ಬೆಂಗಳೂರು: ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಪ್ರತಿಷ್ಠಿತ ಕಾಲೇಜಿನ ಇಬ್ಬರು ಉಪನ್ಯಾಸಕರು ಮತ್ತು ಆ ಉಪನ್ಯಾಸಕರ ಗೆಳೆಯನನ್ನು ಬಂಧಿಸಲಾಗಿದೆ.
ಬೆಂಗಳೂರು ನಗರ ಮಾರತಹಳ್ಳಿ ಠಾಣೆ ಪೊಲೀಸರು ಮೂಡಬಿದ್ರೆಯ ಪ್ರತಿಷ್ಠಿತ ಕಾಲೇಜಿನ ಜೀವವಿಜ್ಞಾನ ವಿಭಾಗದ ಉಪನ್ಯಾಸಕ ಸಂದೀಪ್, ಭೌತ ವಿಜ್ಞಾನ ವಿಭಾಗದ ಉಪನ್ಯಾಸಕ ನರೇಂದ್ರ ಮತ್ತು ಇವರಿಬ್ಬರ ಸ್ನೇಹಿತ ಅನೂಪ್ನನ್ನು ಬಂಧಿಸಿದ್ದಾರೆ.
ನೋಟ್ ಬುಕ್ ಕೊಡುವ ನೆಪದಲ್ಲಿ ಉಪನ್ಯಾಸಕ ನರೇಂದ್ರ 19 ವರ್ಷದ ವಿದ್ಯಾರ್ಥಿನಿ ಜೊತೆಗೆ ವಾಟ್ಸಾಪ್ ಮೂಲಕ ಸಂಪರ್ಕ ಬೆಳೆಸಿದ್ದ. ಬಳಿಕ ಆ ಯುವತಿ ಬೆಂಗಳೂರಿಗೆ ಹೋಗಿ ನೆಲೆಸಿದ್ದಳು. ನಂತರ ಮಾರತಹಳ್ಳಿಯ ತನ್ನ ಸ್ನೇಹಿತ ಅನೂಪನ ಕೊಠಡಿಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದ. ಈ ವಿಷಯ ಗೊತ್ತಾಗಿದ್ದ ಉಪನ್ಯಾಸಕ ಸಂದೀಪ ನಿನ್ನ ಮತ್ತು ನರೇಂದ್ರನ ವೀಡಿಯೋ, ಫೋಟೋ ಇದೆ, ಅದನ್ನು ಬಹಿರಂಗಪಡಿಸ್ತೀನಿ ಎಂದು ಯುವತಿಯನ್ನು ಬ್ಲ್ಯಾಕ್ಮೇಲ್ ಮಾಡಿದ್ದ. ನೀನು ನನ್ನ ರೂಂಗೆ ಬಂದು ಹೋಗಿರುವ ವೀಡಿಯೋ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ ಎಂದು ಬೆದರಿಸಿ ಅನೂಪ ಕೂಡಾ ಅತ್ಯಾಚಾರ ಎಸಗಿದ್ದ.
ಈ ಮೂವರ ನಿರಂತರ ಅತ್ಯಾಚಾರ, ಬೆದರಿಕೆಯಿಂದ ಬೇಸತ್ತಿದ್ದ ಯುವತಿ ತನ್ನ ಪೋಷಕರೊಂದಿಗೆ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಳು. ಆ ದೂರನ್ನು ವೈಟ್ಫೀಲ್ಡ್ ವಿಭಾಗದ ಡಿಸಿಪಿಗೆ ವರ್ಗಾವಣೆ ಮಾಡಲಾಗಿತ್ತು. ಆ ದೂರಿನ ಆಧಾರದಲ್ಲಿ ಮಾರತಹಳ್ಳಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.


