶಾಲೆಯಲ್ಲಿ ರಾಜ್ಯದ ನಾನಾ ಭಾಗದ ಹಾಗೂ ಅಂತರರಾಜ್ಯದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.