
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ಮಾಡಿರುವ ವಾಗ್ದಾಳಿ ಸದನದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಸಿದ್ದರಾಮಯ್ಯ ಅವರನ್ನು ಕುರಿತು ಮಾತನಾಡಿರುವ ಅಶೋಕ್, ಸಿದ್ದರಾಮಯ್ಯ ಅವರು ಈಗ ‘ಹೌದು ಹುಲಿಯಾ’ ಆಗಿ ಉಳಿದಿಲ್ಲ, ಬದಲಾಗಿ ‘ಹೌದು ಇಲಿಯಾ’ ಆಗಿದ್ದಾರೆ” ಎಂದು ವ್ಯಂಗ್ಯವಾಡಿದರು. ಸಿಎಂ ಈಗ ಮೊದಲಿನಂತೆ ಸಕ್ರಿಯವಾಗಿಲ್ಲ, ಆಡಳಿತದ ಮೇಲೆ ಅವರಿಗೆ ಬಿಗಿ ಇಲ್ಲ ಮತ್ತು ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ವಿಫಲವಾಗಿದೆ, ಸರ್ಕಾರದ ವಿರುದ್ಧ ಕೇಳಿಬರುತ್ತಿರುವ 80% ಕಮಿಷನ್ ಆರೋಪಗಳ ಬಗ್ಗೆ ಗುತ್ತಿಗೆದಾರರ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ? ಈ ಮೌನವು ಆರೋಪ ನಿಜವೆಂಬುದನ್ನು ಒಪ್ಪಿಕೊಂಡಂತಿದೆಯೇ ಎಂದು ಅಶೋಕ್ ಪ್ರಶ್ನಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಬಗ್ಗೆಯೂ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು, ಎರಡು ತಿಂಗಳ ಗೃಹಲಕ್ಷ್ಮಿ ಯೋಜನೆ ಮತ್ತು ಒಂದು ತಿಂಗಳ ಅಕ್ಕಿ ಹಣ ಬಿಡುಗಡೆಯಾಗಿಲ್ಲ. ಈ ಬಾಕಿ ಇರುವ ಸುಮಾರು 5,675 ಕೋಟಿ ರೂಪಾಯಿ ಹಣ ಎಲ್ಲಿಗೆ ಹೋಯ್ತು ಎಂದು ಸರ್ಕಾರವನ್ನು ಪ್ರಶ್ನಿಸಿದರು. ಕೋಗಿಲು ಲೇಔಟ್ನಲ್ಲಿನ ನುಸುಳುಕೋರರ ಬಗ್ಗೆ ಸರ್ಕಾರ ಅನುಕಂಪ ತೋರಿಸುತ್ತಿದೆ ಮತ್ತು ಕನ್ನಡಿಗರ ಹಿತಾಸಕ್ತಿಯನ್ನು ನಿರ್ಲಕ್ಷಿಸುತ್ತಿದೆ , ಅಧಿಕಾರಿಗಳ ಆತ್ಮಹತ್ಯೆ ಪ್ರಕರಣಗಳನ್ನು ಪ್ರಸ್ತಾಪಿಸಿ ಇದು ‘ಆತ್ಮಹತ್ಯೆ ಭಾಗ್ಯ’ ನೀಡುತ್ತಿರುವ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಅವಧಿಯಲ್ಲಿ ನೆಹರೂ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಹೆಸರಿಡಲಾದ ಸುಮಾರು ಎರಡು ಮೀಟರ್ ಉದ್ದದ ಯೋಜನೆಗಳ ಪಟ್ಟಿಯನ್ನು ಪ್ರದರ್ಶಿಸಿದ ಅಶೋಕ್, ಕಾಂಗ್ರೆಸ್ನ ಕುಟುಂಬ ರಾಜಕಾರಣವನ್ನು ಟೀಕಿಸಿದರು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಸಚಿವ ಬೈರತಿ ಸುರೇಶ್, ತಮ್ಮ ಮೊಬೈಲ್ನಲ್ಲಿ ಗಾಂಧೀಜಿ ಹೆಸರಿನಲ್ಲಿರುವ ವಿವಿಧ ಯೋಜನೆಗಳನ್ನು ಓದುವ ಮೂಲಕ ಅಶೋಕ್ ಅವರಿಗೆ ಟಕ್ಕರ್ ನೀಡಿದರು. ಒಟ್ಟಾರೆಯಾಗಿ ಡ್ರಗ್ಸ್ ಮಾಫಿಯಾ, ಕಾನೂನು ಸುವ್ಯವಸ್ಥೆ ಮತ್ತು ಕೇಂದ್ರ-ರಾಜ್ಯ ಸಂಘರ್ಷದ ವಿಚಾರಗಳಲ್ಲಿ ಅಶೋಕ್ ಅವರ ಭಾಷಣ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುವಂತಿತ್ತು.



