ಇದು ರಾಜ್ಯ ರಾಜಕೀಯದಲ್ಲಿ ಸ್ಫೋಟಕ ಸುದ್ದಿ. ಸಿಎಂ ಸಿದ್ದರಾಮಯ್ಯ ಹಾಗೂ ಹೆಚ್ಡಿ ಕುಮಾರಸ್ವಾಮಿ ನಡುವೆ ರಹಸ್ಯ ಒಪ್ಪಂದ ಆಗಿದೆ ಎಂದು ಫ್ರೀಡಂ ಟಿವಿ ಈಗಾಗಲೇ ವರದಿ ಬಿತ್ತರಿಸಿದೆ. ಅದರ ಮುಂದುವರಿದ ಭಾಗವಾಗಿ ಮತ್ತೊಂದು ಮೆಗಾ ನ್ಯೂಸ್ ನಿಮ್ಮ ಮುಂದಿಡುತ್ತಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿಯವರು ಒಂದಾಗಲು ಕಾರಣ ಸತೀಶ್ ಜಾರಕಿಹೊಳಿ..!
ಮುಡಾ ವಿಚಾರದಲ್ಲಿ ಸಿಎಂ ವಿರುದ್ಧ ಹೋರಾಟಕ್ಕೆ ಜೆಡಿಎಸ್-ಬಿಜೆಪಿ ಮುಂದಾಗಿತ್ತು. ಈ ನಡುವೆ ಸತೀಶ್ ಜಾರಕಿಹೊಳಿಯವರೇ ಮುಂದೆ ನಿಂತು ಸಿದ್ದರಾಮಯ್ಯ ಹಾಗೂ ಹೆಚ್ಡಿ ಕುಮಾರಸ್ವಾಮಿಯವರನ್ನು ಒಂದುಗೂಡಿಸಿದ್ದಾರೆ ಎನ್ನಲಾಗುತ್ತಿದೆ.
ಸಿಎಂ ವಿರುದ್ಧದ ಮುಡಾ ಹೋರಾಟದ ಪಾದಯಾತ್ರೆಗೆ ಈಗಾಗಲೇ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅಸಹಕಾರ ವ್ಯಕ್ತಪಡಿಸಿದ್ದಾರೆ. ಈ ಹಿಂದಿನ ರಾಜಕೀಯ ವೈರಿ ಆಗಿದ್ದ ಸಿದ್ದರಾಮಯ್ಯ ಪರವೇ ಈಗ ಹೆಚ್ಡಿಕೆ ಒಲವು ತೋರಿಸಿದ್ದಾರೆ.. ಈ ಇಬ್ಬರ ನಡುವಿನ ಪ್ರೀತಿ ಮರುಹುಟ್ಟಲು ಕಾರಣರಾಗಿದ್ದೇ ಸಚಿವ ಸತೀಶ್ ಜಾರಕಿಹೊಳಿ. ಇದು ನಿಜಕ್ಕೂ ಸತ್ಯದ ಮಾತು. ಹೆಚ್ಡಿಕೆ ಹಾಗೂ ಸಿದ್ದರಾಮಯ್ಯರನ್ನು ಒಂದುಗೂಡಿಸಿದ್ದೇ ಈ ಸತೀಶ್ ಜಾರಕಿಹೊಳಿಯವರು ಅನ್ನೋದು ತಿಳಿದುಬಂದಿದೆ. ಸತೀಶ್ ಜಾರಕಿಹೊಳಿಯವರ ಸಮ್ಮುಖದಲ್ಲೇ ಸಿದ್ದು-ಹೆಚ್ಡಿಕೆ ರಾಜೀ ಸಂಧಾನ ನಡೆದಿದೆ ಎನ್ನಲಾಗಿದೆ.
ಸತೀಶ್ ಜಾರಕಿಹೊಳಿಯವರು ಈ ಹಿಂದೆ 1999ರಿಂದ 2005ರವರೆಗೂ ಜೆಡಿಎಸ್ನಲ್ಲೇ ಇದ್ದರು. ಹೆಚ್ಡಿ ಕುಮಾರಸ್ವಾಮಿ, ಹೆಚ್ಡಿ ದೇವೇಗೌಡರ ಜೊತೆ ಉತ್ತಮ ಒಡನಾಟ ಇಟ್ಟುಕೊಂಡಿದ್ದರು. ಇದೇ ವಿಶ್ವಾಸ ಈಗಲೂ ಕೂಡ ಹೆಚ್ಡಿಕೆ ಜೊತೆಗಿದೆ. ಇದೇ ಕಾರಣಕ್ಕಾಗಿ ಸಿಎಂ ಹಾಗೂ ಹೆಚ್ಡಿಕೆ ನಡುವೆ ಮತ್ತೆ ಪ್ರೀತಿ-ವಿಶ್ವಾಸ ಹುಟ್ಟಲು ಸತೀಶ್ ಜಾರಕಿಹೊಳಿ ನೆರವಾಗಿದ್ದಾರೆ. ಇಬ್ಬರ ಜೊತೆಗೂ ಮಾತುಕತೆ ನಡೆಸಿ ಒಂದು ಮಾಡಿದ್ದಾರೆ. ಈ ಮೂಲಕ ಮುಡಾ ಹೋರಾಟದಿಂದ ಹೆಚ್ಡಿಕೆ ಹಿಂದೆ ಸರಿಯುವಂತೆ ಸತೀಶ್ ಜಾರಕಿಹೊಳಿ ಮಾಡಿಸಿದ್ದಾರೆ ಎನ್ನಲಾಗಿದೆ.
ಇದೇ ನಡುವೆ ಸಿಎಂ ಕುರ್ಚಿಯಿಂದ ಸಿದ್ದರಾಮಯ್ಯ ಕೆಳಗಿಳಿಯಬೇಕೆನ್ನೋ ಒತ್ತಡ ಹೆಚ್ಚಾಗುತ್ತಿದೆ. ಒಂದು ವೇಳೆ ಅಂತಹ ಪರಿಸ್ಥಿತಿ ಬಂದಿದ್ದೇ ಆದಲ್ಲಿ, ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ಸತೀಶ್ ಜಾರಕಿಹೊಳಿಯವರನ್ನ ಶಿಫಾರಸ್ಸು ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಸಿಎಂ ರಾಜೀನಾಮೆ ಕೊಡಲೇಬೇಕಾದ ಸಂದರ್ಭ ಬಂದಲ್ಲಿ, ಡಿಕೆಶಿಗೆ ಮಾತ್ರ ಕುರ್ಚಿ ಬಿಟ್ಟುಕೊಡಬಾರದು ಅನ್ನೋದು ಹೆಚ್ಡಿಕೆ ಅಭಿಪ್ರಾಯ. ಇದೇ ಕಾರಣಕ್ಕೆ ಪರಮಾಪ್ತರೇ ಆಗಿರುವ ಸತೀಶ್ ಜಾರಕಿಹೊಳಿಯವರನ್ನೇ ಸಿಎಂ ಮಾಡಬೇಕೆಂದು ಸಿದ್ದರಾಮಯ್ಯ ಹೈಕಮಾಂಡ್ಗೆ ಶಿಫಾರಸ್ಸು ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.