ಕೆಲ ದಿನಗಳ ಹಿಂದೆ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದ್ದ ಲೀಲಾ ಹಾಗೂ ಮಂಜು ಜೋಡಿ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅಪರಾಧ ಆಧಾರಿತ ಸರಣಿ ‘ಶಾಂತಂ ಪಾಪಂ’. ಈ ಕಾರ್ಯಕ್ರಮದ ಇತ್ತೀಚಿನ ಎಪಿಸೋಡ್ ಒಂದರಲ್ಲಿ ಲೀಲಾ ಮತ್ತು ಮಂಜು ಅವರ ಜೀವನದ ನೈಜ ಘಟನೆಗಳನ್ನು ಹೋಲುವ ಕಥೆಯನ್ನು ಪ್ರಸಾರ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ವಾಹಿನಿಯು ಸಾಮಾನ್ಯವಾಗಿ ಹೆಸರುಗಳನ್ನು ಬದಲಿಸಿ ಕಥೆ ಪ್ರಸಾರ ಮಾಡುವುದಾಗಿ ಮೊದಲೇ ಸ್ಪಷ್ಟನೆ ನೀಡುತ್ತದೆಯಾದರೂ, ಈ ಎಪಿಸೋಡ್ ಪ್ರಸಾರವಾದ ನಂತರ ಈ ಜೋಡಿ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಮ್ಮೆ ಟ್ರೋಲ್ಗಳಿಗೆ ತುತ್ತಾಗುತ್ತಿದ್ದಾರೆ.

ಈ ಬೆಳವಣಿಗೆಯಿಂದ ಕಂಗಾಲಾಗಿರುವ ಲೀಲಾ ಮತ್ತು ಮಂಜು, ಸಾಮಾಜಿಕ ಜಾಲತಾಣಗಳಿಂದಾಗಿ ತಮ್ಮ ಸಂಸಾರದಲ್ಲಿ ಮತ್ತೆ ಬಿರುಕು ಮೂಡುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಲೀಲಾ ಅವರು ಕಣ್ಣೀರಿಡುತ್ತಾ ಮಂಜು ಮತ್ತು ಟ್ರೋಲರ್ಗಳ ಮೇಲೆ ಆರೋಪ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಆದರೆ ಈಗ ಇಬ್ಬರೂ ಒಂದಾಗಿರುವ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಅವರಿಗೆ ಸಮಾಜಸೇವಕಿ ಸಂಧ್ಯಾ ಎಂಬುವವರು ಬೆಂಬಲವಾಗಿ ನಿಂತಿದ್ದಾರೆ. ಲೀಲಾ ಮತ್ತು ಮಂಜು ಅವರ ವೈಯಕ್ತಿಕ ಕಥೆಯನ್ನು ಅನುಮತಿಯಿಲ್ಲದೆ ಶಾಂತಂ ಪಾಪಂ ಶೋನಲ್ಲಿ ಬಳಸಿಕೊಂಡಿದ್ದಕ್ಕಾಗಿ ವಾಹಿನಿಯ ವಿರುದ್ಧ ಹಾಗೂ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿರುವ ಬಳಕೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಸಂಧ್ಯಾ ಎಚ್ಚರಿಕೆ ನೀಡಿದ್ದಾರೆ.

ಆರಂಭದಲ್ಲಿ ತಮ್ಮ ಕೌಟುಂಬಿಕ ಕಲಹವನ್ನು ತಾವೇ ಮಾಧ್ಯಮಗಳ ಮುಂದೆ ತಂದು ಸಂಚಲನ ಮೂಡಿಸಿದ್ದ ಈ ಜೋಡಿ, ನಂತರ ಮಕ್ಕಳ ಭವಿಷ್ಯಕ್ಕಾಗಿ ಒಂದಾಗಿದ್ದರು. ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಇವರಿಗೆ ಕೆಲವು ಪೇಡ್ ಪ್ರಮೋಷನ್ಗಳು ಸಹ ಸಿಗುತ್ತಿವೆ. ಆದರೆ ನೆಟ್ಟಿಗರ ನಕಾರಾತ್ಮಕ ಕಾಮೆಂಟ್ಗಳು ಇವರ ನೆಮ್ಮದಿಯನ್ನು ಹಾಳುಮಾಡುತ್ತಿವೆ ಎಂಬುದು ಇವರ ಬೆಂಬಲಿಗರ ವಾದ. ಸಂಧ್ಯಾ ಅವರ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವರು ಜೋಡಿಯ ಪರವಾಗಿ ಮಾತನಾಡಿದರೆ, ಇನ್ನು ಕೆಲವರು ಮನೆಯ ವಿಚಾರಗಳನ್ನು ಬೀದಿಗೆ ತಂದ ಮೇಲೆ ಟೀಕೆಗಳನ್ನು ಸಹಿಸಿಕೊಳ್ಳಲೇಬೇಕು ಎಂದು ಕಲರ್ಸ್ ಕನ್ನಡ ವಾಹಿನಿಯ ಪರವಾಗಿ ಬ್ಯಾಟ್ ಬೀಸಿದ್ದಾರೆ.


