ಜೀವನದ ಸಂಧ್ಯಾಕಾಲದಲ್ಲಿ ಯಡಿಯೂರಪ್ಪ ವಿರುದ್ಧ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿರೋದು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಯಡಿಯೂರಪ್ಪ ಅಭಿಮಾನಿಗಳು, ಬೆಂಬಲಿಗರಿಗಂತೂ ಇದು ಅರಗಿಸಿಕೊಳ್ಳಲು ಆಗುತ್ತಿಲ್ಲ. ಈ ದೂರಿನ ಸತ್ಯಸತ್ಯತೆಯನ್ನು ತಿಳಿದುಕೊಳ್ಳುವ ಸಂಬಂಧ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಯಾವುದೇ ಕ್ಷಣದಲ್ಲಿ ಯಡಿಯೂರಪ್ಪರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಬಹುದು ಎನ್ನಲಾಗುತ್ತಿದೆ.
ಅಷ್ಟಕ್ಕೂ, ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆಯ ತಾಯಿ ನೀಡಿದ ದೂರಿನಲ್ಲಿ ಏನಿದೆ ಎಂಬುದನ್ನು ನೋಡೋಣ
ಫೆಬ್ರವರಿ 2ರಂದು ನಾನು ಮತ್ತು ನನ್ನ ಪುತ್ರಿ ಯಡಿಯೂರಪ್ಪ ಮನೆಗೆ ಹೋಗಿದ್ದೆವು. ಈ ಹಿಂದಿನ ಅತ್ಯಾಚಾರ ಪ್ರಕರಣದಲ್ಲಿ ನನ್ನ ಮಗಳಿಗೆ ನ್ಯಾಯ ಸಿಕ್ಕಿಲ್ಲ.. ನಮ್ಮ ಪ್ರಕರಣವನ್ನು ಎಸ್ಐಟಿಗೆ ವಹಿಸುವಂತೆ ಮಾಡಿ, ನ್ಯಾಯ ಕೊಡಿಸಿ ಎಂದು ಕೇಳಿಕೊಂಡೆವು. ಸುಮಾರು 9 ನಿಮಿಷ ನಮ್ಮೊಂದಿಗೆ ಯಡಿಯೂರಪ್ಪ ಮಾತನಾಡಿದರು. ನಮಗೆ ಟೀ ಕುಡಿಸಿದರು. ನನ್ನ ಮಗಳ ಕೈ ಹಿಡಿದುಕೊಂಡು ಯಡಿಯೂರಪ್ಪ ಮಾತನಾಡಿದರು.
ನನ್ನ ಮಗಳು ಅವರನ್ನು ತಾತ ಎಂದು ಕರೆಯುತ್ತಿದ್ದರು. ನಾನು ಯಡಿಯೂರಪ್ಪರನ್ನು ಅಪ್ಪಾಜಿ ಎಂದು ಕರೆಯುತ್ತಿದ್ದೆ. ಸ್ವಲ್ಪ ಹೊತ್ತಿನ ನಂತರ ನನ್ನ ಮಗಳನ್ನು ಅವರು ರೂಮ್ಗೆ ಕರೆದುಕೊಂಡು ಹೋಗಿ ಬಾಗಿಲು ಹಾಕಿಕೊಂಡರು. ಐದು ನಿಮಿಷಗಳ ಕಾಲ ರೂಮ್ನಲ್ಲಿ ಇದ್ದರು. ಈ ಅವಧಿಯಲ್ಲಿ ಯಡಿಯೂರಪ್ಪ, ನನ್ನ ಮಗಳ ಶರ್ಟ್ ಒಳಗೆ ಕೈ ಹಾಕಿ ಬಲಭಾಗದ ಎದೆಗೆ ಕೈ ಹಾಕಿ ಲೈಂಗಿಕ ಕಿರುಕುಳ ನೀಡಿದ್ದಾರೆ.
ನನ್ನ ಮಗಳು ಅವರಿಂದ ತಪ್ಪಿಸಿಕೊಂಡು ಹೊರಗೆ ಓಡಿಬರಲು ಪ್ರಯತ್ನಿಸಿದರೂ ಯಡಿಯೂರಪ್ಪ ಬಿಟ್ಟಿಲ್ಲ. ನಂತರ ಯಡಿಯೂರಪ್ಪ ಅವರೇ ಏನು ಆಗಿಯೇ ಇಲ್ಲ ಎನ್ನುವಂತೆ ಬಾಗಿಲು ಓಪನ್ ಮಾಡಿದರು.ನನ್ನ ಮಗಳು ರೂಂನಿಂದ ಆಚೆ ಓಡಿಬಂದು ಅಲ್ಲಿ ನಡೆದ ಎಲ್ಲಾ ವಿಚಾರವನ್ನು ನನಗೆ ತಿಳಿಸಿದರು.
ಆಗ ಯಡಿಯೂರಪ್ಪರನ್ನು ಏಕೆ ಹೀಗೆ ಮಾಡಿದಿರಿ ಎಂದು ಪ್ರಶ್ನಿಸಿದೆ. ಅದಕ್ಕೆ, ಯಡಿಯೂರಪ್ಪ ಅವರು, ರೇಪ್ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಹಾಗೆ ಮಾಡಿದೆ ಎಂದರು. ಕೊನೆಗೆ ನಮ್ಮ ಕ್ಷಮೆಯಾಚನೆ ಮಾಡಿದರು. ನಮಗೆ ಆಗಿರುವ ಮೋಸದ ಬಗ್ಗೆ ನ್ಯಾಯ ಸಿಗುವಂತೆ ಮಾಡುತ್ತೇನೆ ಎಂದು ಹೇಳಿದರು. ಇದಕ್ಕೆ ನಾನು ಒಪ್ಪಲಿಲ್ಲ. ಯಡಿಯೂರಪ್ಪ ಕೃತ್ಯವನ್ನು ಬಹಿರಂಗಪಡಿಸುತ್ತೇನೆ ಎಂದಾಗ ತಡೆಯಲು ಬಹಳ ಪ್ರಯತ್ನ ಮಾಡಿದ್ದಾರೆ. ನನ್ನ ಮಗಳಿಗೆ ಆದ ಅನ್ಯಾಯದ ಬಗ್ಗೆ ನ್ಯಾಯ ಕೇಳಲು ಹೋದಾಗ್ ನನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಯಡಿಯೂರಪ್ಪ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.
– ಸಂತ್ರಸ್ತೆಯ ತಾಯಿ
ಮತ್ತೊಂದ್ಕಡೆ, ಲೋಕಸಭೆ ಚುನಾವಣೆ ಸನಿಹದಲ್ಲಿ ಯಡಿಯೂರಪ್ಪ ಮತ್ತು ಬಿಜೆಪಿಗೆ ಮುಜುಗರ ಉಂಟು ಮಾಡಲು ನಡೆಸಿರಬಹುದಾದ ರಾಜಕೀಯ ಷಡ್ಯಂತ್ರ್ಯ ಇದಾಗಿರಬಹುದು ಎಂಬ ಚರ್ಚೆಗಳು ಆಗಲೇ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ.