ಉಡುಪಿ: ಪ್ರಧಾನಿ ನರೇಂದ್ರ ಮೋದಿ ಕಡಲನಗರಿ ಉಡುಪಿಗೆ ಆಗಮಿಸಿದ್ದು, ಮೋದಿಗೆ ಹೂ ಮಳೆ ಸುರಿಸುವ ಮೂಲಕ ಜನರು ಅದ್ದೂರಿಯಾಗಿ ಸ್ವಾಗತ ಕೊರಿದ್ದಾರೆ.. ಬನ್ನಂಜೆ ನಾರಾಯಣ ಗುರು ವೃತ್ತದಿಂದ ಕಲ್ಸಂಕದವರಗೆ ಮೋದಿ ರೋಡ್ ಶೋ ನಡೆದಿದೆ.
ರೋಡ್ ಶೋ ರಸ್ತೆಯುದ್ದಕ್ಕೂ ಜನರು ನಿಂತಿದ್ದು, ಮೋದಿ ಅವರಿಗೆ ಜೈಕಾರ ಹಾಕಿದ್ದಾರೆ. ಪ್ರಧಾನಮಂತ್ರಿ ಅವರು ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದು ಅಲ್ಲಿ ವಿದ್ಯಾರ್ಥಿಗಳು, ಸಾಧು-ಸಂತರು, ವಿದ್ವಾಂಸರು ಮತ್ತು ವಿವಿಧ ವರ್ಗಗಳ ನಾಗರಿಕರು ಸೇರಿದಂತೆ 100,000 ಮಂದಿ ಭಾಗವಹಿಸುವ ʻಲಕ್ಷ ಕಂಠ ಗೀತಾ ಪಾರಾಯಣʼ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಶ್ರೀಮದ್ ಭಗವದ್ಗೀತೆಯ ಸಾಮೂಹಿಕ ಪಾರಾಯಣಕ್ಕೆ ಪ್ರಧಾನಮಂತ್ರಿ ಸಾಕ್ಷಿಯಾಗಲಿದ್ದಾರೆ.
ಪ್ರಧಾನಮಂತ್ರಿ ಅವರು ಶ್ರೀ ಕೃಷ್ಣ ದೇಗುಲದ ಗರ್ಭಗುಡಿಯ ಮುಂಭಾಗದಲ್ಲಿರುವ ʻಸುವರ್ಣ ತೀರ್ಥ ಮಂಟಪʼವನ್ನು ಉದ್ಘಾಟಿಸಲಿದ್ದಾರೆ. ಜೊತೆಗೆ, ಕನಕದಾಸರು ಭಗವಾನ್ ಶ್ರೀಕೃಷ್ಣನ ದಿವ್ಯ ದರ್ಶನವನ್ನು ಪಡೆದ ಸ್ಥಳವೆಂದು ಎಂದು ನಂಬಲಾದ ಪವಿತ್ರ ಕಿಟಕಿಯಾದ ʻಕನಕನ ಕಿಂಡಿʼಗೆ ಕನಕ ಕವಚವನ್ನು ಸಮರ್ಪಿಸಲಿದ್ದಾರೆ. ಉಡುಪಿಯ ಶ್ರೀ ಕೃಷ್ಣ ಮಠವನ್ನು 800 ವರ್ಷಗಳ ಹಿಂದೆ ವೇದಾಂತದ ದ್ವೈತ ತತ್ವಶಾಸ್ತ್ರದ ಸಂಸ್ಥಾಪಕರಾದ ಶ್ರೀ ಮಧ್ವಾಚಾರ್ಯರು ಸ್ಥಾಪಿಸಿದರು.


