Monday, June 23, 2025
25.9 C
Bengaluru
Google search engine
LIVE
ಮನೆ#Exclusive NewsTop Newsನಾನು ಕಲಿತದ್ದು ಕನ್ನಡ ಸರ್ಕಾರಿ ಶಾಲೆಯಲ್ಲಿ : ಬಾಲ್ಯದ ಶಾಲಾ ದಿನಗಳನ್ನು ನೆನಪಿಸಿಕೊಂಡ ರಜಿನಿಕಾಂತ್

ನಾನು ಕಲಿತದ್ದು ಕನ್ನಡ ಸರ್ಕಾರಿ ಶಾಲೆಯಲ್ಲಿ : ಬಾಲ್ಯದ ಶಾಲಾ ದಿನಗಳನ್ನು ನೆನಪಿಸಿಕೊಂಡ ರಜಿನಿಕಾಂತ್

ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಅವರು ಬೆಂಗಳೂರಿನಲ್ಲಿನ ಶಾಲಾ ದಿನಗಳನ್ನು ಕನ್ನಡದಲ್ಲೇ ಸ್ಮರಿಸಿದ್ದಾರೆ. ಶಾಲಾ ದಿನಗಳನ್ನು ಅವರು ಮೆಲುಕು ಹಾಕಿದ್ದಾರೆ.

ಬೆಂಗಳೂರು ಎಂದರೆ ಸೂಪರ್ ಸ್ಟಾರ್ ರಜನಿಕಾಂತ್​ಗೆ ಎಲ್ಲಿಲ್ಲದ ಪ್ರೀತಿ. ಏಕೆಂದರೆ ತಮ್ಮ ಬಾಲ್ಯದ ಜೀವನ ಆರಂಭವಾಗಿದ್ದೆ ಬೆಂಗಳೂರಿನಲ್ಲಿ. ಈ ಸಿಲಿಕಾನ್ ಸಿಟಿಯಲ್ಲೇ ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಬಳಿಕ ತಮ್ಮ ಮುಂದಿನ ಬದುಕು ಆರಂಭಿಸಿದ್ದರು. ಇದರಿಂದ ಅವರ ಬಾಲ್ಯದ ನೆನಪುಗಳನ್ನು ಹಿರಿಯ ನಟ ಮೆಲುಕು ಹಾಕಿದ್ದಾರೆ. ಅಲ್ಲದೇ ರಜನಿಕಾಂತ್ ಮೊದಲು ಕನ್ನಡ ಮೀಡಿಯಂ ವಿದ್ಯಾರ್ಥಿ ಎನ್ನುವುದು ಹೆಮ್ಮೆಯ ಸಂಗತಿಯೇ ಸರಿ.

ತಮ್ಮ ಶಾಲಾ ದಿನಗಳು ಕುರಿತು ರಜನಿಕಾಂತ್ ಅವರು ಮಾತನಾಡಿ, ಬೆಂಗಳೂರಿನಲ್ಲಿ ಎಪಿಎಸ್ ಸ್ಕೂಲ್ ಮತ್ತು ಕಾಲೇಜಿನಲ್ಲಿ ಓದಿದಕ್ಕೆ ನನಗೆ ಈಗಲೂ ತುಂಬಾ ಹೆಮ್ಮೆ ಇದೆ. ಮೊದಲು ನಾನು ಗವಿಪುರದಲ್ಲಿರುವ ಗಂಗಧಾರೇಶ್ವರ ದೇವಾಲಯದ ಬಳಿ ಇರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದೆ. ನಾನು ಕ್ಲಾಸ್‌ಗೆ ಫಸ್ಟ್, ಬೆಸ್ಟ್ ಸ್ಟುಡೆಂಟ್, ಕ್ಲಾಸ್‌ಗೆ ನಾನೇ ಮಾನಿಟರ್ ಆಗಿದ್ದೆ. ಮಿಡಲ್ ಸ್ಕೂಲ್‌ನಲ್ಲಿ 98% ಸ್ಕೋರ್ ಮಾಡಿದ್ದೆ ಎಂದು ರಜನಿಕಾಂತ್ ಗರ್ವದಿಂದ ಹೇಳಿಕೊಂಡಿದ್ದಾರೆ.

