ಕಳೆದ ವರ್ಷವೆಲ್ಲಾ ಹಿಂಸಾಚಾರದಿಂದ ತತ್ತರಿಸಿತ್ತು ಮಣಿಪುರ.. 219 ಮಂದಿ ಘರ್ಷಣೆಯಲ್ಲಿ ಬಲಿಯಾಗಿದ್ದರು. ಈಗಲೂ ಕೂಡ ಸಾವಿರಾರು ಮಂದಿ ಸಂತ್ರಸ್ತರು ಪುನರ್ವಸತಿ ಶಿಬಿರಗಳಲ್ಲಿ ನೆಲೆಸಿದ್ದಾರೆ. ಈ ಬಗ್ಗೆ ದೇಶಾದ್ಯಂತ ಕಳವಳ ವ್ಯಕ್ತವಾಗ್ತಿದೆ. ಸದ್ಯ ಹಿಂಸಾಚಾರದ ಸದ್ದಡಗಿದ್ದರೂ ಯಾವಾಗ ಏನು ನಡೆಯುತ್ತೋ ಎಂಬ ಭಯದಲ್ಲಿಯೇ ಜನ ವಾಸ ಮಾಡುವ ಪರಿಸ್ಥಿತಿ ಇದೆ.
ಇಂಥಾ ಹೊತ್ತಲ್ಲಿಯೇ ಲೋಕಸಭೆ ಚುನಾವಣೆ ಎದುರಾಗಿದೆ. ಇಲ್ಲಿ ಎರಡು ಕ್ಷೇತ್ರಗಳಿವೆ. ಇದೇ ತಿಂಗಳ 19ರಂದು ಒಂದು ಕ್ಷೇತ್ರದಲ್ಲಿ ಸಂಪೂರ್ಣವಾಗಿ, ಇನ್ನೊಂದು ಕ್ಷೇತ್ರದ ಅರ್ಧಭಾಗಕ್ಕೆ ಮತದಾನ ನಡೆಯಲಿದೆ. ಉಳಿದ ಭಾಗದಲ್ಲಿ ಏಪ್ರಿಲ್ 26ರಂದು ಮತದಾನ ನಡೆಯಲಿದೆ. ಅಂದರೆ, ಮತದಾನಕ್ಕೆ ಉಳಿದಿರೋದು ಕೇವಲ 2 ವಾರ ಮಾತ್ರ.
ಆದರೆ, ಚುನಾವಣೆ ಭರಾಟೆ ಅಲ್ಲಿ ಕಂಡುಬರುತ್ತಿಲ್ಲ. ಎಲ್ಲಿಯೂ ರ್ಯಾಲಿ, ರೋಡ್ಶೋಗಳು ನಡೆಯುತ್ತಿಲ್ಲ. ಅಷ್ಟೇ ಏಕೆ, ಕನಿಷ್ಠ ಪೋಸ್ಟರ್ಗಳು ಕೂಡ ಕಂಡುಬರುತ್ತಿಲ್ಲ. ಚುನಾವಣೆಯಲ್ಲಿ ತಪ್ಪದೇ ವೋಟ್ ಮಾಡಿ ಎಂಬ ಚುನಾವಣಾ ಆಯೋಗದ ಹೋರ್ಡಿಂಗ್ಸ್ ಮಾತ್ರ ಅಲ್ಲಲ್ಲಿ ಕಾಣುತ್ತಿವೆ.
ಮಣಿಪುರದಲ್ಲಿ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಸ್ಪರ್ಧೆ ಮಾಡಿದ್ದರೂ ರಾಷ್ಟ್ರೀಯ ನಾಯಕರ್ಯಾರು ಆ ಕಡೆಗೆ ಕಣ್ಣೆತ್ತಿಯೂ ನೋಡುತ್ತಿಲ್ಲ. ಮಣಿಪುರದ ಸ್ಟಾರ್ ಪ್ರಚಾರಕರೆಂದು ಮೋದಿ, ಅಮಿತ್ ಶಾ, ರಾಹುಲ್ ಗಾಂಧಿ,ಸೋನಿಯಾ ಗಾಂಧಿ ಹೆಸರುಗಳು ಆಯಾ ಪಕ್ಷಗಳು ಪ್ರಕಟಿಸಿದ್ದರೂ, ಈವರೆಗೂ ಯಾರು ಕೂಡ ಮಣಿಪುರಕ್ಕೆ ಭೇಟಿ ನೀಡಿಲ್ಲ.
ಚುನಾವಣೆ ಪ್ರಚಾರ ಸಂಬಂಧ ಮಣಿಪುರದಲ್ಲಿ ಯಾವುದೇ ನಿರ್ಬಂಧಗಳನ್ನು ವಿಧಿಸಿಲ್ಲ ಆದರೆ, ಸೂಕ್ಷ್ಮ ಪ್ರದೇಶವಾದ ಕಾರಣ ಮಣಿಪುರದಿಂದ ರಾಷ್ಟ್ರೀಯ ನಾಯಕರು ದೂರ ಉಳಿದಿದ್ದಾರೆ.
ಮತ್ತೆ ಘರ್ಷಣೆ ಭುಗಿಳೇಲುವ ಆತಂಕದಲ್ಲಿ ಭಾರೀ ರ್ಯಾಲಿಗಳಿಗೆ ಮುಂದಾಗುತ್ತಿಲ್ಲ. ಹೀಗಾಗಿ ಅಭ್ಯರ್ಥಿಗಳು ಸಭೆ ಸಮಾವೇಶಗಳ ಬದಲಾಗಿ ಮನೆ ಮನೆ ಪ್ರಚಾರಕ್ಕೆ ಹೆಚ್ಚು ಆದ್ಯತೆ ನೀಡಿದ್ದಾರೆ. ಇನ್ನು ಪುನರ್ವಸತಿ ಶಿಬಿರಗಳಲ್ಲೇ ಆಯೋಗ ಮತದಾನಕ್ಕೆ ವ್ಯವಸ್ಥೆ ಮಾಡಿದೆ.