
ಬೆಂಗಳೂರು: “ಧರೆಯ ಕೃಷಿ ಶುದ್ಧವಾಗಿಯಲ್ಲದೆ, ಸಸಿ ಶುದ್ಧವಿಲ್ಲ” ಎಂಬ ವಚನಕಾರ ಶಿವಲೆಂಕ ಮಂಚಣ್ಣನವರ ಸಾಲುಗಳೊಂದಿಗೆ ಸಿಎಂ ಸಿದ್ದರಾಮಯ್ಯ ರೈತರಿಗಾಗಿ ಭರ್ಜರಿ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಬಿತ್ತನೆಯಿಂದ ಮಾರಾಟದವರೆಗೆ ರೈತರಿಗೆ ಬೆಂಬಲ ನೀಡಲು ನಾಲ್ಕು ಆಧಾರಸ್ತಂಭಗಳ ಕೃಷಿ ಅಭಿವೃದ್ಧಿ ತಂತ್ರವನ್ನು ಸರ್ಕಾರ ರೂಪಿಸಿದೆ. ಮುಂದಿನ ಮೂರು ವರ್ಷಗಳಲ್ಲಿ ರೈತರ ಆದಾಯ ಹೆಚ್ಚಿಸಲು 100 ಕೋಟಿ ರೂ. ವೆಚ್ಚದಲ್ಲಿ ‘ಮುಖ್ಯಮಂತ್ರಿ ಕೃಷಿ ವಿಸ್ತಾರ’ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಘೋಷಿಸಲಾಗಿದೆ.
ಬಜೆಟ್ನ ಪ್ರಮುಖ ಮುಖ್ಯಾಂಶಗಳು:
- ರೈತ ಮಾಲ್ ಸ್ಥಾಪನೆ: ರೈತರಿಗೆ ಒಂದೇ ಸೂರಿನಡಿ ಬಿತ್ತನೆ ಬೀಜ, ಗೊಬ್ಬರ ಹಾಗೂ ಯಂತ್ರೋಪಕರಣ ಒದಗಿಸಲು ಕೋಲಾರ ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ MSIL ವತಿಯಿಂದ ‘ರೈತ ಮಾಲ್’ ಸ್ಥಾಪನೆ!
- ವಸುಧಾಮೃತ ಯೋಜನೆ: ಮಣ್ಣಿನ ಆರೋಗ್ಯ ಮತ್ತು ಸಾವಯವ ಇಂಗಾಲ ಹೆಚ್ಚಿಸಲು ಮುಂದಿನ ಮೂರು ವರ್ಷಗಳ ಕಾಲ ‘ವಸುಧಾಮೃತ’ ಕಾರ್ಯಕ್ರಮ ಜಾರಿ.
- ಸಸ್ಯ ಸಂಜೀವಿನಿ: ಬೆಳೆಗಳಿಗೆ ತಗಲುವ ಕೀಟ ಮತ್ತು ರೋಗಗಳ ನಿಯಂತ್ರಣಕ್ಕೆ ಪರಿಸರ ಸ್ನೇಹಿ ಕ್ರಮಗಳಿಗಾಗಿ ‘ಸಸ್ಯ ಸಂಜೀವಿನಿ’ ಯೋಜನೆ ಘೋಷಣೆ.
- ಹೈಟೆಕ್ ರೈತ ಕರೆ ಕೇಂದ್ರ: ರೈತರಿಗೆ ಮಾಹಿತಿ ನೀಡುವ ಕರೆ ಕೇಂದ್ರವನ್ನು AI (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನದ ಮೂಲಕ ಉನ್ನತೀಕರಣ.
- ಸಾವಯವ ತಾಲ್ಲೂಕು: ಮಂಡ್ಯ ಜಿಲ್ಲೆಯ ಪಾಂಡವಪುರವನ್ನು ರಾಜ್ಯದ ಮೊದಲ ಸಂಪೂರ್ಣ ಸಾವಯವ ತಾಲ್ಲೂಕನ್ನಾಗಿ ಪರಿವರ್ತಿಸಲು ನಿರ್ಧಾರ.
- ಹೊಸ ಕೃಷಿ ಕಾಲೇಜು: ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ನೂತನ ಕೃಷಿ ಕಾಲೇಜು ಸ್ಥಾಪನೆಗೆ ಅಸ್ತು.
- ಮಿಲೆಟ್ ಹಬ್: ಸಿರಿಧಾನ್ಯ ಬೆಳೆಗಾರರಿಗೆ ತಾಂತ್ರಿಕ ಸಹಾಯ ಮತ್ತು ಮಾರುಕಟ್ಟೆ ಒದಗಿಸಲು ಏಕಗವಾಕ್ಷಿ ವ್ಯವಸ್ಥೆಯಡಿ ‘ಮಿಲೆಟ್ ಹಬ್’ ಬಲವರ್ಧನೆ.



