Tuesday, June 24, 2025
25.9 C
Bengaluru
Google search engine
LIVE
ಮನೆಸುದ್ದಿದುರಂತ ಅಂತ್ಯ ಕಂಡ ದಸರಾ ಆನೆ ಅಶ್ವತ್ಥಾಮನಿಗೆ "ರೋಮಿಯೋ" ಎನ್ನಲು ಇವೇ ಕಾರಣ ನೋಡಿ..

ದುರಂತ ಅಂತ್ಯ ಕಂಡ ದಸರಾ ಆನೆ ಅಶ್ವತ್ಥಾಮನಿಗೆ “ರೋಮಿಯೋ” ಎನ್ನಲು ಇವೇ ಕಾರಣ ನೋಡಿ..

ಮೈಸೂರು: ಪ್ರಾಣಿಪ್ರಿಯರು ಆಘಾತಗೊಂಡಿದ್ದಾರೆ. ಎಲ್ಲರ ಪ್ರೀತಿಯ ದಸರಾ ಆನೆ ಅಶ್ವತ್ಥಾಮ ಇನ್ನಿಲ್ಲ. ಮತ್ತಿಗೋಡು ಆನೆ ಶಿಬಿರದಲ್ಲಿ ದುರಂತ ಅಂತ್ಯಕಂಡಿರುವ ಅಶ್ವತ್ಥಾಮ ಅಪ್ಪಟ ಪ್ರೇಮಿ. ತನ್ನ ಮುಗ್ಧ ಪ್ರೀತಿಯಿಂದಲೇ ಪ್ರೀತಿಗಳಿಸಿದ ‘ರೋಮಿಯೋ’ ಕಣ್ಮರೆಯಾಗಿರುವುದು ಎಲ್ಲರ ಹೃದಯ ಕರಗಿಸಿದೆ.

ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯಲ್ಲಿರುವ ಮತ್ತಿಗೋಡು ಭೀಮನಕಟ್ಟೆ ಕ್ಯಾಂಪ್‌ನಲ್ಲಿದ್ದ ಅಶ್ವತ್ಥಾಮ ದುರಂತ ಅಂತ್ಯ ಕಂಡಿದ್ದಾನೆ. ಸಾವಿನ ಸುತ್ತ ಅನುಮಾನದ ಹುತ್ತವೇ ಎದ್ದಿದೆ. ಅನಾರೋಗ್ಯದಿಂದ ಸಾವಿಗೀಡಾಗಿದೆ ಎಂದು ಇಲಾಖೆ ಹೇಳುತ್ತಿದ್ದರೆ, ಸೋಲಾರ್‌ ತಂತಿಗೆ ಆಕಸ್ಮಿಕವಾಗಿ ವಿದ್ಯುತ್‌ ತಂತಿ ತಾಗಿ ಬಲಿಯಾಗಿದೆ ಎಂದೂ ಹೇಳಲಾಗುತ್ತಿದೆ. ಏನೇ ಆದರೂ ಅಶ್ವತ್ಥಾಮನನ್ನು ಕಳೆದುಕೊಂಡಿರುವುದು ಸಾವಿರಾರು ಮಂದಿಯನ್ನು ದುಃಖದ ಕಡಲಲ್ಲಿ ಮುಳುಗಿಸಿದೆ. ಏಕೆಂದರೆ, ಈ ಅಶ್ವತ್ಥಾಮನ ಸ್ಟೈಲ್‌, ಆತನ ಸ್ವಭಾವ ಎಲ್ಲವೂ ವಿಶೇಷವಾಗಿತ್ತು.

ಎಲ್ಲರಂತಲ್ಲಈ ಅಶ್ವತ್ಥಾಮ

ಆನೆಗಳಲ್ಲಿ ಕೆಲವು ಎಲ್ಲವುಗಳಿಗಿಂತ ಭಿನ್ನವಾಗಿ ಗಮನ ಸೆಳೆಯುತ್ತವೆ. ಅಭಿಮನ್ಯು ಡೇರ್‌ ಆ್ಯಂಡ್‌ ಡೆವಿಲ್‌. ಅರ್ಜುನ ಮುನ್ನುಗುವ ಗುಣ, ದ್ರೋಣನ ಶಾಂತ ಸ್ವಭಾವ, ಬಲರಾಮನ ಸಾರಾಯಿ ಪ್ರೀತಿ ಹೀಗೆ. ಇವರೆಲ್ಲರಿಗಿಂತ ಅಶ್ವತ್ಥಾಮ ಪ್ರೇಮಿಯಾಗಿ ಇಷ್ಟವಾಗುತ್ತಿದ್ದ. ಒಮ್ಮೆ ಒಂದು ಹೆಣ್ಣಾನೆಯನ್ನು ಇಷ್ಟಪಟ್ಟರೆ ಅದನ್ನು ಬಿಟ್ಟಿರುತ್ತಿರಲಿಲ್ಲ. ಇದಕ್ಕೆ ಉದಾಹರಣೆ 2021 ರಲ್ಲಿ ದಸರಾದ ಲವ್‌ ಸ್ಟೋರಿ.

