ಬೆಳಗಾವಿ: ಕಾಂಗ್ರೆಸ್ ಹಿರಿಯ ಶಾಸಕ, ಮಾಜಿ ಸಚಿವ ಶಾಮನೂರು ಶಿವಸಂಕರಪ್ಪ ನಿಧನಕ್ಕೆ ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ಧಾರೆ.. ದಾವಣಗೆರೆ ಅಭಿವೃದ್ಧಿ ಆಗಲು ಶಾಮನೂರು ಶಿವಶಂಕರಪ್ಪ ಕಾರಣ. ದಾವಣಗೆರೆಯನ್ನು ವಿದ್ಯಾಕಾಶಿ ಮಾಡಿದ್ದಾರೆ ಎಂದು ಅವರ ಕೊಡುಗೆಯನ್ನು ನೆನಪಿಸಿಕೊಂಡರು.
ಕಾಂಗ್ರೆಸ್ನ ಹಿರಿಯ ಶಾಸಕ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ನಿಧನ ಹಿನ್ನೆಲೆ ವಿಧಾನಸಭೆಯಲ್ಲಿ ಶಾಮನೂರು ಸಾಧನೆಗಳನ್ನು ಉಲ್ಲೇಖಿ ಸ್ಪೀಕರ್ ಯು.ಟಿ ಖಾದರ್ ಸಂತಾಪ ಸೂಚನೆ ನಿರ್ಣಯ ಓದಿದರು. ಬಳಿಕ ಮಾತನಾಡಿದ ಸಿಎಂ, ಶಾಮನೂರು ಶಿವಶಂಕರಪ್ಪ ನಮ್ಮ ಜೊತೆ ಮಂತ್ರಿಯಾಗಿ ಕೆಲಸ ಮಾಡಿದ್ದರು. 2016ರಲ್ಲಿ ಪುನಾರಚನೆ ಆದಾಗ ತಮ್ಮ ಪುತ್ರ ಎಸ್ಎಸ್ ಮಲ್ಲಿಕಾರ್ಜುನ ಅವರಿಗೆ ಸಚಿವ ಮಾಡಿ ಅಂತ ಬಿಟ್ಟುಕೊಟ್ಟಿದ್ದರು. ದೀರ್ಘಕಾಲ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರು ಆಗಿದ್ದರು.
ದಾವಣಗೆರೆ ನಗರಸಭೆ ಸದಸ್ಯರು, ಅಧ್ಯಕ್ಷರು ಆಗಿದ್ದರು. ತಮ್ಮ 63ನೇ ವರ್ಷದಲ್ಲಿ ಶಾಸಕ ಆದರು. ಆರು ಬಾರಿ ಶಾಸಕರು, ಒಂದು ಸಲ ಸಂಸದರು ಆಗಿ ದೀರ್ಘಕಾಲ ರಾಜಕಾಣರಣದಲ್ಲಿದ್ದರು ಎಂದು ಬೇಸರ ವ್ಯಕ್ತಪಡಿಸಿದರು. ದಾವಣಗೆರೆಗೆ ಬ್ರ್ಯಾಂಡ್ ನೇಮ್ ಬರಲು ಶಾಮನೂರು ಕಾರಣ. ಶಾಮನೂರು ಅಜಾತ ಶತ್ರುವಾಗಿದ್ದರು. ದಾವಣಗೆರೆಯಲ್ಲಿ ಅವರ ಗೆಸ್ಟ್ ಹೌಸ್ ನಲ್ಲಿ ಉಳಿಯುತ್ತಿದ್ದೆ. ಅವರ ಮನೆಯಲ್ಲಿ ಊಟ ಮಾಡುತ್ತಿದ್ದೆ. 75 ವರ್ಷದ ಹುಟ್ಟು ಹಬ್ಬದ ಆಚರಣೆ ಕಾರ್ಯಕ್ರಮ ದಾವಣಗೆರೆಯಲ್ಲಿ ಮಾಡಿದ್ದೆವು ಎಂದು ನೆನಪಿಸಿಕೊಂಡರು.
ದಾವಣಗೆರೆಯಲ್ಲಿ ಜವಳಿ ಅವನತಿ ಪ್ರಾರಂಭವಾಗಿತ್ತು, ಆಗ ಶಾಮನೂರು ಅವರು ಜವಳಿಗೆ ಒಂದು ಬ್ರ್ಯಾಂಡ್ ತಂದುಕೊಟ್ಟರು. ಶಿವಶಂಕರಪ್ಪಗೆ ಯಾರೂ ವೈರಿಗಳು ಇರಲಿಲ್ಲ. ಶಾಮನೂರು ಅವರ ಸಹಾಯ ಹಸ್ತ ದೊಡ್ಡದು. ಅಪರೂಪದ ವ್ಯಕ್ತಿ ನಮ್ಮನ್ನು ಅಗಲಿದ್ದಾರೆ, ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ದೊಡ್ಡ ಕುಟುಂಬ ಅವರದ್ದು, ಲಕ್ಷಾಂತರ ಅಭಿಮಾನಿಗಳನ್ನು ಅವರು ಅಗಲಿದ್ದಾರೆ ಎಂದು ಸಂತಾಪ ಸೂಚಿಸಿದರು.
15 ದಿನಗಳ ಹಿಂದೆ ನಾನು ಆಸ್ಪತ್ರೆಗೆ ಹೋಗಿದ್ದೆ. ಆಗ ಅವರು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಆ ಸಂದರ್ಭ ನಾನು ಅರ್ಧ ಗಂಟೆ ಇದ್ದೆ. ಇಂದು ಸದನ ಮುಂದೂಡಿಕೆ ಆಗುತ್ತದೆ ಅಂತ ಭಾವಿಸಿದ್ದೀನಿ. ಸಂತಾಪ ಆದ ಕೂಡಲೇ ನಾನು ದಾವಣಗೆರೆಗೆ ಹೋಗುತ್ತೇನೆ ಎಂದು ತಿಳಿಸಿದರು.
ಇನ್ನು ಇದೇ ವೇಳೆ ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ಶಾಮನೂರು ಶಿವಶಂಕರಪ್ಪ ಅವರದ್ದು ಮುತ್ಸದ್ಸಿ ವ್ಯಕ್ತಿತ್ವ. ದೇಶದಲ್ಲಿ ಹಿರಿಯ ಶಾಸಕರಾಗಿದ್ದವರು ಇದೀಗ ನಮ್ಮನ್ನು ಅಗಲಿದ್ದಾರೆ. ಬದುಕಿರುವ ವರೆಗೆ ಅಧಿಕಾರದಲ್ಲಿ ಇರುತ್ತೇನೆ, ಮತ್ತೊಂದು ಚುನಾವಣೆ ಎದುರಿಸುತ್ತೇನೆ ಎಂದಿದ್ದರು. ಅಷ್ಟೊಂದು ಗಟ್ಟಿ ವ್ಯಕ್ತಿತ್ವ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ಶಾಮನೂರು ಶಿವಶಂಕರಪ್ಪ ನಿಧನ ಹಿನ್ನೆಲೆಯಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆಗೆ ಆದೇಶ ಮಾಡಲಾಗಿದೆ. ಈ ಸಂಬಂಧಿಸಿದಂತೆ ಅಧಿಕೃತ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಿದೆ.


