ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಆರೋಪ ಪ್ರಕರಣದ ತನಿಖೆ ಚುರುಕುಗೊಂಡಿದೆ. ಸೋಮವಾರ ಸಂಜೆ ಬಂಧಿಸಲ್ಪಟ್ಟ ಮೂವರು ಶಂಕಿತ ಆರೋಪಿಗಳನ್ನು ವಿಧಾನಸೌಧ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಸೋಮವಾರ ರಾತ್ರಿ 39ನೇಎಸಿಎಂಎಂ ಕೋರ್ಟ್ ನ್ಯಾಯಾಧೀಶರ ಮನೆಯಲ್ಲಿ ಮೂವರನ್ನು ಹಾಜರುಪಡಿಸಿದ್ದ ಪೊಲೀಸರು ಬುಧವಾರದವರೆಗೂ (ಮಾರ್ಚ್ 6) ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಸದ್ಯ ಬ್ಯಾಡಗಿಯ ಮಹಮ್ಮದ್ ಶಫಿ ನಾಶಿಪುಡಿ, ಬೆಂಗಳೂರಿನ ಮುನಾವರ್ ಅಹಮದ್ ಹಾಗೂ ದೆಹಲಿಯ ಮಹಮ್ಮದ್ ಇಲ್ತಾಜ್ ವಿಚಾರಣೆಯನ್ನು ಪೊಲೀಸರು ನಡೆಸಿದ್ದಾರೆ.
ಬಂಧಿತರ ಪೈಕಿ ಬ್ಯಾಡಗಿಯ ಶಫಿ ನಾಶಿಪುಡಿ ಹಾಗೂ ಜಯಮಹಲ್ನ ಮುನಾವರ್ ಅಹಮದ್ ಕೆಲ ವರ್ಷಗಳ ಸ್ನೇಹಿತರು. ಆದರೆ, ದೆಹಲಿಯ ಮಹಮ್ಮದ್ ಇಲ್ತಾಜ್ಗೆ ಉಳಿದ ಆರೋಪಿಗಳಿಗೂ ಯಾವುದೇ ಪರಿಚಯವಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿಗಳ ಹಿನ್ನೆಲೆ ಏನು? ಈ ಹಿಂದೆ ಯಾವುದಾರೂ ಅಪರಾಧ ಕೃತ್ಯಗಳಲ್ಲಿ ಭಾಗಿ ಆಗಿದ್ದಾರಾ? ಪಾಕ್ ಪರ ಘೋಷಣೆ ಉದ್ದೇಶಪೂರ್ವಕನಾ? ಕೀಟಲೆ ಮಾಡಲು ಹಾಗೆ ಕೂಗಿದ್ರಾ? ಆ ಕ್ಷಣದಲ್ಲಿ ಉದ್ವೇಗದಲ್ಲಿ ಕೂಗಿದ್ರಾ? ಬಾಯ್ತಪ್ಪಿ ಕೂಗಿದ್ರಾ? ಈ ಘೋಷಣೆ ಹಿಂದೆ ಬೇರೆ ಯಾರಾದರೂ ಇದ್ದಾರಾ? ಎಂಬ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಬಂಧಿತ ಮೂವರ ಮೊಬೈಲ್ಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಡಿಲೀಟ್ ಆಗಿರಬಹುದಾದ ಡಾಟಾ ಪಡೆಯಲು ಮೊಬೈಲ್ಗಳನ್ನು ಎಫ್ಎಸ್ಎಲ್ಗೆ ಕಳಿಸಲು ಸಿದ್ಧತೆ ನಡೆಸಿದ್ದಾರೆ