ಮೂಡಲಗಿ: ಉತ್ತರ ಕರ್ನಾಟಕದ ರೈತರ ಸಂಕಷ್ಟ ನೋಡಲಾರದೆ, ನಾನು ಸ್ಥಳಕ್ಕೆ ಧಾವಿಸಿ ರೈತರ ಹೋರಾಟಕ್ಕೆ ಬೆಂಬಲವಾಗಿ ನಿಂತು ಹೋರಾಟದಲ್ಲಿ ಭಾಗವಹಿಸಿ ಸರ್ಕಾರದ ಕಿವಿ ಹಿಂಡಿ ಎಚ್ಚರಿಸುವಂತಹ ಕೆಲಸ ಮಾಡಿದ್ದೇನೆ ಬಿಜೆಪಿ ರಾಜ್ಯಾದ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ..
ಗುರ್ಲಾಪುರ ಕ್ರಾಸ್ನಲ್ಲಿ ಕಬ್ಬು ಬೆಳೆಗಾರರ ಕಬ್ಬಿನ ದರ ಏರಿಕೆಗಾಗಿ ನಡೆಯುತ್ತಿರುವ ಅಹೋರಾತ್ರಿ ಪ್ರತಿಭಟನೆ ಇಂದು 7ನೇ ದಿನಕ್ಕೆ ಕಾಲಿಟ್ಟಿದೆ. ಈ ಹೋರಾಟದಲ್ಲಿ ಭಾಗಿಯಾಗಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು, ಸತತವಾಗಿ ಏಳು ದಿನದವರೆಗೂ ಪ್ರಾಮಾಣಿಕವಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾಗೂ ಕಬ್ಬು ಬೆಳೆಗಾರರ ಸಂಘ ಮತ್ತು ವಿವಿಧ ಸಂಘಟನೆಗಳು ಪ್ರಾಮಾಣಿಕವಾಗಿ ಹೋರಾಟ ಮಾಡುತ್ತಿವೆ.
ನಿನ್ನೆಯ ದಿನ ಮುಖ್ಯಮಂತ್ರಿಗಳು ನನ್ನ ಜೊತೆ ಹಾಗೂ ಜಿಲ್ಲಾಧಿಕಾರಿಗಳ, ಸಚಿವರ ಮತ್ತು ಸಕ್ಕರೆ ಕಮಿಷನರ್ ಜೊತೆ ಚರ್ಚಿಸಿದ್ದಾರೆ. ರೈತರ ತಾಳ್ಮೆಯನ್ನು ಪರೀಕ್ಷೆ ಮಾಡದೆ ತಕ್ಷಣ ನ್ಯಾಯ ಒದಗಿಸುವ ಕೆಲಸವಾಗಬೇಕು. ಒಂದು ವೇಳೆ ನ್ಯಾಯ ಒದಗಿಸುವಂತಹ ಕೆಲಸ ಮಾಡದಿದ್ದರೆ ಈ ಹೋರಾಟದ ಬೆಂಕಿ ಇಡೀ ರಾಜ್ಯಕ್ಕೆ ಬೆಂಕಿ ಹಚ್ಚುತ್ತದೆ ಎಂದು ಸರ್ಕಾರದ ವಿರುದ್ಧ ಗುಡುಗಿದರು.
ಗುರ್ಲಾಪುರದಲ್ಲಿ ಪ್ರಾರಂಭವಾದಂತ ಈ ಐತಿಹಾಸಿಕ ರೈತರ ಚಳುವಳಿಯಿಂದ ಅಥಣಿ, ಚಿಕ್ಕೋಡಿ, ಬೈಲಹೊಂಗಲ, ವಿಜಯಪುರ ಅಷ್ಟೇ ಅಲ್ಲದೆ ಬೇರೆ ಬೇರೆ ಜಿಲ್ಲೆಗಳಲ್ಲಿ ಕೂಡ ರೈತರು ಬೀದಿಗಳಿದು ಹೋರಾಟ ಮಾಡುತ್ತಿರುವ ಪ್ರತಿಫಲವಾಗಿ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಸಚಿವರನ್ನು ಕಳಿಸುವಂತ ಕೆಲಸ ಮಾಡುತ್ತಿದೆ. ಸಚಿವರು ಈ ಸ್ಥಳಕ್ಕೆ ಬಂದಾಗ ಕೇಂದ್ರ ಸರ್ಕಾರದ ಮೇಲೆ ಗೊಂಬೆ ಕೂರಿಸುವಂತಹ ಕೆಲಸ ಮಾಡಬಾರದು ಎಂದು ಹೇಳಿದರು.
ಇವತ್ತು ನನ್ನ ಸುದೈವ ನನ್ನ 50ನೇ ಜನ್ಮದಿನವನ್ನು ಇಡೀ ನಾಡಿಗೆ ಅನ್ನ ನೀಡುವ ಅನ್ನದಾತನೊಂದಿಗೆ ಆಚರಿಸುವಂತಹ ಸೌಭಾಗ್ಯ ನನ್ನದಾಗಿದೆ. ಯಾವಾಗಲೂ ನಿಮ್ಮ ಜೊತೆ ನಾನಿದ್ದೇನೆ ಎಂಬ ಭರವಸೆಯನ್ನು ರೈತರಿಗೆ ನೀಡಿದರು. ಹೋರಾಟದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ರಾಯಬಾಗ ಶಾಸಕ ದುರ್ಯೋಧನ ಐಹೊಳೆ, ಮಾಜಿ ಶಾಸಕ ಪಿ ರಾಜು, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್, ಮಾಜಿ ಜಿಪಂ ಸದಸ್ಯ ಗೋವಿಂದ ಕೊಪ್ಪದ, ಪ್ರಮೋದ್ ಮುತಾಲಿಕ್ ಹಾಗೂ ವಿವಿಧ ಜಿಲ್ಲೆಯ ರೈತ ಮುಖಂಡರು ಉಪಸ್ಥಿತರಿದ್ದರು.


