
ಬೆಂಗಳೂರು: ಒಂದು ಕಾಲದಲ್ಲಿ ಯಾವುದೋ ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ ಅಂದರೆ ಸಾಕು, ಆ ಕಚೇರಿಯಲ್ಲಿ ಭ್ರಷ್ಟ ಅಧಿಕಾರಿಗಳು ಇದ್ರೆ ಅವರಿಗೆ ಅಂದು ಕರಳಾದಿನವಾಗಿತ್ತು.
ರಾಜ್ಯದಲ್ಲಿ ಲೋಕಾಯುಕ್ತ ಸದ್ದು ಮಾಡಿದ್ದು, ನ್ಯಾ.ವೆಂಕಟಾಚಾಲಯ್ಯ ಅವರ ಕಾಲದಲ್ಲಿ ಗ್ರಾಮೀಣ ಮಟ್ಟದಲ್ಲಿ ಕೂಡ ಲೋಕಾಯುಕ್ತ ಅಧಿಕಾರಿಗಳ ದಾಳಿ ನಡೆದಿತ್ತು. ನ್ಯಾ.ಸಂತೋಷ್ ಹೆಗಡೆ ಅವರ ಕಾಲದಲ್ಲಿ ಕರ್ನಾಟಕದ ಲೋಕಾಯುಕ್ತ ಹೆಸರು ದೇಶ ವಿದೇಶಗಳ ಮಟ್ಟದಲ್ಲಿ ಕೂಡ ಸದ್ದು ಮಾಡಿತ್ತು. ಬೇಲಿಕೆರೆ ಅಕ್ರಮ ಅದಿರು ಸಾಗಾಟ ಪ್ರಕರಣದಲ್ಲಿ ಘಟಾನುಘಟಿ ರಾಜಕಾರಣಿಗಳನ್ನು ಜೈಲಿಗಟ್ಟಿದ್ದರು, ಭ್ರಷ್ಟಾಚಾರ ಪ್ರಕರಣ, ಸರ್ಕಾರದ ಬೊಕ್ಕಸಕ್ಕೆ ಕತ್ತರಿ ಹಾಕಿದವರವನ್ನು ಹೆಡಮುರಿಕಟ್ಟಿದ್ದರು.
ಉದಾಹರಣೆಗೆ ಗಾಲಿ ಜನಾರ್ಧನರೆಡ್ಡಿ, ವೈ. ಸಂಪಗಿ, ಯಡಿಯೂರಪ್ಪ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕಟ್ಟಾ ಜಗದೀಶ್, ಆನಂದ್ ಸಿಂಗ್, ನಾಗೇಂದ್ರ ಸೇರಿದಂತೆ ಅನೇಕರನ್ನು ಕಂಬಿ ಎಣಿಸುವಂತೆ ಮಾಡಿದ್ದರು. ಅಂತಹ ಲೋಕಾಯುಕ್ತ ಸಂಸ್ಥೆಯ ಅಧಿಕಾರವನ್ನು ಕಸಿದುಕೊಂಡು, ಎಸಿಬಿಯನ್ನು ಸ್ಥಾಪಿಸಿ ಅದಕ್ಕೆ ಆನೆ ಬಲ ತುಂಬವ ಮೂಲಕ ಲೋಕಾಯುಕ್ತರ ಬಲವನ್ನು ಕುಗ್ಗಿಸಿದ್ದರು.
ಅಂದು ಲೋಕಾಯುಕ್ತ ಬಲ ಕಿತ್ತು ಎಸಿಬಿಗೆ ಆನೆ ಬಲ ತಂದು ಕೊಟ್ಟಿದ್ದರು. ಇಂದು ಅದೇ ಲೋಕಾಯುಕ್ತ ಅಂಗಳದಲ್ಲಿ ಸಿದ್ದರಾಮಯ್ಯ ಮೇಲಿನ ಮುಡಾ ಹಗರಣ ಪ್ರಕರಣ ಬಂದಿದ್ದು, ತಾವೇ ಮುಗಿಸಲು ಹೋಗಿದ್ದ ಲೋಕಾಯುಕ್ತ ಬಲೆಗೆ ಸಿಲುಕಿಕೊಂಡರು. ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯನ್ನು ಲೋಕಾಯುಕ್ತ ಸಂಸ್ಥೆಯ ತನಿಖೆಯ ಮೂಲಕ ಮುಗಿಸುತ್ತಾ.? ಅನ್ನೋದು ಸದ್ಯ ರಾಜಕೀಯ ವಲಯದಲ್ಲಿ ಜೋರಾಗಿ ಚರ್ಚೆಗೆ ಕಾರಣವಾಗಿದೆ.




