ಮೈಸೂರು ಸ್ಯಾಂಡಲ್ ಸೋಪ್ಗೆ ಬಹುಭಾಷಾ ನಟಿ, ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಕರ್ನಾಟಕ ಸರ್ಕಾರದ ಸಚಿವಾಲಯ ಅಧಿಕೃತಗೊಳಿಸಿದೆ. ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ ಲಿಮಿಟೆಡ್ನ ಅಧಿಕೃತ ಬ್ರಾಂಡ್ ಅಂಬಾಸಿಡರ್ ಆಗಿ ತಮನ್ನಾರನ್ನ, ಇಂದಿನಿಂದ 2 ವರ್ಷ 2 ದಿನಗಳ ಅವಧಿಗೆ, ಬರೋಬ್ಬರಿ 6.20 ಕೋಟಿ ನೀಡಿ ನೇಮಕ ಮಾಡಿಕೊಳ್ಳಲಾಗಿದೆ.
ಕರ್ನಾಟಕದ ಹೆಮ್ಮೆ ಮೈಸೂರ್ ಸ್ಯಾಂಡಲ್ ಸೋಪ್ಗೆ ತಮನ್ನಾ ರಾಯಭಾರಿ ಮಾಡಿರುವುದಕ್ಕೆ, ರಾಜ್ಯಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ. ದೊಡ್ಡ ಮತ್ತು ಮಧ್ಯಮ ಕೈಗಾರಿಗಳ ಸಚಿವ ಎಂ.ಬಿ. ಪಾಟೀಲರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲೂ ಟೀಕೆ ವ್ಯಕ್ತವಾಗಿವೆ. ಕನ್ನಡದಲ್ಲಿ ಯಾವ ನಟಿಯೂ ಸಿಗಲಿಲ್ವಾ? ಕನ್ನಡ ನಟಿ ಬದಲಿಗೆ ಪರಭಾಷಾ ನಟಿಯನ್ನೇಕೆ ರಾಯಭಾರಿಯನ್ನಾಗಿ ಮಾಡಿದ್ದೀರಿ ಅಂತಾ ಪ್ರಶ್ನಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಎಂ.ಬಿ. ಪಾಟೀಲ್, ಕರ್ನಾಟಕದ ಹೊರಗಿನ ಮಾರುಕಟ್ಟೆಗಳಲ್ಲಿ ಸ್ಪರ್ಧೆ ನೀಡುವ ಉದ್ದೇಶದಿಂದ ಈ ಆಯ್ಕೆ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, ರಾಯಭಾರಿ ಆಯ್ಕೆಗೆ ಲಭ್ಯತೆ, ಸಾಮಾಜಿಕ ಮಾಧ್ಯಮಗಳಲ್ಲಿನ ಉಪಸ್ಥಿತಿ, ಬ್ರ್ಯಾಂಡ್ನೊಂದಿಗೆ ಹೊಂದಾಣಿಕೆ ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಲಾಗಿದೆ. ರಾಯಭಾರಿಯಾಗಬೇಕು ಎಂದಾದರೆ, ನಟಿಯ ಲಭ್ಯತೆ, ಇತರೆ ಬ್ರ್ಯಾಂಡ್ ಜತೆಗಿನ ಒಪ್ಪಂದ, ಇನ್ಸ್ಟಾಗ್ರಾಂ, ಫೇಸ್ಬುಕ್, ಯುಟ್ಯೂಬ್, ಟ್ವಿಟ್ಟರ್ ಇತ್ಯಾದಿಗಳಲ್ಲಿ ಎಷ್ಟು ಸಕ್ರಿಯರಾಗಿದ್ದಾರೆ? ಅವರ ಅನುಯಾಯಿಗಳ ಸಂಖ್ಯೆ, ಎಂಗೇಜ್ಮೆಂಟ್ ಪ್ರಮಾಣ, ವಿಷಯಗಳು, ವ್ಯಕ್ತಿತ್ವ, ಸಂವಹನ ಶೈಲಿ ಇವು ಎಲ್ಲವನ್ನೂ ಪರಿಗಣಿಸಲಾಗುತ್ತದೆ.
