ಬ್ರಿಟನ್: ಹೌಸ್ ಆಫ್ ಲಾರ್ಡ್ಸ್ ನಲ್ಲಿ ನಡೆದ ಇಂಡೋ-ಯುರೋಪಿಯನ್ ಹೂಡಿಕೆ ಸಮ್ಮೇಳನದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಈ ಮೂಲಕ ಬ್ರಿಟನ್ ಸಂಸತ್ನಲ್ಲಿ ರಾಜ್ಯದ ಗ್ಯಾರಂಟಿ ಯೋಜನೆಗಳು ಸದ್ದು ಮಾಡಿವೆ.
ಬ್ರಿಟನ್ ಹೌಸ್ ಆಫ್ ಲಾರ್ಡ್ಸ್ ನಲ್ಲಿ ನಡೆದ ಇಂಡೋ-ಯುರೋಪಿಯನ್ ಸಮ್ಮೇಳನದಲ್ಲಿ ಮುಖ್ಯ ಹೂಡಿಕೆ ಭಾಷಣಕಾರರಾಗಿ ಸಚಿವ ಸಂತೋಷ್ ಲಾಡ್ ಅವರು ಮಾತನಾಡಿದರು. ಕರ್ನಾಟಕ ಹಾಗೂ ಬೆಂಗಳೂರಿನಲ್ಲಿ ಹೂಡಿಕೆ ಮಾಡಲು ಮತ್ತು ಉದ್ಯಮವನ್ನು ವಿಸ್ತರಣೆ ಮಾಡಲು ಸಾಕಷ್ಟು ವಿಫುಲ ರೀತಿಯಲ್ಲಿ ನಮ್ಮ ರಾಜ್ಯ ಸರ್ಕಾರ ಹೂಡಿಕೆದಾರರಿಗೆ ನೆರವು ಒದಗಿಸಲಿದೆ. ಕೃಷಿ, ಉದ್ದಿಮೆ ಹೀಗೆ ಹಲವು ರಂಗದಲ್ಲಿ ಹೂಡಿಕೆದಾರರು ಕರ್ನಾಟಕದಲ್ಲಿ ಹೂಡಿಕೆ ಮಾಡಬಹುದು. ಕರ್ನಾಟಕದ ಜಿಡಿಪಿ ಭಾರತದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದರು.
ಪಂಚ ಗ್ಯಾರಂಟಿಗಳನ್ನು ಹಾಡಿಹೊಗಳಿದ ಲಾಡ್:
ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಕಾರ್ಯಕ್ರಮಗಳ ಬಗ್ಗೆ ಗಮನ ಸೆಳೆದ ಸಚಿವ ಸಂತೋಷ್ ಲಾಡ್ ಅವರು, ಗ್ಯಾರಂಟಿ ಕಾರ್ಯಕ್ರಮಗಳು ನಮ್ಮ ದೇಶದ ಇತರ ರಾಜ್ಯಗಳು ಮಾತ್ರವಲ್ಲದೆ, ವಿಶ್ವದ ಹಲವು ದೇಶಗಳಿಗೂ ಕೂಡ ಮಾದರಿಯಾಗಿವೆ. ಇದೊಂದು ಅಭೂತಪೂರ್ವವಾದ ಕಾರ್ಯಕ್ರಮ. ಈ ಕಾರ್ಯಕ್ರಮಗಳಿಗೆ ಪ್ರತಿ ವರ್ಷ 12 ಬಿಲಿಯನ್ ಡಾಲರ್ ಅನ್ನು ಖರ್ಚು ಮಾಡಲಾಗುತ್ತಿದೆ. ಬಡ ಜನರಿಗೆ ಸಾಮಾಜಿಕ ಸೇವಾ ಯೋಜನೆಗಳನ್ನು ನೀಡಲಾಗುತ್ತಿದೆ. ಇದರಿಂದ ನಮ್ಮ ಕರ್ನಾಟಕ ರಾಜ್ಯದ ಜಿಡಿಪಿ ಸಹ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಇಂತಹ ಯೋಜನೆಯನ್ನು ಜಾರಿ ಮಾಡಿದ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧನ್ಯವಾದಗಳು ಎಂದು ಹೇಳಿದರು.
ಕರ್ನಾಟಕ ಐಟಿ ಮಾತ್ರವಲ್ಲದೆ ಬಿಟಿಯಲ್ಲೂ ದೊಡ್ಡ ಹೆಸರು ಪಡೆದಿದೆ:
ನಮ್ಮ ಕರ್ನಾಟಕವು ಕೇವಲ ಐಟಿ ಮಾತ್ರವಲ್ಲದೆ ಜೈವಿಕ ತಂತ್ರಜ್ಞಾನ (ಬಿಟಿ) ದಲ್ಲೂ ದೊಡ್ಡ ಹೆಸರನ್ನು ಪಡೆದಿದೆ. ಪಶುಸಂಗೋಪನೆ, ರೇಷ್ಮೆಯಂತಹ ಚಟುವಟಿಕೆಗಳ ವಿಸ್ತರಣೆಗೆ ಅತ್ಯುತ್ತಮ ಅವಕಾಶಗಳಿವೆ. ಏಷ್ಯಾದಲ್ಲೇ ಅತೀ ದೊಡ್ಡ ಸೋಲಾರ್ ಪಾರ್ಕ್ ನಮ್ಮ ಕರ್ನಾಟಕದಲ್ಲಿದೆ. ಬಹುರಾಷ್ಟ್ರೀಯ ಕಂಪನಿಗಳು, ಐಟಿ ಕಂಪನಿಗಳು ಕರ್ನಾಟಕದಲ್ಲಿ ಶ್ರೇಷ್ಠ ಪ್ರಗತಿಯನ್ನು ಸಾಧಿಸಿವೆ ಎಂದು ವಿವರಿಸಿದರು.
ಕರ್ನಾಟಕದಲ್ಲಿ ಹೂಡಿಕೆಗೆ ಹೆಚ್ಚು ಆದ್ಯತೆ ನೀಡಬೇಕು:
ಬ್ರಿಟನ್ ಮತ್ತು ಭಾರತದ ನಂಟು ತುಂಬಾ ಹಳೆಯದು. ಹೂಡಿಕೆಗೆ ಎರಡೂ ಸರ್ಕಾರಗಳು ಕೈ ಜೋಡಿಸಿದರೆ ಬಹಳಷ್ಟು ಪ್ರಯೋಜನವಾಗಲಿವೆ. ಈ ನಿಟ್ಟಿನಲ್ಲಿ ಹೂಡಿಕೆದಾರರು ಕರ್ನಾಟಕದಲ್ಲಿ ಹೂಡಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಚಿವ ಸಂತೋಷ್ ಲಾಡ್ ಮನವಿ ಮಾಡಿದರು.