ಚನ್ನಪಟ್ಟಣ: ಉಪ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಇತ್ತ ಮತ್ತೆ ಬಿಜೆಪಿಗೆ ಆಘಾತ ಎದುರಾಗಿದ್ದು, ಬಿಜೆಪಿ ಪಕ್ಷದಿಂದ ಗೆದ್ದಿದ್ದ 6 ಕೌನ್ಸಿಲರ್ ಗಳು ಇದೀಗ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸಿಪಿ ಯೋಗೇಶ್ವರ್ ಅವರನ್ನೇ ಪಕ್ಷಕ್ಕೆ ಸೆಳೆದು ಅಭ್ಯರ್ಥಿಯನ್ನಾಗಿ ಮಾಡಿರುವ ಕಾಂಗ್ರೆಸ್ ಇದೀಗ ಮತ್ತೊಂದು ಆಪರೇಷನ್ ಮಾಡುವ ಮೂಲಕ ಬಿಜೆಪಿಗೆ ಶಾಕ್ ಕೊಟ್ಟಿದೆ.
ಚನ್ನಪಟ್ಟಣ ಉಪಚುನಾವಣೆ ಕಣದಲ್ಲಿ ಬಿಜೆಪಿಗೆ ಮತ್ತೊಂದು ಆಘಾತ ಕೊಟ್ಟಿರುವ ಕಾಂಗ್ರೆಸ್, BJPಯಿಂದ ಗೆದ್ದಿದ್ದ 7 ನಗರಸಭಾ ಸದಸ್ಯರಲ್ಲಿ 6 ಮಂದಿಯನ್ನು ತೆಕ್ಕೆಗೆ ಸೆಳೆದುಕೊಂಡಿದೆ. ಇದರಿಂದ ಬಿಜೆಪಿಗೆ ಹಿನ್ನಡೆಯಾಗಿದೆ.ನಗರಸಭಾ ಸದಸ್ಯ ಚಂದ್ರು, ಮಂಗಳಮ್ಮ, ಮನೋಹರ್, ಕಮಲ, ಜಯಮಾಲ, ಕಸ್ತೂರಿ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಇವರೆಲ್ಲ 2021-22 ರಲ್ಲಿ ನಗರಸಭಾ ಸದಸ್ಯರಾಗಿ ಆಯ್ಕೆ ಆಗಿದ್ದರು.
ಒಟ್ಟು 31 ನಗರಸಭಾ ಸದಸ್ಯರ ಪೈಕಿ 07 ಜನ ಬಿಜೆಪಿಯಿಂದ ಗೆದ್ದಿದ್ದರು. 16 ಮಂದಿ ಜೆಡಿಎಸ್ನಿಂದ ಗೆದ್ದಿದ್ದರು.ಇನ್ನು ಪಕ್ಷ ಸೇರ್ಪಡೆ ಸಂದರ್ಭದಲ್ಲಿ ಬಿಎಂಐಸಿಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ ಉಪಸ್ಥಿತರಿದ್ದರು. ಎರಡು ತಿಂಗಳ ಹಿಂದಷ್ಟೇ 13 ಮಂದಿ ಜೆಡಿಎಸ್ ಸದಸ್ಯರು ಕಾಂಗ್ರೆಸ್ ಸೇರ್ಪಡೆ ಆಗಿದ್ದರು. ಕಾಂಗ್ರೆಸ್ನಿಂದ 7 ಮಂದಿ ನಗರಸಭೆ ಸದಸ್ಯರು ಗೆದ್ದಿದ್ದರು. ಒಬ್ಬರು ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ಅವರೂ ಸಹ ಸೋಮವಾರ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.