ಬೆಂಗಳೂರು: ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಬುಲೆಟ್ ರಿಯಾಲಿಟಿ ಶೋವೊಂದರಲ್ಲಿ ವಿವಾದಿತ ಡೈಲಾಗ್ ಹೇಳುವ ಮೂಲಕ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನಟ ದರ್ಶನ್ ಅವರ ಬುಲ್ಬುಲ್ ಸಿನಿಮಾದಲ್ಲಿನ ವಿವಾದಿತ ಡೈಲಾಗ್ ಅನ್ನು ಕಿರುತೆರೆ ವೇದಿಕೆಯಲ್ಲಿ ಪುನರುಚ್ಚರಿಸುವುದು ವೀಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ. ರಕ್ಷಕ್ ಮಾತನಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾರ್ವಜನಿಕರು ಧಾರ್ಮಿಕ ಭಾವನೆಗಳಿಗೆ ರಕ್ಷಕ್ ಧಕ್ಕೆಯನ್ನುಂಟು ಮಾಡಿದ್ದಾರೆ, ಅವರು ಕೂಡಲೇ ಕ್ಷಮೆಯಾಚಿಸಬೇಕೆಂದು ಪಟ್ಟು ಹಿಡಿದಿದ್ದಾರೆ.
ಜೀ ಕನ್ನಡದ ಭರ್ಜರಿ ಬ್ಯಾಚುಲರ್ಸ್-2 ವೇದಿಕೆಯಲ್ಲಿ ಇತ್ತೀಚೆಗೆ ದರ್ಶನ್ ಹಾಗೂ ರಚಿತಾ ರಾಮ್ ನಟನೆಯ ಬುಲ್ ಬುಲ್ ಚಿತ್ರದ ದೃಶ್ಯವನ್ನು ಜಡ್ಜ್ ಆಗಿದ್ದ ರಚಿತಾ ರಾಮ್ ಎದುರೇ ರಕ್ಷಕ್ ಮರುಸೃಷ್ಟಿ ಮಾಡಿದ್ದರು. ಭರ್ಜರಿ ಬ್ಯಾಚುಲರ್ಸ್-2 ನಲ್ಲಿ ರಕ್ಷಕ್ಗೆ ರಮೋಲಾ ಜೋಡಿಯಾಗಿದ್ದಾರೆ. ಇವರ ಸ್ಕಿಟ್ ನೋಡಿ ರಚಿತಾ ರಾಮ್ ಖುಷಿ ಪಟ್ಟು, ಸಿನಿಮಾ ನೋಡಿದ ಹಾಗೆಯೇ ಇತ್ತು ಎಂದು ಹೊಗಳಿದ್ದರು. ಆದರೆ, ಬುಲ್ಬುಲ್ ಸಿನಿಮಾದಲ್ಲಿದ್ದ ವಿವಾದಿತ ಡೈಲಾಗ್ ಅನ್ನೇ ಮತ್ತೊಮ್ಮೆ ಹೇಳುವ ಮೂಲಕ ರಕ್ಷಕ್ ಬುಲೆಟ್ ವಿವಾದಕ್ಕೆ ಕಾರಣರಾಗಿದ್ದಾರೆ.
ರಿಯಾಲಿಟಿ ಶೋದಲ್ಲಿ ರಕ್ಷಕ್ ಆ್ಯಕ್ಟ್ ಮಾಡುತ್ತಾ, ‘ನಾವು ನಿಮ್ಮವರೇ ಕಣ್ರಿ. ಮಂಡ್ಯದವರು. ನಿಮ್ಮನ್ನ ನೋಡ್ತಾ ಇದ್ದ ಹಾಗೆಯೇ ಅಂದುಕೊಂಡೆ. ತಾಯಿ ಚಾಮುಂಡೇಶ್ವರಿನೇ ಬೆಟ್ಟದಿಂದ ಇಳಿದು, ಸೀರೆ-ಒಡವೆ ಎಲ್ಲಾ ಬಿಚ್ಚಿಟ್ಟು, ಪ್ಯಾಂಟು-ಶರ್ಟು ಹಾಕಿಕೊಂಡು ಸ್ವಿಡ್ಜರ್ಲ್ಯಾಂಡ್ನಲ್ಲಿ ಒಳ್ಳೇ ಟ್ರಿಪ್ ಹೊಡೀತಾ ಇದ್ದಾರೆ ಅಂತ..’ ಎಂದು ಹೇಳಿದ್ದರು. ರಕ್ಷಕ್ ಬುಲೆಟ್ ಏನೋ ಜೋಶ್ನಲ್ಲಿ ಈ ಡೈಲಾಗ್ ಹೇಳಿದ್ದಾರೆ. ಆದರೆ, ಈ ಡೈಲಾಗ್ ಬುಲ್ ಬುಲ್ ಸಿನಿಮಾ ಸಂದರ್ಭದಲ್ಲಿಯೂ ವಿವಾದ ಸೃಷ್ಟಿಸಿತ್ತು. ಇದೀಗ ಚಾಮುಂಡೇಶ್ವರಿ ದೇವಿಯ ಬಗ್ಗೆ ರಕ್ಷಕ್ ಬುಲೆಟ್ ಮಾತನಾಡಿಡುವುದು ವಿವಾದಕ್ಕೆ ಕಾರಣವಾಗಿದೆ.
ಈ ಬಗ್ಗೆ ಚಾಮುಂಡೇಶ್ವರಿ ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.. ‘ಸೋಕಾಲ್ಡ್ ಆರ್ ಬಾಸ್ ಮೊದಲು ಕರೆಕ್ಟ್ ಆಗಿ ಮಾತನಾಡೋದನ್ನು ಕಲಿ. ನಿಮ್ಮ ಚೀಪ್ ತೆವಲಿಗೆ ತಾಯಿ ಚಾಮುಂಡೇಶ್ವರಿ ಹೆಸರು ಯಾಕೆ ತೆಗೀತಿಯಾ. ಯಾಕೋ ನಿನಗೂ ಸಹವಾಸ ದೋಷ ಅನಿಸುತ್ತದೆ’ ಎಂದು ನೆಟ್ಟಿಗರೊಬ್ಬರು ಬರೆದಿದ್ದಾರೆ. ಈ ಬಗ್ಗೆ ಸೂಕ್ತವಾದ ನೋಟಿಸ್ ಜಾರಿ ಮಾಡಿ ಅವರಿಂದ ಒಂದು ಕ್ಷಮಾಪಣೆ ಹೇಳಿಸಬಹುದೇ ಎಂದು ವ್ಯಕ್ತಿಯೊಬ್ಬರು ವಕೀಲರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.