ಆ ವರ್ಷ ಅಶ್ವತ್ಥಾಮ ಆಗ ತಾನೆ ಹರೆಯಕ್ಕೆ ಕಾಲಿಟ್ಟ ಹಾಗೂ ಮೊದಲ ಬಾರಿಗೆ ದಸರೆಗೆ ಬಂದ 20 ವರ್ಷದ ಲಕ್ಷ್ಮಿಯನ್ನು ನೋಡುತ್ತಿದ್ದಂತೆ ಪ್ರೀತಿಸಲು ಆರಂಭಿಸಿದ. ಆರಂಭದಲ್ಲಿ ಧನಂಜಯನನ್ನು ಇಷ್ಟಪಟ್ಟಿದ್ದ ಲಕ್ಷ್ಮಿ ನಂತರ ಅಶ್ವತ್ಥಾಮನ ಪ್ರೀತಿಗೆ ಮರುಳಾಗಿ ಆತನೊಂದಿಗೆ ಸುತ್ತಾಡಲು ಆರಂಭಿಸಿದಳು. ಅವರಿಬ್ಬರ ಚಿನ್ನಾಟ ಅರಮನೆಯ ಆವರಣದಲ್ಲಿ ಹಬ್ಬವಾಗಿತ್ತು. ಇಬ್ಬರು ಸಮಯ ಸಿಕ್ಕಾಗ ಸೊಂಡಿಲಿನಲ್ಲಿ ಪರಸ್ಪರ ಅಪ್ಪಿಕೊಳ್ಳುತ್ತಿದ್ದ, ಲಲ್ಲೆಗೆರೆಯುತ್ತಿದ್ದ ದೃಶ್ಯವಂತೂ ಎಲ್ಲರನ್ನು ಮಂತ್ರಮುಗ್ಧಗೊಳಿಸುತ್ತಿತ್ತು. ಪ್ರೀತಿಯ ತುಂಟಾಟ ಸಾಕಷ್ಟು ವೈರಲ್‌ ಆಗಿತ್ತು.

ರೋಮಿಯೋ ಪಟ್ಟ:

ಅಶ್ವತ್ಥಾಮನ ಪ್ರೀತಿ, ಲಕ್ಷ್ಮಿಯ ಹಿಂದೆ ಸುತ್ತಿ ಕಾಡುವ ದೃಶ್ಯ, ಸೊಂಡಿಲಿನಲ್ಲಿ ತನ್ನತ್ತ ಸೆಳೆಯುವುದು ಮುಂತಾದ ವರ್ತನೆಯಿಂದ ಅಭಿಮಾನಿಗಳ ಪಡೆಯನ್ನೇ ಸೃಷ್ಟಿಸಿಕೊಂಡಿದ್ದ. ಇದರಿಂದಾಗಿ ಅತನಿಗೆ ‘ರೋಮಿಯೋ’ ಎನ್ನುವ ಅಡ್ಡ ಹೆಸರು ಬಂತು.

ಅಗಲಿಕೆಯನ್ನು ಸಹಿಸಲಿಲ್ಲ:

ಒಂದು ತಿಂಗಳು ದಸರಾ ಕಳೆದ ನಂತರ ಮರಳಿ ಹೋಗುವಾಗ ದೊಡ್ಡ ಸೀನ್‌ ಸೃಷ್ಟಿಯಾಯಿತು. ಪರಸ್ಪರ ಪ್ರೀತಿಸುತ್ತಿದ್ದ ಅಶ್ವತ್ಥಾಮ ಹಾಗೂ ಲಕ್ಷ್ಮಿ ಬೇರೆಯಾಗಲು ಒಪ್ಪಲೇ ಇಲ್ಲ. ಅವರಿಬ್ಬರದ್ದೂ ಬೇರೆ ಬೇರೆ ಶಿಬಿರ. ಇಬ್ಬರೂ ಲಾರಿ ಹತ್ತದೆ ಕಣ್ಣೀರು ಹಾಕುತ್ತ ಅರಮನೆಯ ಆವರಣದಲ್ಲಿ ಓಡಾಡಿದರು. ಎಷ್ಟೇ ಒತ್ತಡ ಹಾಕಿದರೂ ಲಾರಿ ಏರಲಿಲ್ಲ. ಇವರಿಬ್ಬರ ಹಠ ಕೆಲವರಿಗೆ ಮೋಜು ಎನ್ನಿಸಿದರೆ, ಇನ್ನು ಕೆಲವರು ಅವರಿಬ್ಬರ ಅಗಲಿಕೆಯ ನೋವು ಗಮನಿಸಿ ಕಣ್ಣೀರು ಹಾಕಿದರು. ಕೊನೆಗೆ ಟೀಮ್‌ ಕ್ಯಾಪ್ಟನ್‌ ಅಭಿಮನ್ಯು ಬಂದು ಇಬ್ಬರ ತಲೆಗೆ ಮೊಟಕಿ ಬಲವಂತದಿಂದ ಬೇರೆ ಬೇರೆ ಲಾರಿಗೆ ಹತ್ತಿಸಬೇಕಾಯಿತು.