ಸ್ಕೂಲ್​ನಲ್ಲಿ ತುಂಬಾ ಒಳ್ಳೆಯ ಮಾರ್ಕ್ಸ್​​ ತೆಗೆದುಕೊಂಡಿದ್ದಕ್ಕೆ ನಮ್ಮ ಅಣ್ಣ, ನನ್ನನ್ನು ಇಂಗ್ಲಿಷ್ ಮೀಡಿಯಂಗೆ ಎಪಿಎಸ್ ಹೈಸ್ಕೂಲ್​ಗೆ ಸೇರಿಸಿಬಿಟ್ಟರು. ಇದರಿಂದ ನಾನು ಫಂಕ್ ಆಗಿ ಹೋಗಿಬಿಟ್ಟೆ. ಮೊದಲ ಬೆಂಚ್​ನಲ್ಲಿದ್ದ ಸ್ಟುಡೆಂಟ್ ಕೊನೆ ಬೆಂಚ್​ಗೆ ಬಂದು ಬಿಟ್ಟೆ. ಇದರಿಂದ ಡಿಪ್ರೆಶನ್​ಗೆ ಹೋದೆ. ಆದರೆ ಎಪಿಎಸ್ ಸ್ಕೂಲ್-ಕಾಲೇಜಿನಲ್ಲಿ ಶಿಕ್ಷಕರು ನನ್ನ ಮೇಲೆ ಸಾಕಷ್ಟು ಅಭಿಮಾನ ತೋರಿಸಿದರು. ಕರುಣೆ ತೋರಿಸಿ, ಪ್ರೇಮಾದಿಂದ ಪಾಠ ಹೇಳಿದರು. ಇದರಿಂದ ನಾನು 8, 9ನೇ ತರಗತಿಯನ್ನು ಪಾಸ್ ಮಾಡಿದೆ. ಆದರೆ 10ನೇ ತರಗತಿ (ಆವಾಗ ಪಬ್ಲಿಕ್ ಎಕ್ಸಾಂ) ಯಲ್ಲಿ ಪಿಸಿಎಂ ವಿಷಯ ತೆಗೆದುಕೊಂಡಿದ್ದೆ ಎಂದು ಹೇಳಿದ್ದಾರೆ.

10ನೇ ತರಗತಿಯಲ್ಲಿ ಪಿಸಿಎಂ ವಿಷಯ ತೆಗೆದುಕೊಂಡಿದ್ದರಿಂದ ಓದುವುದರಲ್ಲಿ ಬಹಳ ವೀಕ್ ಆಗಿದ್ದೆ. ಇದರಿಂದ ಈ ವಿಷಯಗಳಲ್ಲಿ ಫೇಲ್ ಆಗಿದ್ದೆ. ಆವಾಗ ನಮ್ಮ ಕೆಮಿಸ್ಟ್ರೀ ಟೀಚರ್, ಮನಗೆ ಬಂದು 6 ಗಂಟೆಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದರು. ಉಚಿತವಾಗಿ, ಸ್ಪೆಷಲ್ ಇಂಟ್ರೆಸ್ಟ್​ ತೆಗೆದುಕೊಂಡು ಕ್ಲಾಸ್ ಮಾಡುತ್ತಿದ್ದರು. ಹೀಗಾಗಿ 10ನೇ ಕ್ಲಾಸ್ ಪಾಸ್ ಮಾಡಿದೆ. ಇದಾದ ಮೇಲೆ ಅಲ್ಲೇ ಎಪಿಎಸ್ ಕಾಲೇಜಿಗೆ ಸೇರಿದೆ. ಆದರೆ ಆ ಮೇಲೆ ಕೆಲ ಕಾರಣಗಳಿಂದ ಕಾಲೇಜು ಕಂಟಿನ್ಯೂ ಮಾಡಲಾಗಲಿಲ್ಲ ಎಂದು ನೆನಪು ಮಾಡಿಕೊಂಡರು.

ಎಪಿಎಸ್ ಹೈಸ್ಕೂಲ್​ನಲ್ಲಿ ಓದುವಾಗ ಪ್ರತಿ ವರ್ಷದಂತೆ ಇಂಟರ್ ಹೈಸ್ಕೂಲ್ ಡ್ರಾಮಾಗಳು ನಡೆದವು. ಇದರಲ್ಲಿ 10, 15 ಶಾಲೆಗಳು ಭಾಗಿಯಾಗಿದ್ದವು. ನಾನು ಶಾಲೆಗೆ ಲೇಟ್ ಆಗಿ ಬಂದಾಗ ಟೀಚರ್ ಬಳಿ, ಯಾವುದಾದರೂ ಸಿನಿಮಾ ನೋಡಿದ್ದು, ನಾಟಕ ನೋಡಿದ್ದನ್ನ ಆ್ಯಕ್ಟ್ ಮಾಡಿ, ಕಥೆ ಹೇಳುತ್ತಿದ್ದರಿಂದ ಎಲ್ಲರಿಗೂ ತುಂಬಾ ಇಷ್ಟ ಆಗಿದ್ದೆ. ಇದು ಮೇಷ್ಟರಿಗಳಿಗೂ ಗೊತ್ತಾಗಿತ್ತು. ಹೀಗಾಗಿ ಇಂಟರ್ ಹೈಸ್ಕೂಲ್ ಡ್ರಾಮಾ ಕಾರ್ಯಕ್ರದಮಲ್ಲಿ ನೀನು ಡ್ರಾಮಾ ಮಾಡಬೇಕು ಎಂದು ಹೇಳಿದ್ದರು ಅಂತ ನಟನೆಯ ಮೊದಲ ಎಳೆ ಹೇಗೆ ಪ್ರಾರಂಭ ಆಯಿತು ಅಂತ ಸೂಪರ್ ಸ್ಟಾರ್ ಹೇಳಿಕೊಂಡರು.

