ಬೆಂಗಳೂರು: ಚಿತ್ತಾಪುರದಲ್ಲಿ ನವೆಂಬರ್ 2ನೇ ತಾರೀಖು RSS ಪಥ ಸಂಚಲನ ನಡೆದೇ ನಡೆಯುತ್ತೆ. ಹೈಕೋರ್ಟ್ ಕೂಡ ಹೇಳಿದೆ. ರಾಜ್ಯದ ಎಲ್ಲಾ ಕ್ಷೇತ್ರದಲ್ಲಿ ಪಥ ಸಂಚಲನ ಆಗ್ತಿದೆ. ಹಾಗೇ ಚಿತ್ತಾಪುರದಲ್ಲಿ ನಡೆಯುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ..
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆಗೆ RSS ಟೀಕೆ ಮಾಡೋ ದುರ್ಬುದ್ಧಿ ಯಾಕೆ ಬಂದಿದೆಯೋ ಗೊತ್ತಿಲ್ಲ. RSS ಟೀಕೆ ಮಾಡ್ತಿರೋದು ಪ್ರಚಾರಕ್ಕೋ ಅಥವಾ ಸಿಎಂ ಕುರ್ಚಿಗೆ ಟವಲ್ ಹಾಕೋಕೆ ಗೊತ್ತಿಲ್ಲ. ಮಲ್ಲಿಕಾರ್ಜುನ ಖರ್ಗೆ ಹೇಳಿದ ಹಾಗೆ ಪ್ರಿಯಾಂಕ್ ಖರ್ಗೆ ಏಕಾಂಗಿ ಆಗಿದ್ದಾರೆ. ಗಾಂಧಿ ಕುಟುಂಬದಿಂದಲೇ RSS ಮಣಿಸೋಕೆ ಆಗಲಿಲ್ಲ. ಇಂತಹ ಹೇಳಿಕೆ ನಿತ್ಯ ಕೊಡೋ ಮೂಲಕ ವಾಸ್ತವಿಕ ಸತ್ಯ ಮರೆ ಮಾಚೋ ಕೆಲಸ ಕಾಂಗ್ರೆಸ್ ಮಾಡ್ತಿದೆ. ಆಡಳಿತ ಪಕ್ಷದ ವೈಫಲ್ಯ ಮುಚ್ಚಿಕೊಳ್ಳೋಕೆ RSS ಟೀಕೆ ಮಾಡ್ತಿದ್ದಾರೆ ಅಂತ ಕಿಡಿಕಾರಿದರು.
ಪ್ರಿಯಾಂಗ್ ಖರ್ಗೆ ಹೀಗೆ ಟೀಕೆ ಮಾಡಿ RSS ಅವಹೇಳನ ಮಾಡೋದು ಸರಿಯಲ್ಲ. RSS ಇಂತಹ ಅನೇಕ ಅಗ್ನಿ ಪರೀಕ್ಷೆ ಎದುರಿಸಿದೆ. RSS ಯಾವುದೇ ವಿಷಯಕ್ಕೆ ಪ್ರತಿಕ್ರಿಯೆ ನೀಡದೇ ಸಮಾಜ ಸೇವೆ ಕೆಲಸ ಮುಂದುವರೆಸಿಕೊಂಡು ಹೋಗ್ತಿದೆ ಎಂದು ಹೇಳಿದರು.ಇನ್ನು ಬಿಜೆಪಿ ಅವರು ಸೀಳು ನಾಯಿಗಳು ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪ್ರಿಯಾಂಕ್ ಖರ್ಗೆ ಅವರ ಅಪ್ರಬುದ್ಧ ಹೇಳಿಕೆಗೆ ನಾನು ಪ್ರತಿಕ್ರಿಯೆ ಕೊಡಲ್ಲ.
ಪ್ರಿಯಾಂಕ್ ಖರ್ಗೆ ಅವರೇ ಕೆಲಸಕ್ಕೆ ಬಾರದ್ದನ್ನ ಮಾತಾಡೋದು ಬಿಡಿ. ನಿಮ್ಮ ಕುಟುಂಬ 40-50 ವರ್ಷಗಳ ಕಾಲ ರಾಜಕೀಯದಲ್ಲಿ ಹಿಡಿತ ಇಟ್ಟುಕೊಂಡು ಬಂದಿದೆ. ನಿಮ್ಮ ಅಧಿಕಾರದಲ್ಲಿ ಕಲಬುರಗಿ ಏನಾಗಿದೆ ಮೊದಲು ಹೇಳಿ? ಶಿಕ್ಷಣದಲ್ಲಿ ಎಷ್ಟನೇ ಸ್ಥಾನದಲ್ಲಿ ಇದೆ ಮೊದಲು ಹೇಳಿ? ಅವರ ಜಿಲ್ಲೆ ಏನ್ ಅಭಿವೃದ್ಧಿ ಆಗಿದೆ ಮೊದಲು ಪ್ರಿಯಾಂಕ್ ಖರ್ಗೆ ನೋಡಲಿ. ಬಿಜೆಪಿ ಅವಧಿಯಲ್ಲಿ ಕಲಬುರ್ಗಿಗೆ ಎಷ್ಟು ಹಣ ಬಿಡುಗಡೆ ಆಗಿತ್ತು. ಕಾಂಗ್ರೆಸ್ ಅವಧಿಯಲ್ಲಿ ಎಷ್ಟು ಹಣ ಕೊಟ್ಟಿದ್ದಾರೆ? ಮೊದಲು ಪ್ರಿಯಾಂಕ್ ಖರ್ಗೆ ಹೇಳಲಿ ಅಂತ ಪ್ರಿಯಾಂಕ್ ವಿರುದ್ಧ ವಿಜಯೇಂದ್ರ ಕಿಡಿಕಾರಿದರು.


