ಬೆಂಗಳೂರು: ನಮ್ಮ ಮೆಟ್ರೋ ಟಿಕೆರ್ ದರ ಏರಿಕ ಆದ ಬೆನ್ನಲ್ಲೇ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿತ್ತು. ರಾಜಕೀಯವಾಗಿ ಬಿಜೆಪಿ – ಕಾಂಗ್ರೆಸ್ ಆರೋಪ ಪ್ರತ್ಯಾರೋಪ ನಡೆಸಿದರು. ಈ ಹಿನ್ನಲೇ ಸಿಎಂ ಸಿದ್ದರಾಮಯ್ಯ ಮೆಟ್ರೋ ಪ್ರಯಾಣ ದರ ಇಳಿಕೆ ಮಾಡುವಂತೆ ಬಿಎಂಆರ್ ಸಿಎಲ್ ಗೆ ಸೂಚನೆ ನೀಡಿದ್ದರು. ಸಿಎಂ ಸೂಚನೆ ಬೆನ್ನಲ್ಲೇ ಬಿಎಂಆರ್ ಸಿಎಲ್ ಎಂ.ಡಿ ಮಹೇಶ್ವರ್ ರಾವ್ ಸುದ್ದಿಗೋಷ್ಟಿ ನಡೆಸಿ ಸ್ಟೇಜ್ ಅನುಗುಣವಾಗಿ ದರ ಇಳಿಕೆ ಮಾಡುವುದಾಗಿ ತಿಳಿಸಿದ್ದರು. ಇದೀಗ ಬಿಎಂಆರ್ ಸಿಎಲ್ 10 ರೂಪಾಯಿ ಅಷ್ಟೇ ಕಡಿಮೆ ಮಾಡಿದ್ದು, ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲದೇ ಸಾರ್ವಜನಿಕರು ಬಿಎಂಆರ್ ಸಿಎಲ್ ಮುಂದೆ ಹೊಸ ಬೇಡಿಕೆಗಳನ್ನು ಇಟ್ಟಿದ್ದಾರೆ.
ಈಗಾಗಲೇ ಟಿಕೆಟ್ ಬೆಲೆ ದುಪ್ಪಟ್ಟು ಏರಿಕೆ ಮಾಡಿದ್ದೀರಿ. ಬೆಲೆ ಏರಿಕೆ ಮಾಡಿದ ರೀತಿಯಲ್ಲಿ ಬಿಎಂಆರ್ಸಿಎಲ್ ಸೌಲಭ್ಯ ನೀಡಬೇಕು. ಮುಂಬೈ, ಹೈದರಾಬಾದ್, ಚೆನ್ನೈ ಮಾದರಿಯನ್ನು ನಮ್ಮ ಮೆಟ್ರೋ ಅನುಸರಿಸಿಕೊಳ್ಳಬೇಕು. ‘ನಮ್ಮ ಮೆಟ್ರೋ’ದಲ್ಲಿ ಪ್ರಯಾಣ ದರ ಮಾತ್ರ ಹೆಚ್ಚಾಗಿದೆ , ಬೇರೆ ಸೌಲಭ್ಯಗಳು ಮಾತ್ರ ಶೂನ್ಯವಾಗಿದೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.
ಪ್ರಯಾಣಿಕರ ಬೇಡಿಕೆಗಳೇನು?
ಹೈದರಾಬಾದ್ ಮೆಟ್ರೋದಲ್ಲಿ ಸಂಚರಿಸಿದರೆ ವಿವಿಧ ಗಿಫ್ಟ್ ಗಳು ಸಿಗಲಿವೆ ಅಂತೆ ನಮ್ಮ ಮೆಟ್ರೋ ಅಳವಡಿಸಿಕೊಳ್ಳಬೇಕು.
ಬೆನ್ನೈ ಮೆಟ್ರೋದಲ್ಲಿ ಮಹಿಳೆಯರಿಗೆ ಪುರುಷರಿಗೆ ಪ್ರತ್ಯೇಕ ಸೈಕಲ್ ವ್ಯವಸ್ಥೆ ಇದೆ. ಅದರಂತೆ ನಮ್ಮ ಮೆಟ್ರೋ ಸಹ ಸೌಲಭ್ಯ ಒದಗಿಸಬೇಕು.
ಮುಂಬೈ ಮೆಟ್ರೋದಲ್ಲಿ ಒಂದು ಕಾರ್ಡ್ ತೆಗೆದುಕೊಂಡರೆ ಶೇಕಡಾ 25ರಷ್ಟು ರಿಯಾಯಿತಿ ದೊರೆಯಲಿದೆ.
ನಾಗಪುರದ ಪ್ರತಿ ಮೆಟ್ರೋ ನಿಲ್ದಾಣದಲ್ಲಿ ಬೇಬಿ ಕೇರ್ ಸೆಂಟರ್ ಮಾಡಲಾಗಿದೆ.
ಮೆಟ್ರೋ ದರ ಅಷ್ಟೇ ಏರಿಕೆ ಮಾಡುವುದಲ್ಲ ಅದಕ್ಕೆ ತಕ್ಕಂತೆ ಸೌಲಭ್ಯಗಳನ್ನು ಒದಗಿಸುವಂತೆ ಬಿಎಂಆರ್ ಸಿಎಲ್ ಮುಂದೆ ಪ್ರಯಾಣಿಕರು ಬೇಡಿಕೆಗಳನ್ನು ಇಟ್ಟಿದ್ದಾರೆ.