ನಮ್ಮ ಉತ್ಪನ್ನದ ಮೌಲ್ಯಗಳು ಹಾಗೂ ಗುರಿ ಗ್ರಾಹಕರೊಂದಿಗೆ ಹೊಂದಿಕೊಳ್ಳುತ್ತದೆಯಾ? ಬ್ರ್ಯಾಂಡ್ನ ಹೃದಯವಂತಿಕೆಯನ್ನು ಅವರು ಪ್ರತಿಬಿಂಬಿಸಬೇಕಾಗುತ್ತದೆ. ಅವರ ಶ್ರೋತೃವರ್ಗ ನಮ್ಮ ಗುರಿ ಗ್ರಾಹಕರೊಂದಿಗೆ ತಾಳಮೇಳವಿದೆಯಾ? ಅವರ ಪ್ರಭಾವ ಎಷ್ಟು ವ್ಯಾಪಕವಾಗಿದೆ? ಅವರು ನಮ್ಮ ಮಾರಾಟದ ಗುರಿಗೆ ಸಹಾಯ ಮಾಡಬಲ್ಲವರಾ? ಎಂಬ ಹಲವು ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.
ಕನ್ನಡ ಚಲನಚಿತ್ರೋದ್ಯಮದ ಬಗ್ಗೆ ಕೆಎಸ್ಡಿಎಲ್ಗೆ ಆಳವಾದ ಗೌರವವಿದೆ. ಕೆಲವು ಕನ್ನಡ ಚಲನಚಿತ್ರಗಳು ಬಾಲಿವುಡ್ ಚಲನಚಿತ್ರಗಳಿಗೂ ಸ್ಪರ್ಧೆಯನ್ನು ನೀಡುತ್ತಿವೆ. ಮೈಸೂರು ಸ್ಯಾಂಡಲ್ ಕರ್ನಾಟಕದೊಳಗೆ ಉತ್ತಮ ಬ್ರಾಂಡ್ ಮರುಸ್ಥಾಪನೆಯನ್ನು ಹೊಂದಿದೆ. ಇದನ್ನು ಬಲಪಡಿಸಲಾಗುವುದು. ಆದಾಗ್ಯೂ, ಮೈಸೂರು ಸ್ಯಾಂಡಲ್ನ ಉದ್ದೇಶವು ಕರ್ನಾಟಕದಾಚೆಗಿನ ಮಾರುಕಟ್ಟೆಗಳಲ್ಲಿ ಆಕ್ರಮಣಕಾರಿಯಾಗಿ ಸ್ಪರ್ಧೆ ನೀಡುವುದಾಗಿದೆ. ಕರ್ನಾಟಕದ ಹೆಮ್ಮೆಯೂ ರಾಷ್ಟ್ರದ ರತ್ನವಾಗಿದೆ. ಆದ್ದರಿಂದ ಇದು ವಿವಿಧ ಮಾರ್ಕೆಟಿಂಗ್ ತಜ್ಞರೊಂದಿಗೆ ಸಮಾಲೋಚಿಸಿದ ನಂತರ ಪಿಎಸ್ಯು ಮಂಡಳಿಯ ಸ್ವತಂತ್ರ ಕಾರ್ಯತಂತ್ರದ ನಿರ್ಧಾರವಾಗಿದೆ. 2028ರ ವೇಳೆಗೆ ಕೆಎಸ್ಡಿಎಲ್ ವಾರ್ಷಿಕ 5000 ಕೋಟಿ ಆದಾಯವನ್ನು ತಲುಪುವುದು ನಮ್ಮ ಗುರಿ. ಹೀಗಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಲು, ತಮನ್ನಾರನ್ನೇ ಬ್ರಾಂಡ್ ಅಂಬಾಸಿಡರ್ ಮಾಡಲಾಗಿದೆ. ಹೀಗಂತ ಎಂ.ಬಿ. ಪಾಟೀಲ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.