Tuesday, June 24, 2025
26.6 C
Bengaluru
Google search engine
LIVE
ಮನೆಕ್ರೈಂ ಸ್ಟೋರಿರೇಣುಕಸ್ವಾಮಿ ಕೊಲೆಗೆ ಸಂಚು ರೂಪಿಸಿದ್ದೇ ಪವಿತ್ರಾಗೌಡ – ಹೊಸ ರಿಮ್ಯಾಂಡ್‌ ಕಾಪಿಯಲ್ಲಿ ಏನಿದೆ?

ರೇಣುಕಸ್ವಾಮಿ ಕೊಲೆಗೆ ಸಂಚು ರೂಪಿಸಿದ್ದೇ ಪವಿತ್ರಾಗೌಡ – ಹೊಸ ರಿಮ್ಯಾಂಡ್‌ ಕಾಪಿಯಲ್ಲಿ ಏನಿದೆ?

ಬೆಂಗಳೂರು: ದರ್ಶನ್ ಮತ್ತು ಗ್ಯಾಂಗ್‌ನಿಂದ ರೇಣುಕಸ್ವಾಮಿ ಹತ್ಯೆ ಪ್ರಕರಣದ ಕಿಂಗ್ ಪಿನ್ ಪವಿತ್ರಾಗೌಡ ಅನ್ನೋದು ಪೊಲೀಸರ ತನಿಖೆಯಲ್ಲಿ ಬಟಾಬಯಲಾಗಿದೆ.

