ಅಥಣಿ: ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವೆಣೆಯಲ್ಲಿ ಮಾಜಿ ಉಪ ಮುಖ್ಯಂತ್ರಿ ಲಕ್ಷ್ಮಣ್ ಸವದಿ ಅವರ ಬೆಂಬಲಿತ ತಂಡವು ಭರ್ಜರಿ ಗೆಲುವು ಸಾಧಿಸಿದೆ.. ಒಟ್ಟು 13 ಕ್ಷೇತ್ರಗಳಲ್ಲಿ ಸವದಿ ಬೆಂಬಲಿಗರು ಜಯಶಾಲಿಯಾಗಿದ್ದು, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಅವರ ಬೆಂಬಲಿಗರಿಗೆ ಭಾರಿ ಹಿನ್ನಡೆಯಾಗಿದೆ.
ಇತ್ತೀಚಿಗೆ ನಡೆದ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಭವ್ಯ ಗೆಲುವಿನೊಂದಿಗೆ ತಮ್ಮ ರಾಜಕೀಯ ಪ್ರಭಾವವನ್ನು ಸಾಬೀತುಪಡಿಸಿದ್ದ ಲಕ್ಷ್ಮಣ ಸವದಿ, ಈಗ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಚುನಾವಣೆಯಲ್ಲಿಯೂ ತಮ್ಮ ನೇತೃತ್ವದ ಶಕ್ತಿಯನ್ನು ತೋರಿದ್ದಾರೆ. ಭಾನುವಾರ ನಡೆದ ಈ ಚುನಾವಣೆಯಲ್ಲಿ ಅವರ ಬೆಂಬಲಿತ ರೈತರ ಸಹಕಾರಿ ಪ್ಯಾನಲ್ ಕ್ಲೀನ್ ಸ್ವೀಪ್ ಮಾಡಿದೆ. ಒಟ್ಟು 13 ಸ್ಥಾನಗಳ ಪೈಕಿ ‘ಬ’ ವರ್ಗದ ಒಂದು ಸ್ಥಾನಕ್ಕೆ ಈಗಾಗಲೇ ಅವಿರೋಧ ಆಯ್ಕೆಯಾಗಿದ್ದು, ಉಳಿದ 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸವದಿ ಬೆಂಬಲಿತ ಎಲ್ಲ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಈ ಗೆಲುವಿನೊಂದಿಗೆ, ನಿಕಟ ಪೂರ್ವ ಅಧ್ಯಕ್ಷ ಪರಪ್ಪ ಸವದಿ ನೇತೃತ್ವದ ಆಡಳಿತ ಮಂಡಳಿಯು ನಾಲ್ಕನೇ ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸಿದ್ಧವಾಗಿದೆ. ಅಥಣಿ ಶಾಸಕ ಲಕ್ಷ್ಮಣ ಸವದಿ ಮತ್ತು ಕಾಗವಾಡ ಶಾಸಕ ರಾಜು ಕಾಗೆ ಅವರ ಸಮರ್ಥ ನಾಯಕತ್ವದಲ್ಲಿ ರೈತರ ಸಹಕಾರಿ ಪ್ಯಾನಲ್ ಈ ಚುನಾವಣೆಯಲ್ಲಿ ತನ್ನ ಶಕ್ತಿಯನ್ನು ಪ್ರದರ್ಶಿಸಿದೆ. ಈ ಫಲಿತಾಂಶವು ಸವದಿ ಅವರ ರಾಜಕೀಯ ಕಾರ್ಯತಂತ್ರ ಮತ್ತು ಕ್ಷೇತ್ರದಲ್ಲಿ ಅವರ ಬೆಂಬಲಿಗರ ಒಗ್ಗಟ್ಟಿನ ಗೆಲುವಿನ ಸಂಕೇತವಾಗಿದೆ.
ಮತ್ತೊಂದೆಡೆ, ರಮೇಶ್ ಜಾರಕಿಹೊಳಿ ಬೆಂಬಲಿತ ಸ್ವಾಭಿಮಾನಿ ರೈತ ಪ್ಯಾನಲ್ ಈ ಚುನಾವಣೆಯಲ್ಲಿ ಸಂಪೂರ್ಣವಾಗಿ ಮುಗ್ಗರಿಸಿದೆ. ಈ ಪ್ಯಾನಲ್ನಲ್ಲಿ ಮಾಜಿ ಶಾಸಕರಾದ ಮಹೇಶ್ ಕುಮಟಳ್ಳಿ, ಶ್ರೀಮಂತ ಪಾಟೀಲ, ಶಹಜಹಾನ್ ಡೊಂಗರಗಾವ್ ಮತ್ತು ಕಾಂಗ್ರೆಸ್ ಮುಖಂಡ ಗಜಾನನ ಮಂಗಸುಳಿ ಸೇರಿದ್ದರು. ಈ ತಂಡವು ಸವದಿ ಅವರ ವಿರುದ್ಧ ಬಲಿಷ್ಠ ಕಾರ್ಯತಂತ್ರ ರೂಪಿಸಿತ್ತಾದರೂ, ಯಾವುದೇ ಸ್ಥಾನದಲ್ಲಿ ಗೆಲುವು ಕಾಣಲು ವಿಫಲವಾಯಿತು.


