ಮೈಸೂರು: ಹುಲಿ ದಾಳಿಗೆ ಮೈಸೂರಿನಲ್ಲಿ ಮತ್ತೋರ್ವ ವ್ಯಕ್ತಿ ಜೀವ ಕಳೆದುಕೊಂಡಿರುವ ಘಟನೆ ಸರಗೂರು ತಾಲೂಕಿನ ಕುರ್ಣೇಗಾಲ ಕೂಡಗಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಕೊಡಗಿ ಗ್ರಾಮದ ನಿಂಗಯ್ಯ (65) ಹುಲಿ ದಾಳಿಗೆ ಒಳಗಾಗಿ ಮೃತಪಟ್ಟ ವ್ಯಕ್ತಿ.
ಕಾಡಂಚಿನ ಗ್ರಾಮ ಸರಗೂರು ತಾಲ್ಲೂಕಿನ ಕರ್ಣೇಗಾಲದಲ್ಲಿ ನಿಂಗಯ್ಯ ಹಸು ಮೇಯಿಸುತ್ತಿದ್ದಾಗ ಹುಲಿ ದಾಳಿ ಮಾಡಿದ್ದು, ನಿಂಗಯ್ಯ ಸಾವನ್ನಪ್ಪಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಸರಗೂರು ತಾಲ್ಲೂಕಿನಲ್ಲೇ ಐದು ದಿನಗಳ ಅಂತರದಲ್ಲಿ ಎರಡು ಹುಲಿ ದಾಳಿ ಪ್ರಕರಣಗಳು ವರದಿಯಾಗಿದೆ. ಇತ್ತೀಚೆಗೆ ಅಕ್ಟೋಬರ್ 26 ರಂದು ಸರಗೂರು ತಾಲ್ಲೂಕಿನ ಬೆಣ್ಣೆಗೆರೆ ಗ್ರಾಮದ ರೈತ ರಾಜಶೇಖರ್ ಎಂಬುವವರ ಮೇಲೆ ಹುಲಿ ದಾಳಿಯಾಗಿತ್ತು. ಕಳೆದ ಹದಿನೈದು ದಿನದ ಅಂತರದಲ್ಲಿ ಮೂರು ಘಟನೆಗಳು ನಡೆದಿದ್ದು, ಇಬ್ಬರು ಮೃತಪಟ್ಟು ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.