ಮುದ್ದಾದ ಮರಿ ಬಂತು..!:

ಅಶ್ವತ್ಥಾಮ ಹಾಗೂ ಲಕ್ಷ್ಮಿಯ ಪ್ರೀತಿಯನ್ನು ನೋಡಿದ್ದ ಮಂದಿಗೆ ಮತ್ತೊಂದು ದಸರೆಯಲ್ಲಿಅಚ್ಚರಿಯ ಸುದ್ದಿ ಬಂತು. ದಸರೆಗೆ ಬಂದಿದ್ದ ಲಕ್ಷ್ಮಿ ಅರಮನೆ ಆವರಣದಲ್ಲಿಯೇ ಮುದ್ದಾದ ಮರಿಗೆ ಜನ್ಮ ನೀಡಿದಳು. ಎಲ್ಲರೂ ಅಶ್ವತ್ಥಾಮನ ಮರಿ ಎಂದೇ ಹೇಳಿದರು. ಆನೆ ಮರಿ ಹಾಕಲು 18 ತಿಂಗಳು ತೆಗೆದುಕೊಳ್ಳುತ್ತವೆ. ಈ ಮರಿ ಅಶ್ವತ್ಥಾಮನ ಪ್ರೇಮದ ಫಲವೇ ಅಥವಾ 2021ರಲ್ಲಿ ದಸರೆಗೆ ಬರುವ ಮುನ್ನವೇ ಲಕ್ಷ್ಮಿ ಕಾಡಾನೆಯ ಜೊತೆ ಸೇರಿತ್ತೆ ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದರು..!

ಭವಿಷ್ಯದ ಅಂಬಾರಿ ಆನೆ

ಅಶ್ವತ್ಥಾಮ ಆನೆ ಅಂಬಾರಿಗೆ ಹೇಳಿ ಮಾಡಿಸಿದಂತಿದ್ದ. ಈಗ ಅಲ್ಲದಿದ್ದರೂ ಮುಂದೆ ಆತನನ್ನು ದಸರಾದಲ್ಲಿಅಂಬಾರಿ ಹೊರಿಸುವ ಚಿಂತನೆ ಅಧಿಕಾರಿಗಳಿಗಿತ್ತು. ಎಲ್ಲಾಆನೆಗಳಿಗೆ ಅಂಬಾರಿ ಹೊರಲು ಸಾಧ್ಯವಿಲ್ಲ. ಕೇವಲ ಆನೆಗಳ ಸ್ವಭಾವ ಒಂದೇ ಸಾಕಾಗುವುದಿಲ್ಲ. ಅದರ ಭುಜದ ಆಕಾರ, ಅಂಬಾರಿ ಸರಿಯಾಗಿ ಕುಳಿತುಕೊಳ್ಳಲು ಆಯಕಟ್ಟು, ಸಾಮರ್ಥ್ಯ ಇರಬೇಕು. ಈತ ಹೇಳಿ ಮಾಡಿಸಿದಂತಿದ್ದ. 9.3 ಅಡಿ ಎತ್ತರ, 11.3 ಅಡಿ ಉದ್ದ ಇದ್ದ. 3700ಕ್ಕೂ ಹೆಚ್ಚು ತೂಕ ಇದ್ದ. ಇನ್ನು ಕೆಲವು ವರ್ಷಗಳಲ್ಲಿ ದಸರಾದಲ್ಲಿ ಪಾಲ್ಗೊಂಡ ನಂತರ ತಯಾರಾಗುತ್ತಿದ್ದ. ಈಗಾಗಲೇ ಅಭಿಮನ್ಯುವಿಗೆ 58 ವರ್ಷಗಳು. ಇನ್ನು ಎರಡು ವರ್ಷ ಮಾತ್ರ ಆತನಿಗೆ ಅಂಬಾರಿ ಹೊರಲು ಸಾಧ್ಯ. ಅಷ್ಟರಲ್ಲಿ ಬೇರೆ ಆನೆ ಸಿದ್ಧವಾಗಬೇಕಿದೆ.

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments