ಆಗಸ್ಟ್ 3ರಿಂದ ಬಿಜೆಪಿ-ಹಾಗೂ ಜೆಡಿಎಸ್ ಮಾಡಬೇಕಿದ್ದ ಮೈಸೂರು ಪಾದಯಾತ್ರೆಗೆ ಬಹುತೇಕ ಬ್ರೇಕ್ ಬಿದ್ದಿದೆ ಎನ್ನಲಾಗ್ತಿದೆ.. ಮೈಸೂರು ಪಾದಯಾತ್ರೆಗೆ ಜೆಡಿಎಸ್ ನಾಯಕ, ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿಯವರೇ ಅವಿಶ್ವಾಸ ವ್ಯಕ್ತಪಡಿಸಿದ್ದರು. ಮೈಸೂರು ಭಾಗದಲ್ಲಿ ಜೆಡಿಎಸ್ ನಾಯಕರೇ ಹೆಚ್ಚಿದ್ದಾರೆ. ಆದರೂ ನಮ್ಮ ವಿಶ್ವಾಸ ಪಡೆದು ಪಾದಯಾತ್ರೆ ಮಾಡ್ತಿಲ್ಲ ಅಂತ ಹೆಚ್ಡಿಕೆ ಗರಂ ಆಗಿದ್ದರು.
ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಹಾಗೂ ಹೆಚ್.ಡಿ.ಕುಮಾರಸ್ವಾಮಿ ರಹಸ್ಯ ಒಪ್ಪಂದವನ್ನೂ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ದೆಹಲಿಯಲ್ಲಿ ನಡೆದ ಹೆಚ್ಡಿಕೆ ಹಾಗೂ ಸಿದ್ದರಾಮಯ್ಯನವರ ಒಳ ರಾಜಕೀಯ ಒಪ್ಪಂದ ಅರಿತ ಬಿಜೆಪಿ ಪಾದಯಾತ್ರೆಯನ್ನೇ ನಿಲ್ಲಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.
ಬಿಜೆಪಿ ಪಾದಯಾತ್ರೆ ಮಾಡ್ತಿರೋದು ಡಿಕೆಶಿಯನ್ನು ಸಿಎಂ ಮಾಡಲು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಆರೋಪಿಸಿದ್ದರು. ಇದರ ಬೆನ್ನಲ್ಲೇ ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಜೆಡಿಎಸ್ ನಾಯಕ, ಕೇಂದ್ರ ಸಚಿವ ಹೆಚ್ಡಿಕೆ ರಹಸ್ಯ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಮುಡಾದಲ್ಲಿ ಜೆಡಿಎಸ್ ನಾಯಕರೇ ಹೆಚ್ಚಿನ ಸೈಟ್ ಪಡೆದ ಫಲಾನುಭವಿಗಳಾಗಿದ್ದಾರೆ. ಹೀಗಾಗಿ ಜೆಡಿಎಸ್ ಕೂಡ ಸಿದ್ದರಾಮಯ್ಯರನ್ನ ವಿರೋಧಿಸಲು ಹಿಂದೆ ಮುಂದೆ ನೋಡ್ತಿದೆ. ಜೊತೆಗೆ ಪಾದಯಾತ್ರೆಗೆ ಅವಿಶ್ವಾಸ ವ್ಯಕ್ತಪಡಿಸಿರುವ ಹೆಚ್ಡಿ ಕುಮಾರಸ್ವಾಮಿ, ಬಿಜೆಪಿ ಜೊತೆಗಿನ ಬಿರುಕಿನ ಮಾತುಗಳನ್ನಾಡಿದ್ದಾರೆ.
ಮೈಸೂರು ಪಾದಯಾತ್ರೆಗೆ ಜೆಡಿಎಸ್ ನಾಯಕರು ವಿರೋಧಿಸಿದ ಬೆನ್ನಲ್ಲೇ ಬಿಜೆಪಿ ಎಚ್ಚೆತ್ತಿದೆ. ದೋಸ್ತಿ ಸಹಾಯವಿಲ್ಲದೆ ಮೈಸೂರು ನಡಿಗೆ ಬೇಡವೆಂದು ಪಾದಯಾತ್ರೆಯನ್ನೇ ಕ್ಯಾನ್ಸಲ್ ಮಾಡಲು ಬಿಜೆಪಿ ನಿರ್ಧರಿಸಿದೆ ಎಂದು ಉನ್ನತ ಮೂಲಗಳಿಂದ ಗೊತ್ತಾಗಿದೆ.
ಪಾದಯಾತ್ರೆ ರದ್ದಾದ್ರೆ ವಿಜಯೇಂದ್ರ ವಿರೋಧಿ ಬಣದ ಮುಗುಳು ನಗೆ!
ಒಂದು ವೇಳೆ ಮೈಸೂರು ಪಾದಯಾತ್ರೆ ರದ್ದಾದರೆ, ಬಿಜೆಪಿಯಲ್ಲೇ ಒಳಗೊಳಗೇ ನಗುವ ಇನ್ನೊಂದು ಬಣ ಕೂಡ ಇದೆ. ಮೈಸೂರು ಪಾದಯಾತ್ರೆ ರದ್ದಾಗಲೆಂದೇ ಒಂದು ಬಣ ಆಶಿಸುತ್ತಿದೆ. ವಿಜಯೇಂದ್ರ ಅವರ ವಿರೋಧಿಗಳು ಹಾಗೂ ಸೀನಿಯರ್ ಬಿಜೆಪಿ ನಾಯಕರು ಮೀಸೆ ಮರೆಯಲ್ಲಿ ವಿಜಯದ ನಗೆ ಬೀರಲಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್, ಬೊಮ್ಮಾಯಿ, ಸೋಮಣ್ಣ, ಸಿ.ಟಿ.ರವಿ ಇತ್ಯಾದಿ ಘಟನಾನುಘಟಿ ನಾಯಕರ ಮೊಗದಲ್ಲಿ ಮುಗುಳುನಗೆ ಮಿಂಚಲಿದೆ. ಪಾದಯಾತ್ರೆ ಮಾಡಿದ್ರೆ ವಿಜಯೇಂದ್ರ ವರ್ಚಸ್ಸು ಹೆಚ್ಚಲಿದೆ. ಈ ಪಾದಯಾತ್ರೆ ನಿಂತು ವಿಜಯೇಂದ್ರ ವರ್ಚಸ್ಸು ಕುಗ್ಗಲಿ ಎಂದೇ ಇನ್ನೊಂದು ಟೀಂ ಆಸೆಗಣ್ಣಲ್ಲಿ ನೋಡ್ತಿದೆ.