Top Newsರಾಜಕೀಯಸುದ್ದಿ

ತೀವ್ರ ಅನಾರೋಗ್ಯ, ಥಾಣೆಯ ಆಸ್ಪತ್ರೆಗೆ ದಾಖಲಾದ ಏಕನಾಥ್ ಶಿಂಧೆ..! ಮಹಾರಾಷ್ಟ್ರ ಹಂಗಾಮಿ ಸಿಎಂಗೆ ಏನಾಯ್ತು?

ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆ ವಿಳಂಬವಾಗುತ್ತಿದೆ. ತೀವ್ರ ಜ್ವರದಿಂದ ಬಳಲುತ್ತಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಮನೆಯಿಂದ ಹೊರಗೆ ಬರಲೂ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಶಿಂಧೆ ಅವರ ಸ್ಥಿತಿ ನೋಡಿ ವೈದ್ಯರ ತಂಡ ಅವರ ಗ್ರಾಮಕ್ಕೆ ಆಗಮಿಸಿದೆ. ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ ತೀವ್ರ ಜ್ವರವಿತ್ತು ಹಾಗಾಗಿ ಅವರು ತಮ್ಮ ಹಳ್ಳಿಗೆ ತೆರಳಿದ್ದರು. ಅದಾದ ಬಳಿಕ ಮುಂಬೈಗೆ ಆಗಮಿಸಿದಾಗಿನಿಂದ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು ಈ ಹಿನ್ನೆಲೆಯಲ್ಲಿ ಅವರು ಇಂದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಡೆಂಗ್ಯೂ, ಮಲೇರಿಯಾ ಪರೀಕ್ಷೆ ಮಾಡಲಾಗಿದೆ ಆದರೆ ವರದಿ ನೆಗೆಟಿವ್ ಬಂದಿದೆ. ಏಕನಾಥ್ ಶಿಂಧೆ ಜತೆ ಅವರ ಪುತ್ರ ಶ್ರೀಕಾಂತ್ ಶಿಂಧೆ ಕೂಡ ಇದ್ದಾರೆ. ನಿರಂತರ ಜ್ವರ ಮತ್ತು ಗಂಟಲು ಸೋಂಕಿನಿಂದ ಸಿಎಂ ಕಂಗಾಲಾಗಿದ್ದಾರೆ. ಮೂಲಗಳ ಪ್ರಕಾರ ಏಕನಾಥ್ ಶಿಂಧೆ ಅವರ ರಕ್ತದಲ್ಲಿ ಪ್ಲೇಟ್​ಲೆಟ್​ಗಳು ಕಡಿಮೆಯಾಗಿವೆ. ಗಂಟಲಿನ ಸೋಂಕು ಹಾಗೂ ನಿರಂತರವಾಗಿ ಆ್ಯಂಟಿಬಯೋಟಿಕ್ ಸೇವನೆಯಿಂದಾಗಿ ದೇಹ ಮತ್ತಷ್ಟು ದುರ್ಬಲವಾಗಿದೆ.

ಇತ್ತೀಚೆಗಷ್ಟೇ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಮಹಾಮೈತ್ರಿಕೂಟದ ಸಭೆಗೆ ದೆಹಲಿಗೆ ತೆರಳಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗಿನ ಈ ಸಭೆಯಲ್ಲಿ ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್ ಉಪಸ್ಥಿತರಿದ್ದರು. ಈ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಉಪಸ್ಥಿತರಿದ್ದರು.

ಈ ಸಭೆಯ ನಂತರ ಏಕನಾಥ್ ಶಿಂಧೆ ಮುಂಬೈಗೆ ಹಿಂದಿರುಗಿರಲಿಲ್ಲ, ನೇರವಾಗಿ ಸತಾರಾದಲ್ಲಿರುವ ತಮ್ಮ ಗ್ರಾಮಕ್ಕೆ ತೆರಳಿದರು. ಇದರಿಂದ ಏಕನಾಥ್ ಶಿಂಧೆ ಸಿಟ್ಟಿಗೆದ್ದಿದ್ದಾರೆ ಎಂಬ ಚರ್ಚೆ ಶುರುವಾಗಿತ್ತು. ಡಿಸೆಂಬರ್ 5 ರಂದು ಮಹಾರಾಷ್ಟ್ರದಲ್ಲಿ ನೂತನ ಮಹಾಯುತಿ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಮುಂಬೈನ ಆಜಾದ್ ಮೈದಾನದಲ್ಲಿ ಸಿದ್ಧತೆಗಳು ಭರದಿಂದ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಮುಂಚೂಣಿಯಲ್ಲಿ ಪರಿಗಣಿಸಲಾಗಿದೆ. ಆದರೆ ಡಿಸೆಂಬರ್ 4 ರಂದು ನಡೆಯಲಿರುವ ರಾಜ್ಯ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ಬಳಿಕವಷ್ಟೇ ಮುಖ್ಯಮಂತ್ರಿ ಹೆಸರು ಹೊರಬೀಳಲಿದೆ.

Comments (0)

Your email address will not be published. Required fields are marked *

Back to top button