ಎ1 ಆರೋಪಿಯಾಗಿರುವ ಪವಿತ್ರಾಗೌಡಗೆ ಸದ್ಯ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಪರಪ್ಪನ ಅಗ್ರಹಾರದ ಜೈಲಿಗೆ ಶಿಫ್ಟ್‌ ಮಾಡಲಾಗಿದೆ. ಪವಿತ್ರಾಗೌಡಗೆ ಸೇರಿ ಉಳಿದ ಆರೋಪಿಗಳು ಜುಲೈ 10ರ ವರೆಗೆ ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯಲಿದ್ದಾರೆ. ಈ ಬೆನ್ನಲ್ಲೇ ಪವಿತ್ರಾಗೌಡ ಅವರೇ ಕೃತ್ಯಕ್ಕೆ ಪ್ರಮುಖ ಕಾರಣ ಎಂಬುದನ್ನು ಪೊಲೀಸರು ಹೊಸ ರಿಮ್ಯಾಂಡ್‌ ಕಾಪಿಯಲ್ಲಿ ಉಲ್ಲೇಖಿಸಿದ್ದಾರೆ.
ಪೊಲೀಸರ ರಿಮ್ಯಾಂಡ್‌ ಕಾಪಿಯಲ್ಲಿ ಏನಿದೆ?
ಪ್ರಕರಣದ ಎ1, ಎ3 ರಿಂದ ಎ7, ಎ11, ಎ12, ಎ13, ಹಾಗೂ ಎ16 ಆರೋಪಿಗಳು ಕೊಲೆಯಂತ ಒಂದು ಗಂಭೀರ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿ ಕೃತ್ಯ ಎಸಗಿದ್ದು, ಇವರಿಗೆ ಕಾನೂನಿನ ಮೇಲೆ ಕಿಂಚಿತ್‌ ಗೌರವ ಇಲ್ಲದೇ ಇರೋದು ಸಾಕ್ಷ್ಯಾಧಾರಗಳಿಂದ ದೃಢಪಟ್ಟಿದೆ.
ಎ1 ಆರೋಪಿಯೇ ಕೃತ್ಯಕ್ಕೆ ಪ್ರಮುಖ ಕಾರಣ ಕರ್ತೆಯಾಗಿದ್ದು ಈಕೆಯು ಪ್ರಚೋದನೆ ನೀಡಿ ಇತರೆ ಆರೋಪಿಗಳೊಂದಿಗೆ ಸೇರಿ ಕೊಲೆಗೆ ಒಳಸಂಚು ರೂಪಿಸಿರುವುದು ಮತ್ತು ಕೃತ್ಯದಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ದೃಢಪಟ್ಟಿರುತ್ತದೆ. ಎ2 ಆರೋಪಿಯು ತನ್ನ ಹಣ ಹಾಗೂ ಇತರೆ ಆರೋಪಿಗಳನ್ನು ಒಳಗೊಂಡ ತನ್ನ ಅಭಿಮಾನಿ ಬಳಗವನ್ನು ಬಳಸಿಕೊಂಡು ಕೃತ್ಯದಲ್ಲಿ ಭಾಗಿಯಾಗಿ ಹಾಗೂ ಭಾಗಿಯಾಗಿಸಿ ನೆಲದ ಕಾನೂನನ್ನು ದುರುಪಯೊಗ ಪಡಿಸಿಕೊಂಡಿರುವುದು ಸಾಕ್ಷ್ಯಾಧಾರಗಳಿಂದ ಕಂಡು ಬಂದಿರುತ್ತದೆ.
ಎ2 ಆರೋಪಿಯು ತನ್ನ ಹಣಬಲ ಮತ್ತು ಪ್ರಭಾವಿ ಅಭಿಮಾನಿ ಬಳಗವನ್ನು ಬಳಿಸಿಕೊಂಡು ಅಮಾಯಕ ಮೃತ ರೇಣುಕಾಸ್ವಾಮಿಯನ್ನು ಚಿತ್ರದುರ್ಗದ ಎ4 ಮತ್ತು ಎ6 ರಿಂದ ಎ8 ರ ವರೆಗಿನ ಆರೋಪಿಗಳಿಂದ ಆತನನ್ನು ಅಪಹರಣ ಮಾಡಿಸಿದ್ದಾರೆ. ಮೃತನ ಬಳಿಯಿಂದ ಚಿನ್ನಾಭರಣಗಳನ್ನು ಬಿಚ್ಚಿಸಿಕೊಂಡು ಪಟ್ಟಣಗೆರೆಯ ಎ10 ಆರೋಪಿ ವಿನಯ್ ಸಂಬಂಧಿಯಾದ ಜಯಣ್ಣ ಅವರಿಗೆ ಸೇರಿದ್ದ ಶೆಡ್‌ಗೆ ಕರೆತಂದು ಅಲ್ಲಿ ಎ1 ಆರೋಪಿಯು ಸೇರಿದಂತೆ ಇತರೆ ಆರೋಪಿಗಳೊಂದಿಗೆ ಸಮಾನ ಉದ್ದೇಶದಿಂದ ಎಲ್ಲರೂ ಸೇರಿ ಮೃತನ ಮೇಲೆ ಅಮಾನುಷವಾಗಿ ಮತ್ತು ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಇದೆಲ್ಲವೂ ಇದೆಲ್ಲವೂ ಈವರೆಗಿನ ತನಿಖೆಯಲ್ಲಿ ಸಂಗ್ರಹಿಸಿರುವ ಭೌತಿಕ, ತಾಂತ್ರಿಕ ಹಾಗೂ ವೈಜ್ಞಾನಿಕವಾಗಿ ಸಂಗ್ರಹಿಸಿರುವ ಸಾಕ್ಷ್ಯಾಧಾರಗಳಿಂದ ದೃಢಪಟ್ಟಿರುತ್ತದೆ.
ಆರೋಪಿಗಳು ಕೃತ್ಯದ ನಂತರ ಮತ್ತೆ ಒಳಸಂಚು ರೂಪಿಸಿ ಸಾಕ್ಷ್ಯ ನಾಶ ಪಡಿಸುವ ಉದ್ದೇಶದಿಂದ ಶವವನ್ನು ಸಾಗಿಸಲು ತಮ್ಮ ಹಣದ ಪ್ರಭಾವ ಬಳಸಿ ಕ್ರಿಮಿನಲ್ ಹಿನ್ನೆಲೆಯುಳ್ಳವರಿಗೆ ಹಣದ ಆಮಿಷ ತೋರಿಸಿ ಅವರ ಮೂಲಕ ಶವವನ್ನು ಕೃತ್ಯ ನಡೆದ ಸ್ಥಳದಿಂದ ಬೇರೆ ಕಡೆ ಸಾಗಿಸಿ ಸಾಕ್ಷಿ ನಾಶ ಪಡಿಸಿರುವುದು ತನಿಖೆಯಿಂದ ಕಂಡು ಬಂದಿರುತ್ತದೆ.
ಪ್ರಕರಣದ ಎ2, ಎ4, ಎ15, ಎ16 ಆರೋಪಿಗಳು ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿರುತ್ತಾರೆ. ಮುಂದುವರಿದು ಆರೋಪಿಗಳು ಮೃತನನ್ನು ಕೊಲೆ ಮಾಡಿ, ನಂತರ ತನ್ನ ಹಣದ ಪ್ರಭಾವದಿಂದ ಬೇರೆ ವ್ಯಕ್ತಿಗಳನ್ನು ಕೊಲೆಯಲ್ಲಿ ಭಾಗಿಯಾರುವುದಾಗಿ ಬಿಂಬಿಸಿ ಪ್ರಕರಣದಿಂದ ತಾವುಗಳು ನುಣುಚಿಕೊಳ್ಳಲು ಪ್ರಯತ್ನಿಸಿರುವುದು ತನಿಖೆಯಲ್ಲಿ ಕಂಡು ಬಂದಿರುತ್ತದೆ ಎಂದು ಎಂದು ಪೊಲೀಸರು ರಿಮ್ಯಾಂಡ್‌ ಕಾಪಿಯಲ್ಲಿ ಉಲ್ಲೇಖಿಸಿದ್ದಾರೆ.

ಪ್ರಕರಣದ ತನಿಖಾ ಕಾಲದಲ್ಲಿ ಅಮಾನತು ಪಡಿಸಿಕೊಂಡು ಪರಿಶೀಲಿಸಲಾದ ತಾಂತ್ರಿಕ ಸಾಕ್ಷ್ಯಾಧಾರಗಳಲ್ಲಿ ಆರೋಪಿಗಳು ನೇರವಾಗಿ ಭಾಗಿಯಾಗಿರುವುದು ಕಂಡು ಬಂದಿದ್ದು ಇನ್ನೂ ಹಲವಾರು ತಾಂತ್ರಿಕ ಮತ್ತು ವೈಜ್ಞಾನಿಕ ಸಾಕ್ಷ್ಯಾಧಾರಗಳನ್ನು ಪರಿಶೀಲನೆಗೆ ಕಳುಹಿಸಿದ್ದು ವರದಿ ಸಂಗ್ರಹಿಸಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಬೇಕಾಗಿರುತ್ತದೆ.

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments