ಮೈಸೂರು: ಯಾವುದೇ ಕಾರಣಕ್ಕೂ ಜೆಡಿಎಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ. ಬಿಜೆಪಿ ಜೊತೆ ಸೇರಿ ಅಧಿಕಾರ ಹಿಡಿಯಬಹುದು ಎಂಬುದು ಅವರ ಭ್ರಮೆ ಮಾತ್ರ,” ಎಂದು ಮೈಸೂರಿನಲ್ಲಿ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಬಿಜೆಪಿಯವರಿಗೆ ಬಹುಮತ ಬಂದರೆ ಅವರು ಜೆಡಿಎಸ್ಗೆ ಯಾಕೆ ಅಧಿಕಾರ ಬಿಟ್ಟುಕೊಡುತ್ತಾರೆ? ಜೆಡಿಎಸ್ ಮತ್ತು ಬಿಜೆಪಿ ಇಬ್ಬರಿಗೂ ಬಹುಮತ ಬರುವುದಿಲ್ಲ. ಒಂದು ವೇಳೆ ಮೈತ್ರಿಗೆ ಅಧಿಕಾರ ಸಿಕ್ಕರೂ ಜೆಡಿಎಸ್ ನಾಯಕರಿಗೆ ಮುಖ್ಯಮಂತ್ರಿ ಪಟ್ಟ ಸಿಗುವುದು ಅಸಾಧ್ಯ. 2028ರ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಲಿದೆ. ನಾಯಕತ್ವದ ಬಗ್ಗೆ ಹೈಕಮಾಂಡ್ ತೀರ್ಮಾನಿಸಲಿದೆ ಎಂದರು.
ಹೆಚ್.ಡಿ. ರೇವಣ್ಣ ಅವರ ಬಂಧನದ ಕುರಿತಾದ ಆರೋಪದ ಕುರಿತು ಮಾತನಾಡಿದ ಅವರು, ನಾವು ಯಾರ ಪ್ರಕರಣದಲ್ಲೂ ಹಸ್ತಕ್ಷೇಪ ಮಾಡುವುದಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಅವರ ಮೇಲೆ ದ್ವೇಷ ಸಾಧಿಸುವ ಅಗತ್ಯ ನಮಗಿಲ್ಲ, ಎಂದು ಸ್ಪಷ್ಟಪಡಿಸಿದರು.
ಆಡಳಿತಾತ್ಮಕ ವಿಚಾರಗಳ ಬಗ್ಗೆ ಮಾತನಾಡಿದ ಸಿಎಂ, ಫೆಬ್ರವರಿ 2 ರಿಂದ ಬಜೆಟ್ ಪೂರ್ವಭಾವಿ ಅಧಿಕೃತ ಸಭೆಗಳನ್ನು ಆರಂಭಿಸುವುದಾಗಿ ತಿಳಿಸಿದರು. ಇನ್ನು ಗಣರಾಜ್ಯೋತ್ಸವದ ರಾಜ್ಯಪಾಲರ ಭಾಷಣದ ಕುರಿತು ಪ್ರತಿಕ್ರಿಯಿಸಿ ಅವರು, ನಾಳೆ ಗಣರಾಜ್ಯೋತ್ಸವದಲ್ಲಿ ರಾಜ್ಯಪಾಲರು ನಾವು ಬರೆದುಕೊಟ್ಟ ಭಾಷಣವನ್ನೇ ಓದಬೇಕು ಎಂಬ ನಿಯಮವಿಲ್ಲ. ಅದರಲ್ಲಿ ಅವರು ಬದಲಾವಣೆ ಮಾಡಿಕೊಳ್ಳಬಹುದು.
ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡುವಾಗ ಮಾತ್ರ ಸರ್ಕಾರ ನೀಡಿದ ಪ್ರತಿಯನ್ನೇ ಓದಬೇಕಾಗುತ್ತದೆ. ರಾಜ್ಯಪಾಲರು ರಾಷ್ಟ್ರಪತಿಗಳಿಗೆ ಯಾವ ವಿವರಣೆ ನೀಡಿದ್ದಾರೋ ನೀಡಲಿ, ಅದಕ್ಕೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ, ಎಂದರು.


