ಬಿಡಿಎ ಹಾಲಿ ಆಯುಕ್ತರ ನಿವೃತ್ತಿಗೆ ಎರಡು ತಿಂಗಳು ಬಾಕಿ ಇರುವಾಗಲೇ ಬಿಡಿಎ ಆಯುಕ್ತರಾಗಲು ಐಎಎಸ್ ಅಧಿಕಾರಿಗಳು ಭಾರಿ ಲಾಬಿ ಮಾಡುತ್ತಿದ್ದಾರೆ.ಬಿಡಿಎ ಕಮಿಷನರ್ ಹುದ್ದೆ ಪಡೆಯಲು ಐಎಎಸ್ ಅಧಿಕಾರಿಗಳಾದ ರಾಮ್ ಪ್ರಸಾತ್ ಮನೋಹರ್, ಕೆ.ಎ. ದಯಾನಂದ, ಜಿ. ಜಗದೀಶ್, ಮಹಾಂತೇಶ್ ಬೀಳಗಿ, ಕೆ.ಪಿ.ಮೋಹನ್ ರಾಜ್, ಅರ್ಚನಾ ಸೇರಿದಂತೆ ವಿವಿಧ ಅಧಿಕಾರಿಗಳು ಆಯುಕ್ತರಾಗಲು ತುದಿಗಾಲಲ್ಲಿ ನಿಂತಿದ್ದಾರೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಹುದ್ದೆ ಮೇಲೆ ಹಿರಿಯ ಐಎಸ್ಗಳ ದೃಷ್ಟಿ ನೆಟ್ಟಿದ್ದು, ಭಾರಿ ಕಸರತ್ತು ಮಾಡುತ್ತಿದ್ದಾರೆ.ಹಾಲಿ ಆಯುಕ್ತ ಜಯರಾಮ್ ಅವರು ಇದೇ ಮೇ-31ಕ್ಕೆ ನಿವೃತ್ತರಾಗಲಿದ್ದು, ಎರಡು ತಿಂಗಳು ಬಾಕಿ ಇರುವಾಗಲೇ ನನಗೆ ಬಿಡಿಎ ಹುದ್ದೆ ಕೊಡಿ. ನಾನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಸರ್ಕಾರಕ್ಕೆ ಐಎಎಸ್ ಅಧಿಕಾರಿಗಳು ದುಂಬಾಲು ಬಿದ್ದಿದ್ದಾರೆ. ತಮ್ಮ ಆಪ್ತ ಸಚಿವರು ಹಾಗೂ ಶಾಸಕರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒತ್ತಡ ಹೇರುತ್ತಿದ್ದಾರೆ.ಆದರೆ, ಮುಖ್ಯಮಂತ್ರಿ ಅವರು ಅಂತಿಮವಾಗಿ ಯಾರನ್ನು ಬಿಡಿಎ ಆಯುಕ್ತರನ್ನಾಗಿ ನೇಮಕ ಮಾಡುತ್ತಾರೆ ಎಂಬುದು ಸದ್ಯದ ಕುತೂಹಲ..