ಬೆಂಗಳೂರು: ಯೋಗೇಶ್ವರ್ ಅವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ಚನ್ನಪಟ್ಟಣದಲ್ಲಿ ದುರ್ಬಲವೆಂದು ಡಿಕೆ ಶಿವಕುಮಾರ್ ಅವರು ಒಪ್ಪಿಕೊಂಡಂತಾಗಿದೆ ಎಂದು ರಾಜ್ಯ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಅವರು ಟಾಂಗ್ ಕೊಟ್ಟಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿಂದು ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯೋಗೇಶ್ವರ್ ಅವರು ಕಾಂಗ್ರೆಸ್ಸಿಗೆ ಹೋದುದರಿಂದ ಒಂದಂತೂ ನಾವು ಊಹಿಸಬಹುದು. 136 ಶಾಸಕರಿದ್ದೂ, ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಅವರಂತಹ ಪ್ರಬಲ ನಾಯಕರನ್ನು ಹೊಂದಿದ ಕಾಂಗ್ರೆಸ್ ಪಕ್ಷ ಚನ್ನಪಟ್ಟಣದಲ್ಲಿ ದೌರ್ಬಲ್ಯ ಒಪ್ಪಿಕೊಂಡಂತಾಗಿದೆ ಎಂದು ತಿಳಿಸಿದರು.
ನಿನ್ನೆ ಮೊನ್ನೆಯವರೆಗೂ ನಾನೇ ಕ್ಯಾಂಡಿಡೇಟ್ ಎಂದು ಡಿ.ಕೆ ಶಿವಕುಮಾರ್ ಹೇಳುತ್ತಿದ್ದರು. ಪೂರ್ವತಯಾರಿ ಮಾಡಿ ಓಡಾಡುತ್ತಿದ್ದರು. ಡಿ.ಕೆ ಸುರೇಶ್ ಅಲ್ಲಿ ಅಭ್ಯರ್ಥಿ ಎಂದು ಬಹಳ ಜನ ಅಂದುಕೊಂಡಿದ್ದರು. ಅಲ್ಲಿ ಯೋಗೇಶ್ವರ್ಗೆ ಟಿಕೆಟ್ ಕೊಟ್ಟು ಅಸಹಾಯಕತೆ ತೋರಿಸುತ್ತಾರೋ ಅಥವಾ ಯೋಗೇಶ್ವರ್ ಜೊತೆಗಿಟ್ಟುಕೊಂಡು ಡಿ.ಕೆ ಸುರೇಶ್ ಅಭ್ಯರ್ಥಿ ಆಗುತ್ತಾರೋ ನೋಡಬೇಕಿದೆ. ಆದರೆ, ಕಾಂಗ್ರೆಸ್ ತಾನು ಚನ್ನಪಟ್ಟಣದಲ್ಲಿ ದುರ್ಬಲ ಎಂದು ಒಪ್ಪಿಕೊಂಡಂತಾಗಿದೆ ಎಂದು ಸಿ.ಟಿ ರವಿ ತಿಳಿಸಿದರು.
ಯೋಗೇಶ್ವರ್ ಅವರು ಮಹತ್ವಾಕಾಂಕ್ಷೆ ಇಟ್ಟುಕೊಂಡ ರಾಜಕಾರಣಿ. ಸುದೀರ್ಘ ಅವಧಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ವಿರೋಧಿಸಿ ರಾಜಕಾರಣ ಮಾಡಿದವರು. ಡಿ.ಕೆ ಶಿವಕುಮಾರ್ ಮತ್ತು ಅವರ ನಡುವಿನ ಶತ್ರುತ್ವ ಇವತ್ತು ನಿನ್ನೆಯದಲ್ಲ. ಹುಲಿ ಬೋನಿಗೆ ಹೋಗಿದ್ದಾರೆ. ಒಂದೋ ಹುಲಿಯನ್ನು ಮಣಿಸಬೇಕು. ಇಲ್ಲವೇ ಹುಲಿಗೆ ಬಲಿ ಆಗಬೇಕು ಎಂದು ತಿಳಿಸಿದರು.