ಸ್ನಾತಕ ಪದವಿ ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ನಿಯಂತ್ರಿಸಬೇಕಾದರೆ ಉನ್ನತ ಶಿಕ್ಷಣದಲ್ಲಿ ತೆರೆದ ಪುಸ್ತಕ ಓಪನ್ ಬುಕ್ ಪರೀಕ್ಷೆ ನಡೆಸಬೇಕು. ಜತೆಗೆ ಅಂಕಗಳ ಬದಲಾಗಿ ಗ್ರೇಡ್ ಪದ್ಧತಿ ಜಾರಿಗೆ ತರಬೇಕೆಂದು ತಜ್ಞರ ಸಮಿತಿಯು ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಖಾಸಗಿ ವಿಶ್ವವಿದ್ಯಾಲಯದಲ್ಲಿ ಪದವಿ ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ ನಕಲು ಮಾಡಿದ ಭಯದ ಅಂಜಿಕೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ತನಿಖೆಗಾಗಿ ಉನ್ನತ ಶಿಕ್ಷಣ ಇಲಾಖೆಯು ಜುಲೈನಲ್ಲಿ ರಚಿಸಿದ್ದ ಸಮಿತಿಯು ಈ ಶಿಫಾರಸು ನೀಡಿದೆ.
ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಡಾ.ಎಸ್.ಎಂ ಜಯಕರ ಅಧ್ಯಕ್ಷತೆಯ ಸಮಿತಿಯಲ್ಲಿ ವಿವಿ ಮೌಲ್ಯಮಾಪನ ಕುಲಸಚಿವ ಪ್ರೊ.ಎಂ.ಶ್ರೀನಿವಾಸ್, ನಿಮ್ಹಾನ್ಸ್ನ ಪ್ರೊಫೆಸರ್ ಡಾ. ವೀಣಾ ಸತ್ಯನಾರಾಯಣ ಹಾಗೂ ರಾಜ್ಯ ಉನ್ನತ ಶಿಕ್ಷಣ ಪರಿಷತ್ನ ಸದಸ್ಯ ಕಾರ್ಯದರ್ಶಿ ಸದಸ್ಯರಾಗಿದ್ದರು. ಅದು ಅಧ್ಯಯನ ನಡೆಸಿ ವರದಿಯನ್ನು ಇತ್ತೀಚೆಗಷ್ಟೆ ಸರ್ಕಾರಕ್ಕೆ ಸಲ್ಲಿಸಿದೆ. ಅದರಲ್ಲಿ ವಿದ್ಯಾರ್ಥಿಗಳಲ್ಲಿರುವ ಪರೀಕ್ಷಾ ಭಯ ಹೋಗಲಾಡಿಸಬೇಕಾದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್ಗಳ ಪರೀಕ್ಷೆಯಲ್ಲಿ ತೆರೆದ ಪುಸ್ತಕ ಪರೀಕ್ಷೆ ನಡೆಸಬೇಕೆಂದು ಶಿಫಾರಸು ಮಾಡಿದೆ.
ಶ್ರೇಣಿ ಪದ್ಧತಿ : ಹಾಲಿ ವಿಶ್ವವಿದ್ಯಾಲಯಗಳಲ್ಲಿರುವ ಅಂಕ ಮತ್ತು ಕ್ಯುಮಿಲೇಟಿವ್ ಗ್ರೇಡ್ ಸಂಪೂರ್ಣವಾಗಿ ಶ್ರೇಣಿ ಆಧಾರದಲ್ಲಿ ಅಂಕಗಳನ್ನು ನೀಡಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿ ಅಂಕದ ತಾರತಮ್ಯ ಹೆಚ್ಚಾಗಿ ಕಾಣುವುದಿಲ್ಲ. ಶ್ರೇಣಿ ವ್ಯವಸ್ಥೆಯನ್ನು ಈಗಾಗಲೇ ವಿದೇಶಗಳಲ್ಲಿ ಅಳವಡಿಸಿಕೊಂಡಿದ್ದು, ನಮ್ಮ ರಾಜ್ಯದಲ್ಲೂ ಸಿಜಿಪಿಎ ಜತೆಗೆ ಅಂಕಗಳನ್ನು ಸಹ ನೀಡಲಾಗುತ್ತಿದೆ. ಇದು ತೆಗೆದು ಹಾಕಬೇಕೆಂದು ಶಿಫಾರಸು ಮಾಡಿದೆ.