ಆದಿ ಶಂಕರಚಾರ್ಯರು ಚಂಡಾಲನನ್ನು ಭೇಟಿ ಆಗುವ ನಾಟಕ ಅನ್ನು ಮಾಡಿದ್ದೇವು. ಇದರಲ್ಲಿ ನಾನು ಚಂಡಾಲನ ಪಾತ್ರ ಮಾಡಿದ್ದೆ. ನಮ್ಮ ಡ್ರಾಮಾಕ್ಕೆ ಪ್ರಶಸ್ತಿ ಬಂತು. ಆವಾಗಲೇ ನನಗೆ ಬೆಸ್ಟ್ ಆ್ಯಕ್ಟರ್ ಎಂಬ ಪ್ರಶಸ್ತಿ ಕೊಟ್ಟಿದ್ದರು. ಅದೇ ನನಗೆ ಪ್ರೋಫೆಷನ್ ಆಗಿ, ಈಗ ನನಗೆ ಸಾಧ್ಯವಾದಷ್ಟು ನಟನೆ ಮಾಡಿ ಎಲ್ಲರನ್ನು ರಂಜಿಸುತ್ತಿದ್ದೇನೆ. ಅದಕ್ಕೆ ಕಾರಣ ಎಪಿಎಸ್ ಹೈಸ್ಕೂಲ್. ಅವಾಗ ಅಲ್ಲಿ ನಾವು ಆಡಿದ ಆಟ, ಕ್ರಿಕೆಟ್, ಪುಟ್ಬಾಲ್, ಖೋಖೋ, ಕಬ್ಬಡ್ಡಿ ಈ ಎಲ್ಲ ಮರೆಯೋಕೆ ಸಾಧ್ಯವಿಲ್ಲ ಎಂದಿದ್ದಾರೆ.

ಮನೆಯಿಂದ ಶಾಲೆಗೆ ಹೋಗಬೇಕಾದರೆ ದೊಡ್ಡಗಣೇಶ, ಬಸವನಗುಡಿ ಅಲ್ಲಿ ಓಡಾಡಿರುವುದೆಲ್ಲ ಈಗಲೂ ನನ್ನ ಮನಸಿಲ್ಲಿ ಹಚ್ಚ ಹಸಿರಾಗಿದೆ. ತುಂಬಾ ಹೆಮ್ಮೆ ಇದೆ. ಮುಂದಿನ ಬಾರಿ ಬಂದಾಗ ನಿಮ್ಮೆಲ್ಲರನ್ನೂ ಭೇಟಿ ಮಾಡುತ್ತೇನೆ ಎಂದು ಎಪಿಎಸ್ ಹೈಸ್ಕೂಲ್​ ಸಿಬ್ಬಂದಿಗೆ ತಿಳಿಸಿದ್ದಾರೆ. ಅಲ್ಲದೇ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಬೇಕಾ, ಬೇಡ್ವಾ ಎಂದು ಕೇಳಿದ್ದಕ್ಕೆ, ಧಾರಾಳವಾಗಿ ಪೋಸ್ಟ್ ಶೇರ್ ಮಾಡಿ ಎಂದು ಸೂಪರ್ ಸ್ಟಾರ್ ಹೇಳಿದ್ದಾರೆ. ಶೂಟಿಂಗ್​ನಲ್ಲಿರುವ ರಜನಿಕಾಂತ್ ಅವರು, ಎಪಿಎಸ್ ಹೈಸ್ಕೂಲ್​- ಕಾಲೇಜಿನ ಹಳೆಯ ವಿದ್ಯಾರ್ಥಿಗಳ ದಿನಾಚರಣೆಗೆ ಬ್ಯಾಂಕಾಕ್​ನಿಂದಲೇ ಶುಭಾಶಯ ತಿಳಿಸಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments